ಮಳವಳ್ಳಿ : ಹಣ ಕಟ್ಟಲಿಲ್ಲ ಎಂಬ ಕಾರಣಕ್ಕೆ 7 ವರ್ಷದ ಬಾಲಕಿಯನ್ನು ಅಪಹರಣ ಮಾಡಿ ತಲೆಮರೆಸಿಕೊಂಡಿದ್ದ ಬಜಾಜ್ ಮೈಕ್ರೋ ಫೈನಾನ್ಸ್ ಕಂಪೆನಿಯ ಸೆಂಟರ್ ಮ್ಯಾನೇಜರ್ನನ್ನು ಬೆಳಕವಾಡಿಯ ಪೊಲೀಸರು ಬಂಧಿಸಿದ್ದಾರೆ.
ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ತಾಲ್ಲೂಕಿನ ಸಿಲ್ಕರ್ ಪುರ ಗ್ರಾಮದ ಪಿ.ಅಜಿತ್ (37) ಎಂಬವನೇ ಬಂಧಿತ ಆರೋಪಿ.
ತಾಲ್ಲೂಕಿನ ಪೂರಿಗಾಲಿ ಗ್ರಾಮದ ಮಂಗಳಮ್ಮ ಎಂಬವರು ತಮ್ಮ ಪುತ್ರ ನವೀನ್ ಎಂಬವರಿಗೆ ಟಿ. ನರಸೀಪುರ ಬಜಾಜ್ ಪಿನ್ ಸರ್ವ್ ಮೈಕ್ರೋ ಫೈನಾನ್ಸ್ ಕಂಪೆನಿಯಿಂದ 30 ಸಾವಿರ ರೂ. ಸಾಲ ತೆಗೆದುಕೊಟ್ಟಿದ್ದರು. ಪ್ರತಿ ತಿಂಗಳು ಕಂತಿನ ಹಣವನ್ನು ನವೀನ್ ಕಟ್ಟುತ್ತಿದ್ದರು. ಮೇ ತಿಂಗಳ ಕಂತನ್ನು ಕಟ್ಟಿರಲಿಲ್ಲ. ಸಾಲ ವಸೂಲಿಗೆ ಮನೆಗೆ ಬಂದ ಮೈಕ್ರೋ ಫೈನಾನ್ಸ್ ಸೆಂಟರ್ ಮ್ಯಾನೇಜರ್ ಪಿ. ಅಜಿತ್ ಮನೆಯಲ್ಲಿ ಯಾರೂ ಇಲ್ಲದ್ದನ್ನು ಕಂಡು ಪೋಷಕರ ಅನುಮತಿ ಇಲ್ಲದೆ ಬಲವಂತವಾಗಿ ಜೊತೆಯಲ್ಲಿ ಸಾಲ ಪಡೆದವರನ್ನು ತೋರಿಸುವಂತೆ ನವೀನ್ ಅವರ 7 ವರ್ಷದ ಮಗಳನ್ನು ಕರೆದುಕೊಂಡು ಹೋಗಿದ್ದನು.
ಇದನ್ನ ಓದಿದ್ರಾ.. ಮೈಕ್ರೋ ಫೈನಾನ್ಸ್ ಸಿಬ್ಬಂದಿಗಳಿಂದ ಬಾಲಕಿ ಕರೆದೊಯ್ದ ಪ್ರಕರಣ: ಎಫ್ಐಆರ್ ದಾಖಲು – Andolana
ಈ ಸಂಬಂಧವಾಗಿ ಕಳೆದ ಜೂ.20 ರಂದು ಬಸವಶೆಟ್ಟಿ ಎಂಬವರು ಬೆಳಕವಾಡಿ ಪೊಲೀಸರಿಗೆ ದೂರು ನೀಡಿದ್ದರು. ಆರೋಪಿ ಪತ್ತೆಗಾಗಿ ಅಪರ ಪೊಲೀಸ್ ಅಧೀಕ್ಷಕರಾದ ಸಿ.ಇ. ತಿಮ್ಮಯ್ಯ, ಗಂಗಾಧರಸ್ವಾಮಿ, ಮಳವಳ್ಳಿ ಉಪವಿಭಾಗದ ಪೊಲೀಸ್ ಉಪ ಅಧೀಕ್ಷಕ ವಿ.ಕೃಷ್ಣಪ್ಪ ಅವರ ಮಾರ್ಗದರ್ಶನದಲ್ಲಿ ಹಲಗೂರು ವೃತ್ತ ನಿರೀಕ್ಷಕ ಬಿ.ಎಸ್. ಶ್ರೀಧರ್ ನೇತೃತ್ವದಲ್ಲಿ ಬೆಳಕವಾಡಿ ಪೊಲೀಸ್ ಠಾಣಾ ಪಿಎಸ್ಐ ಬಿ.ವಿ. ಪ್ರಕಾಶ್, ಕಿರುಗಾವಲು ಪೊಲೀಸ್ ಠಾಣಾ ಪಿಎಸ್ಐ ರವಿಕುಮಾರ್, ಸಿಬ್ಬಂದಿಗಳಾದ ನಾಗೇಂದ್ರ, ರಿಯಾಜ್ ಪಾಷ, ನಿಂಗರಾಜು, ರವಿಕಿರಣ್, ಲೋಕೇಶ್ ಮತ್ತು ಸಿ.ಪಿ.ಸಿ ಯವರಾದ ಸಿದ್ದರಾಜು, ಶಿವಕುಮಾರ್, ಸುಜನ್ ಮನೋಹರ್ ಶರ್ಮ, ಮಹೇಶ, ಅನಿನಾಶ್, ಮಧುಕಿರಣ್, ಮಲ್ಲಿಕಾರ್ಜುನ ಚುಳುಕಿ ಅವರ ತಂಡ ರಚಿಸಲಾಗಿತ್ತು.
ಸದರಿ ತಂಡವು ಜೂ.20 ರಂದು ಆರೋಪಿ ಪಿ.ಅಜಿತ್ನನ್ನು ತಮಿಳುನಾಡಿನ ಬಣ್ಣಾರಿ ಅಮ್ಮ ದೇವಸ್ಥಾನದ ಬಳಿ ಪತ್ತೆ ಮಾಡಿ ವಶಕ್ಕೆ ಪಡೆದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾದ ಪೊಲೀಸ್ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ಜಿಲ್ಲಾ ಪೊಲೀಸ್ ಅಧೀಕ್ಷಕ ಮಲ್ಲಿಕಾರ್ಜುನ ಬಾಲದಂಡಿ ಅವರು ಅಭಿನಂದಿಸಿದ್ದಾರೆ.





