Mysore
23
overcast clouds

Social Media

ಶುಕ್ರವಾರ, 14 ಆಗಸ್ಟ್ 2026
Light
Dark

ಜನಪರ ಕೆಲಸ ಮಾಡಲು ಕಾಂಗ್ರೆಸ್‌ಗೆ ಆಗ್ರಹಿಸಿದ್ದೇವೆ : ಪ್ರತಿಪಕ್ಷ ನಾಯಕ ಅಶೋಕ

r ashok

ಬೆಂಗಳೂರು : ಈ ಬಾರಿಯ ಅಧಿವೇಶನದಲ್ಲಿ ರಾಜ್ಯದ ಪ್ರಮುಖ ಸಮಸ್ಯೆಗಳ ಬಗ್ಗೆ ಯಶಸ್ವಿಯಾಗಿ ಚರ್ಚೆ ಮಾಡಿದ್ದೇವೆ. ಬಿಜೆಪಿ-ಜೆಡಿಎಸ್‌ನಿಂದ ಉತ್ತಮ ಹೋರಾಟ ನಡೆದಿದೆ ಎಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಬಾರಿಯ ಅಧಿವೇಶನದಲ್ಲಿ ಬಿಜೆಪಿ-ಜೆಡಿಎಸ್‌ನ ಎಲ್ಲ ಶಾಸಕರು ಒಗ್ಗಟ್ಟಾಗಿ ಹಾಲು ಜೇನಿನಂತೆ ಕೆಲಸ ಮಾಡಿದ್ದಾರೆ. ಸರ್ಕಾರ, ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಸಚಿವರಿಗೆ ಎಲ್ಲರೂ ಸರಿಯಾದ ಪ್ರಶ್ನೆಗಳನ್ನು ಕೇಳಿದ್ದಾರೆ. ಆರ್‌ಸಿಬಿ ಸಂಭ್ರಮಾಚರಣೆಯ ಕಾಲ್ತುಳಿತ ದುರಂತದ ಬಗ್ಗೆ ಗೃಹ ಸಚಿವರ ಜೊತೆಗೆ ಮುಖ್ಯಮಂತ್ರಿ ಕೂಡ ಉತ್ತರ ಕೊಡುವಂತೆ ಮಾಡಿದ್ದೇವೆ. ಎರಡು ವರ್ಷಗಳಲ್ಲಿ ಅಭಿವೃದ್ಧಿ ಶೂನ್ಯ ಹಾಗೂ ಸರ್ಕಾರ ಪಾಪರ್‌ ಆಗಿರುವ ಬಗ್ಗೆ ಕೇಳಿದ್ದಕ್ಕೆ ಸಿಎಂ, ಡಿಸಿಎಂ ಇಬ್ಬರೂ ಉತ್ತರ ನೀಡಿದ್ದಾರೆ ಎಂದರು.

ಧರ್ಮಸ್ಥಳ ವಿಚಾರದಲ್ಲಿ ನಡೆದ ಘಟನೆಗಳ ಬಗ್ಗೆ ಹೋರಾಟ ಮಾಡಿದ್ದರಿಂದ ಅಗೆಯುವುದು ಸ್ಥಗಿತಗೊಂಡಿದೆ. ದುಂದು ವೆಚ್ಚಕ್ಕೆ ಕಡಿವಾಣ ಬಿದ್ದು, ಮುಸುಕುಧಾರಿಯ ಬಣ್ಣ ಬಯಲಾಗಿದೆ. ಸುಜಾತ ಭಟ್‌ ವಿಚಾರ ಕೂಡ ಬಯಲಾಗಿದೆ. ಇಡೀ ಪ್ರಕರಣದ ಚಿತ್ರಣವನ್ನೇ ನಮ್ಮ ಶಾಸಕರು ಬದಲಾಯಿಸಿದ್ದಾರೆ ಎಂದರು.

ಸರ್ಕಾರಿ ಶಾಲೆಗಳ ಪರಿಸ್ಥಿತಿ, ರಸಗೊಬ್ಬರ ಹಂಚಿಕೆಯಲ್ಲಿ ಅವ್ಯವಹಾರ, ರಸ್ತೆ ಗುಂಡಿಗಳ ಸಮಸ್ಯೆ ಬಗ್ಗೆ ಗಮನ ಸೆಳೆದಿದ್ದೇವೆ. ರಾಜ್ಯದಲ್ಲಿ ಮಳೆ ಹಾನಿಯಾಗಿದ್ದು, ನಮ್ಮಲ್ಲಿನ ಸಂತ್ರಸ್ತರಿಗೆ 95 ಸಾವಿರ ರೂ. ಹಾಗೂ ಕೇರಳಕ್ಕೆ 10 ಲಕ್ಷ ರೂ. ನೀಡಲಾಗಿದೆ. ಈ ತಾರತಮ್ಯದ ಬಗ್ಗೆಯೂ ಚಾಟಿ ಬೀಸಿದ್ದೇವೆ. ಸರ್ಕಾರದ 10 ಕೋಟಿ ರೂ. ಹಣದಲ್ಲಿ ಕಾಂಗ್ರೆಸ್‌ ಸಮಾವೇಶ ಮಾಡಲಾಗಿದೆ. ಈ ಬಗ್ಗೆಯೂ ಪ್ರಶ್ನೆ ಮಾಡಿ, ಕಿವಿ ಹಿಂಡುವ ಕೆಲಸ ಮಾಡಿದ್ದೇವೆ. ಇನ್ನು ಮುಂದೆ ರೈತರ ಪರ ಹಾಗೂ ಸಾಮಾನ್ಯ ಜನರ ಪರ ಕೆಲಸ ಮಾಡಿ ಎಂದು ಆಗ್ರಹಿಸಿದ್ದೇವೆ ಎಂದು ತಿಳಿಸಿದರು.

ಒಳಮೀಸಲಾತಿ ವಿಚಾರಕ್ಕೆ ಬಿಜೆಪಿಯಿಂದ ಹೋರಾಟ ನಡೆದಿತ್ತು. ಹಿಂದಿನ ಸಿಎಂ ಬಸವರಾಜ ಬೊಮ್ಮಾಯಿ ಇದಕ್ಕೆ ಚಾಲನೆ ನೀಡಿದ್ದರು. ಈಗಿನ ಸರ್ಕಾರ ಅದಕ್ಕೆ ಸುಣ್ಣ ಬಣ್ಣ ಬಳಿದು ಸದನದಲ್ಲಿ ಮಂಡಿಸಿದೆ. ಆದರೆ ಚರ್ಚೆಗೆ ಅವಕಾಶ ನೀಡದೆ ಸಿಎಂ ಸಿದ್ದರಾಮಯ್ಯ ಪಲಾಯನ ಮಾಡಿದ್ದಾರೆ ಎಂದು ದೂರಿದರು.

Tags:
error: Content is protected !!