ಮಡಿಕೇರಿ : ಕಾವೇರಿ ನದಿ ನೀರಿನಲ್ಲಿ ಮುಳುಗಿ ಹೆಣ್ಣು ಕಾಡಾನೆಯೊಂದು ಮೃತಪಟ್ಟಿರುವ ಘಟನೆ ಕೊಡಗು ಅರಣ್ಯ ವೃತ್ತ ಮಡಿಕೇರಿ ವಿಭಾಗ ಕುಶಾಲನಗರ ವಲಯದ ಮೀನುಕೊಲ್ಲಿ ಶಾಖೆಯ ವಾಲ್ನೂರು ಹಾಗೂ ಮಾಲ್ದಾರೆ ವ್ಯಾಪ್ತಿಯಲ್ಲಿ ನಡೆದಿದೆ.
ಇಲ್ಲಿನ ಕಾವೇರಿ ನದಿಯಲ್ಲಿ ಕಾಡಾನೆ ಮೃತದೇಹ ಬುಧವಾರ ಕಂಡುಬಂದಿತ್ತು. ನದಿಯ ಮಧ್ಯಭಾಗದಲ್ಲಿ ಮೃತದೇಹವಿದ್ದಿದ್ದರಿಂದ ದಡಕ್ಕೆ ತರಲು ಸಾಧ್ಯವಾಗಿರಲಿಲ್ಲ. ಆನೆಯ ಮೃತದೇಹವನ್ನು ನದಿಯ ಮಧ್ಯಭಾಗದಿಂದ ತರಲು ಸಾಕಾನೆ ಹಾಗೂ ಬೋಟು ಅವಶ್ಯಕತೆ ಇದ್ದ ಕಾರಣ ಗುರುವಾರ ಕಾರ್ಯಾಚರಣೆ ನಡೆಸಲು ನಿರ್ಧರಿಸಲಾಗಿತ್ತು. ಅದರಂತೆ ಗುರುವಾರ ಬೆಳಗ್ಗೆ ಬೋಟಿನ ವ್ಯವಸ್ಥೆ ಮಾಡಿಕೊಂಡು ಸಾಕಾನೆಯ ಸಹಾಯದಿಂದ ನದಿಯಿಂದ ಮೃತದೇಹವನ್ನು ಹೊರ ತರಲಾಯಿತು.
ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಗೋಪಾಲ ಎ.ಎ, ವಲಯ ಅರಣ್ಯಾಧಿಕಾರಿ ರಕ್ಷಿತ್ ಆರ್, ಮುಖ್ಯ ವಶುವೈಧ್ಯಾಧಿಕಾರಿ ಡಾ. ಮುಜೀಬ್ ಹಾಗೂ ಪಶುವೈದ್ಯಾಧಿಕಾರಿ ಡಾ. ಚಿಟ್ಟಿಯಪ್ಪ ಸಮ್ಮುಖದಲ್ಲಿ ಮೃತಪಟ್ಟ ಆನೆಯನ್ನು ನದಿ ಮಧ್ಯದಿಂದ ಹೊರತೆಗೆದು ಮರಣೋತ್ತರ ಪರೀಕ್ಷೆ ನಡೆಸಲಾಯಿತು.
ಮೃತಪಟ್ಟ ಆನೆಯು ಹೆಣ್ಣು ಕಾಡಾನೆಯಾಗಿದ್ದು, ಯಾವುದೇ ಗುಂಡು ತಗುಲಿರುವುದು, ವಿದ್ಯುತ್ ಸ್ಪಶಗಳಂತಹ ಕಾರಣದಿಂದ ಮೃತಪಟ್ಟಿಲ್ಲ. ನದಿ ನೀರಿನಲ್ಲಿ ಮುಳುಗಿಯೇ ಕಾಡಾನೆ ಸತ್ತಿರುವ ಬಗ್ಗೆ ಪಶು ವೈದ್ಯಾಧಿಕಾರಿಗಳು ದೃಢಪಡಿಸಿರುವುದಾಗಿ ವಲಯ ಅರಣ್ಯಾಧಿಕಾರಿ ರಕ್ಷಿತ್ ತಿಳಿಸಿದ್ದಾರೆ.





