ಮಹೇಂದ್ರ ಹಸಗೂಲಿ
ಗುಂಡ್ಲುಪೇಟೆ: ತಾಲ್ಲೂಕಿನ ಗುಂಡ್ಲುಪೇಟೆ- ಕೇರಳ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ಕೇರಳ ಮೂಲದ ಅಶ್ರಫ್ ಎಂಬವರು ಮಾಡಿರುವ ಒಂದು ಎಕರೆ ದ್ರಾಕ್ಷಿ ತೋಟ ಹಾಗೂ ಚೆಂಡುಮಲ್ಲಿಗೆ ತೋಟವನ್ನು ವೀಕ್ಷಣೆ ಮಾಡಲು ಪ್ರವಾಸಿಗರು ಸಾವಿರಾರು ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ.
ತೋಟದಲ್ಲಿ ವಿವಿಧ ಜಾತಿಗಳ ಹಣ್ಣಿನ ಗಿಡಗಳು, ದ್ರಾಕ್ಷಿ ತೋಟ, ಚೆಂಡುಮಲ್ಲಿಗೆ ಇದ್ದು, ಜನರ ಅಕರ್ಷಣೆಯಾಗಿದೆ. ಅಲ್ಲದೆ ಹಸುವಿನ ಫಾರಂ ನಿರ್ಮಾಣ ಮಾಡುತ್ತಿದ್ದು, ಪ್ರವಾಸಿಗರಿಗೆ ಉತ್ತಮ ವಾತಾವರಣ ಒದಗಿಸುವ ಉದ್ದೇಶವಿದೆ ಎಂದು ಫಾರಂ ಮಾಲೀಕ ಅಶ್ರಫ್ ತಿಳಿಸಿದರು.
ಪ್ರತಿನಿತ್ಯ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ಫೋಟೋ, ಸೆಲಿಗೆ ಮುಗಿಬಿದ್ದಿದ್ದು ರೀಲ್ಸ್ ಮಾಡಲು ಆಗಮಿಸುತ್ತಿದ್ದಾರೆ. ನೂರಾರು ವಾಹನಗಳಲ್ಲಿ ಜನರು ಬರುವುದರಿಂದ ಪ್ರವೇಶ ಶುಲ್ಕದ ಮೂಲಕವೇ ಸಾವಿರಾರು ರೂ. ಆದಾಯ ಗಳಿಸುತ್ತಿದ್ದಾರೆ.
ಸ್ಥಳೀಯರಿಗೆ ಉದ್ಯೋಗ ಸೃಷ್ಟಿ: ನಮ್ಮ ತೋಟಕ್ಕೆ ಸಾವಿರಾರು ಪ್ರವಾಸಿಗರು ಬರುತ್ತಿದ್ದು, ತೋಟದ ಕೆಲಸಕ್ಕೆ ಸ್ಥಳೀಯ ಕೆಲಸಗಾರರನ್ನು ಬಳಸಿಕೊಂಡಿದ್ದೇವೆ. ಅವರಿಗೆ ಉದ್ಯೋಗ ಸಿಕ್ಕಿದೆ. ಅಲ್ಲದೆ ಐಸ್ ಕ್ರೀಂ, ಹಣ್ಣಿನ ವ್ಯಾಪಾರ,ಎಳನೀರು ಸೇರಿದಂತೆ ಎಲ್ಲಾ ರೀತಿಯ ಮಾರಾಟ ಮಾಡಲು ಉಚಿತವಾಗಿ ಅವಕಾಶ ನೀಡಿದ್ದು, ಇದರಿಂದ ಸಣ್ಣ ಪ್ರಮಾಣದ ಸ್ಥಳೀಯ ವ್ಯಾಪಾರಸ್ಥರಿಗೆ ಅನುಕೂಲವಾಗಿದೆ. ತೋಟದ ಒಳಗೆ ಪಾರ್ಕಿಂಗ್ ವ್ಯವಸ್ಥೆ ಮಾಡಿದ್ದು ಬರುವ ಪ್ರವಾಸಿಗಳು ತೋಟ ನೋಡಿ ಸಂತಸ ವ್ಯಕ್ತಪಡಿಸುತ್ತಿದ್ದಾರೆ.
ಅಶ್ರಫ್, ಫಾರಂ ಮಾಲೀಕ


