ಪಾಂಡವಪುರ: ತಾಲ್ಲೂಕಿನ ಚಿನಕುರುಳಿಯ ಮುಖ್ಯರಸ್ತೆಯಲ್ಲಿರುವ ಹೋಟೆಲೊಂದಕ್ಕೆ ಮೈಸೂರಿನಿಂದ ಕೋಳಿ ಮಾಂಸ ಸರಬರಾಜು ಮಾಡುತ್ತಿದ್ದ ವ್ಯಕ್ತಿಯನ್ನು ತಡೆದ ಕೆಲವ್ಯಕ್ತಿಗಳು, ಕೆಟ್ಟ ವಾಸನೆ ಬರುತ್ತಿರುವ ಕುರಿತು ಪ್ರಶ್ನಿಸಿದ ಘಟನೆ ಗಾಳಿ ಸುದ್ದಿಯಾಗಿ ಸಾರ್ವಜನಿಕರಲ್ಲಿ ಸಾಕಷ್ಟು ಗಲಿಬಿಲಿ ಉಂಟು ಮಾಡಿತ್ತು.
ಪಟ್ಟಣದ ಮುಖ್ಯರಸ್ತೆಯಲ್ಲಿನ ಚಿಕನ್ ಬಿರಿಯಾನಿ ಹೋಟೆಲ್ನಲ್ಲಿ ನಾಯಿ ಮಾಂಸದ ಬಿರಿಯಾನಿ ಮಾರಾಟ ಮಾಡಲಾಗುತ್ತಿದೆ ಎಂದು ಪುಕಾರು ಹುಟ್ಟಿಕೊಂಡು ಜನರು ಹೋಟೆಲ್ ಮುಂದೆ ಜಮಾಯಿಸಿ ಗಲಾಟೆ ನಡೆಸಿದರೆನ್ನಲಾಗಿದೆ. ಚಿನಕುರುಳಿ ಪೊಲೀಸರು ಮದಿನ ಹೋಟೆಲ್ನ ಮಾಲೀಕನನ್ನು ವಿಚಾರಣೆ ನಡೆಸಿದ್ದಾರೆ. ವಾಸ್ತವದಲ್ಲಿ ಮೈಸೂರಿನಿಂದ ಚಿನಕುರುಳಿಗೆ ಕೋಳಿ ಮಾಂಸದ ಕೆಲ ಭಾಗಗಳನ್ನು ಸರಬರಾಜು ಮಾಡುವ ವೇಳೆ ಮಾಂಸ ವಾಸನೆ ಬಂದಿದ್ದು, ಇದು ತಿನ್ನಲು ಯೋಗ್ಯವೇ ಇಲ್ಲವೇ ಎಂಬುದನ್ನು ಪರೀಕ್ಷೆಗೆ ಕಳಿಸಿ ಎಂದು ಒಂದು ಗುಂಪು ಆಗ್ರಹಿಸಿತು.
ಅಲ್ಲದೆ, ಗಲಾಟೆ ಮಾಡಿ ಹೋಟೆಲ್ನ ಬಾಗಿಲು ಮುಚ್ಚಿಸಿತು. ಬಳಿಕ ಪೊಲೀಸರು ಮಾಂಸದ ಬ್ಯಾಗ್ಗಳನ್ನು ಪರೀಕ್ಷೆಗೆ ಕಳಿಸಿತು. ಅಷ್ಟರಲ್ಲಿ ಸಾರ್ವಜನಿಕ ವಲಯದಲ್ಲಿ ಹೊಟೆಲ್ನಲ್ಲಿ ನಾಯಿ ಮಾಂಸ ಮಾರಾಟ ಮಾಡಲಾಗುತ್ತಿದೆ ಎಂಬ ಅಪಪ್ರಚಾರಗಳು ನಡೆದು, ಪೊಲೀಸರು ಇದು ನಾಯಿ ಮಾಂಸವಲ್ಲ ಕೋಳಿ ಮಾಂಸದ ಭಾಗಗಳು ಎಂದು ಸ್ಪಷ್ಟಪಡಿಸಿದ್ದಾರೆ.
ಈ ಕುರಿತು ಯಾವುದೇ ಪ್ರಕರಣ ದಾಖಲಾಗಿಲ್ಲ ಎಂದು ತಿಳಿದುಬಂದಿದೆ.