Mysore
23
overcast clouds

Social Media

ಸೋಮವಾರ, 18 ಮೇ 2026
Light
Dark

ಇಳಿಜಾರಿನಲ್ಲಿ ಬಸ್‌ ಬ್ರೇಕ್‌ ಫೇಲ್ಯೂರ್‌ ; ಸಾರಿಗೆ ಸಂಸ್ಥೆ ವಿರುದ್ಧ ಸ್ಥಳೀಯರ ಆಕ್ರೋಶ

ಹನೂರು: ಮಲೆ ಮಹದೇಶ್ವರ ಬೆಟ್ಟದ ಇಳಿಜಾರಿನಲ್ಲಿ ಬಸ್ ದುರಂತ ಭಾನುವಾರ ನಡೆದಿದ್ದು, ಸಾರಿಗೆ ಸಂಸ್ಥೆ ಅವ್ಯವಸ್ಥೆಗೆ ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ.

ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದಿಂದ ಮೈಸೂರಿನತ್ತ ತೆರಳುತ್ತಿದ್ದ ಬಸ್ ನಲ್ಲಿ ಬ್ರೇಕ್ ಫೇಲ್ಯೂರ್ ಆಗಿದ್ದು ಇಳಿಜಾರಿನಲ್ಲಿ ಚಾಲಕ ಗಣೇಶ್ ಸಮಯ ಪ್ರಜ್ಞೆ ಮೆರೆದಿದ್ದಾರೆ.

ಸಾರಿಗೆ ಸಂಸ್ಥೆ ಬಸ್ ನಲ್ಲಿ 26 ಮಂದಿ ಪುರುಷ ಪ್ರಯಾಣಿಕರು, 46 ಮಂದಿ ಮಹಿಳಾ ಪ್ರಯಾಣಿಕರಿದ್ದರು. ಬೆಟ್ಟದಿಂದ ಇಳಿಯುವಾಗ ತಾಳುಬೆಟ್ಟದ ೧ ನೇ ತಿರುವಿನಲ್ಲಿ ಬ್ರೇಕ್ ಫೇಲ್ಯೂರ್ ಆಗಿದ್ದು ಪ್ರಪಾತಕ್ಕೆ ಬಸ್ ಬೀಳುವುದನ್ನು ತಪ್ಪಿಸಲು ಕಲ್ಲಿನಗೋಡೆಗೆ ಬಸ್ ನುಗ್ಗಿಸಿ ಚಾಲಕ ಸಮಯ ಪ್ರಜ್ಞೆ ಮೆರೆದಿದ್ದಾರೆ.

ಮಲೆ ಮಹದೇಶ್ವರ ಬೆಟ್ಟದಲ್ಲಿ ಬಸ್ ಪರಿಶೀಲಿಸಿದಾಗ ಬ್ರೇಕ್ ಪ್ಯಾಡ್ ಗಳು ಸರಿಯಾಗಿದ್ದವು, ಎಲ್ಲವೂ ಚೆನ್ನಾಗಿಯೇ ಇತ್ತು ಎಂದು ಚಾಲಕ ಗಣೇಶ್ ವಿವರಿಸಿದ್ದಾರೆ.

ಶನಿವಾರ ರಾತ್ರಿಯಷ್ಟೆ ಹಾಲರವಿ ಹಳ್ಳದ ತಿರುವಿನಲ್ಲಿ ಸಾರಿಗೆ ಸಂಸ್ಥೆ ಬಸ್ ಪಲ್ಟಿಯಾಗಿ 20ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. ಈಗ ಮತ್ತೇ ಇಂದು ಬಸ್ ಬ್ರೇಕ್ ಫೇಲ್ಯೂರ್ ಆಗಿರುವುದಕ್ಕೆ ಸ್ಥಳೀಯರು, ಪ್ರಯಾಣಿಕರು ಆಕ್ರೋಶ ಹೊರಹಾಕಿದ್ದಾರೆ.

ಅಲ್ಲಲ್ಲಿ ದುರಸ್ತಿಯಾಗಿ ನಿಂತಿರುವ ಬಸ್: ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟಕ್ಕೆ ವಿವಿಧ ಜಿಲ್ಲೆಗಳ ಡಿಪೋಗಳಿಂದ ತೆರಳಿರುವ ಬಸ್ ಗಳನ್ನು ಸಮರ್ಪಕವಾಗಿ ನಿರ್ವಹಣಿ ಮಾಡದೇ ಇರುವುದರಿಂದ ಮಲ್ಲಯ್ಯನಪುರ, ರಂಗಸ್ವಾಮಿ ಒಡ್ಡು,ತಾಳಬೆಟ್ಟದ ಸಮೀಪ ಮೂರು ಬಸ್ಸುಗಳು ದುರಸ್ತಿಯಾಗಿ ನಿಂತಿದ್ದವು. ಇದರಿಂದ ಭಕ್ತಾದಿಗಳಿಗೆ ತೀವ್ರ ತೊಂದರೆಯಾಯಿತು.

Tags:
error: Content is protected !!