ಹನೂರು : ಕೆಲಸಕ್ಕೆ ಹೋಗಿ ವಾಪಸ್ ಬರುವಾಗ ಮಳೆಯ ನೀರಿನಲ್ಲಿ ಕೊಚ್ಚಿ ಹೋಗಿ ಗಾರೆ ಕಾರ್ಮಿಕರೊಬ್ಬರು ಮೃತಪಟ್ಟಿರುವ ಘಟನೆ ಹನೂರು ಪಟ್ಟಣ ಹೊರವಲಯದಲ್ಲಿ ನಡೆದಿದೆ.
ಹನೂರು ಪಟ್ಟಣದ ಅಂಬೇಡ್ಕರ್ ಬೀದಿ ನಿವಾಸಿ ರಾಜಣ್ಣ (60) ಮೃತಪಟ್ಟವರು.
ಘಟನೆ ವಿವರ
ರಾಜಣ್ಣ ಅವರು ಸೆ.16 ರಂದು ಬೆಳಿಗ್ಗೆ 8 ಗಂಟೆಗೆ ಮಂಗಲ ಗ್ರಾಮಕ್ಕೆ ಗಾರೆ ಕೆಲಸಕ್ಕೆಂದು ಹೋಗಿದ್ದರು. ರಾತ್ರಿಯಾದರೂ ಮನೆಗೆ ಬಾರದಿದ್ದರಿಂದ ಕುಟುಂಬಸ್ಥರು ಪಟ್ಟಣದಾದ್ಯಂತ ಹುಡುಕಾಟ ನಡೆಸಿದ್ದಾರೆ.
ಸೆ.17 ರ ಮುಂಜಾನೆ 1 ರಿಂದ 6 ಗಂಟೆಯವರೆಗೆ ಸುರಿದ ಭಾರಿ ಮಳೆಯಿಂದಾಗಿ ಹನೂರು-ಕೊಳ್ಳೇಗಾಲ ಮುಖ್ಯರಸ್ತೆಯ ಪೊಲೀಸ್ ವಸತಿ ಗೃಹದ ಮುಂಭಾಗದ ಹಳ್ಳದಲ್ಲಿ ಅಪಾರ ಪ್ರಮಾಣದ ನೀರು ಹರಿಯುತ್ತಿತ್ತು. ಕೆಲಸ ಮುಗಿಸಿ ನಡೆದುಕೊಂಡು ಬರುತ್ತಿದ್ದ ರಾಜಣ್ಣ ಅವರು ನೀರಿನ ರಭಸಕ್ಕೆ ಸಿಲುಕಿ ಕೊಚ್ಚಿ ಹೋಗಿ ಹಳ್ಳದ ಪೊದೆಯಲ್ಲಿ ಸಿಲುಕಿ ಮೃತಪಟ್ಟಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಹನೂರು ಪೊಲೀಸ್ ವಸತಿ ಗೃಹದ ಸಮೀಪದ ಕೊರಕಲು ಹಳ್ಳದಲ್ಲಿ ಶವ ಸಿಲುಕಿರುವುದನ್ನು ಕಂಡ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ತೆರಳಿದ ಕುಟುಂಬಸ್ಥರು ಮೃತದೇಹವನ್ನು ಗುರುತಿಸಿದ್ದಾರೆ.
ಮೃತದೇಹವನ್ನು ಹನೂರು ಪ್ರಾಥಮಿಕ ಆರೋಗ್ಯ ಕೇಂದ್ರದ ಶವಾಗಾರಕ್ಕೆ ರವಾನಿಸಲಾಗಿದ್ದು, ಈ ಕುರಿತು ಮೃತರ ಪುತ್ರ ಮಹೇಶ್ ಕುಮಾರ್ ಅವರು ಹನೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.




