ಮಂಡ್ಯ : ಪ್ರಧಾನಿ ನರೇಂದ್ರ ಮೋದಿ ಅವರು ನಾಳೆ (ಏಪ್ರಿಲ್ 15) ಜಿಲ್ಲೆಯ ನಾಗಮಂಗಲ ತಾಲ್ಲೂಕಿನ ಆದಿಚುಂಚನಗಿರಿ ಶ್ರೀಕ್ಷೇತ್ರಕ್ಕೆ ಮೊದಲ ಬಾರಿಗೆ ಭೇಟಿ ನೀಡುತ್ತಿದ್ದು, ಅವರನ್ನು ಸ್ವಾಗತಿಸಲು ಕ್ಷೇತ್ರ ಸಜ್ಜಾಗಿದೆ.
ಪ್ರಧಾನಿ ಮೋದಿ ಅವರು ಆದಿಚುಂಚನಗಿರಿ ಮಠದಲ್ಲಿ 71ನೇ ಪೀಠಾಧಿಪತಿ ಭೈರವೈಕ್ಯ ಬಾಲಗಂಗಾಧರನಾಥ ಸ್ವಾಮೀಜಿಯವರ ಗದ್ದುಗೆಯ ‘ಗುರು ಭೈರವೈಕ್ಯ ಮಂದಿರ’ವನ್ನು ಉದ್ಘಾಟಿಸಲಿದ್ದಾರೆ. ಅಲ್ಲದೆ, ಅಲ್ಲಿ ನಡೆಯುವ ಬಾಲಗಂಗಾಧರನಾಥ ಸ್ವಾಮೀಜಿಯವರ ವಿಗ್ರಹ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲೂ ಭಾಗವಹಿಸುವರು. ನಂತರ ಬಿಜಿಎಸ್ ಸ್ಟೇಡಿಯಂನಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
ಭೈರವೈಕ್ಯ ಬಾಲಗಂಗಾಧರನಾಥ ಸ್ವಾಮೀಜಿ, ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿ, ಪ್ರಧಾನಿ ಮೋದಿ ಅವರ ಭಾವಚಿತ್ರವುಳ್ಳ ಕಟೌಟ್ಗಳು, ಕೇಸರಿ ಬಾವುಟಗಳು ರಾರಾಜಿಸುತ್ತಿವೆ. ವಿದ್ಯುತ್ ದೀಪಾಲಂಕಾರದಿಂದ ಸಹ ಕ್ಷೇತ್ರ ಕಂಗೊಳಿಸುತ್ತಿದೆ.
ಕಾರ್ಯಕ್ರಮಕ್ಕೆ ಸುಮಾರು ಒಂದು ಲಕ್ಷ ಜನರು ಭಾಗವಹಿಸುವ ನಿರೀಕ್ಷೆ ಇದೆ. ಪ್ರಧಾನಿಯ ಭೇಟಿಯ ಹಿನ್ನೆಲೆಯಲ್ಲಿ ಮಂಡ್ಯ ಜಿಲ್ಲಾಧಿಕಾರಿ ಕುಮಾರ್ ಅವರು ಸುರಕ್ಷತೆ, ಪ್ರೋಟೋಕಾಲ್ ಮತ್ತು ಲಾಜಿಸ್ಟಿಕ್ ವ್ಯವಸ್ಥೆಗಳ ಬಗ್ಗೆ ವಿಮರ್ಶಾ ಸಭೆ ನಡೆಸಿದ್ದಾರೆ.
ಎಸ್ಪಿಜಿ ಮತ್ತು ರಾಜ್ಯ ಪೊಲೀಸ್ ಪಡೆಗಳು ಬಿಗಿ ಭದ್ರತೆ ಒದಗಿಸಿವೆ. ಕ್ಷೇತ್ರದ ಸೂತ್ತಲೂ ಇಂಚಿಂಚೂ ತಪಾಸಣೆ ನಡೆಸಿ ಮುಂಜಾತ್ರತೆ ವಹಿಸಿದ್ದಾರೆ. ಇದಕ್ಕಾಗಿ 10 ತಂಡಗಳನ್ನು ನಿಯೋಜಿಸಲಾಗಿದೆ. ಹೆಲಿಕಾಪ್ಟರ್ ಲ್ಯಾಂಡಿಗ್ ಹಾಗೂ ಟೇಕ್ಆಫ್ ವೇಳೆ ಯಾವುದೇ ಸಣ್ಣ ಪುಟ್ಟ ಅಡಚಣೆಯಾಗದಂತೆ ಜಿಲ್ಲಾಡಳಿತ ಹಾಗೂ ಎಸ್ಪಿಜಿ ಕಟ್ಟೆಚ್ಚರ ವಹಿಸಿದೆ.





