ಬೆಂಗಳೂರು: ನಾವು ಮುಂಚೂಣಿ ನಾಯಕರಾಗಿದ್ದೆವು. ಈಗ ಬೇರೆ ಕುದುರೆಗಳು ಬಂದಿವೆ. ಇದೊಂದು ರೇಸ್. ಈಗ ಅವರ ಕುದುರೆಗಳು ಮುಂದೆ ಇವೆ ಎಂದು ವಿಧಾನಪರಿಷತ್ ಸದಸ್ಯ ಅಬ್ದುಲ್ ಜಬ್ಬಾರ್ ಹೇಳಿದ್ದಾರೆ.
ಕಾಂಗ್ರೆಸ್ ಪಕ್ಷದಿಂದ ಅಮಾನತಾದ ಬಳಿಕ ಮಾತನಾಡಿದ ಅವರು, ಯಾಕೆ ಈ ನಿರ್ಧಾರ ತೆಗೆದುಕೊಂಡರು ಎಂಬುದು ಗೊತ್ತಿಲ್ಲ. 40 ವರ್ಷದಿಂದ ನಾನು ಪಕ್ಷದಲ್ಲಿದ್ದೇನೆ. ಮೂರನೇ ಬಾರಿಗೆ ಎಂಎಲ್ಸಿ ಆಗಿದ್ದೇನೆ. ಕ್ಷೇತ್ರದಲ್ಲಿ ಸಾಕಷ್ಟು ಅಸಮಾಧಾನವಿತ್ತು. ಜಮೀರ್ ಬಂದ ಮೇಲೆ ಕೊಂಚ ಕಡಿಮೆಯಾಯಿತು ಎಂದು ಹೇಳಿದರು.
ಅಮಾನತು ಬಗ್ಗೆ ಇಲ್ಲಿಯವರೆಗೂ ಯಾವುದೇ ಮಾಹಿತಿ ಬಂದಿಲ್ಲ. ಬಂದ ನಂತರ ಉತ್ತರ ಕೊಡುತ್ತೇನೆ. ನಿಮ್ಮ ಮುಖಾಂತರವೇ ಗೊತ್ತಾಗಿದೆ. ಅಧ್ಯಕ್ಷರು ಯಾವುದು ಅಶಿಸ್ತು, ಯಾರು ಕೆಲಸ ಮಾಡಿಲ್ಲ ಎಂದು ಹೇಳಲಿ ಎಂದು ಹೇಳಿದರು.





