Mysore
26
broken clouds

Social Media

ಶುಕ್ರವಾರ, 01 ಮೇ 2026
Light
Dark

ಗ್ಯಾಸ್ ಬೆಲೆ ಗಗನಕ್ಕೆ : ಕೇಂದ್ರದ ವಿರುದ್ಧ ಸಿಎಂ ಸಿದ್ದರಾಮಯ್ಯ ವಾಗ್ದಾಳಿ

ಬೆಂಗಳೂರು : ವಿಧಾನಸಭಾ ಚುನಾವಣೆ ಮುಗಿಯುತ್ತಿದ್ದಂತೆ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ದರವನ್ನು 993 ರೂ. ಏಕಾಏಕಿ ಹೆಚ್ಚಿಸಿರುವ ಕೇಂದ್ರ ಸರ್ಕಾರದ ಕ್ರಮವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ‘ಸಂಘಟಿತ ಲೂಟಿ’ ಎಂದು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.

ಈ ಬಗ್ಗೆ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಸಿದ್ದರಾಮಯ್ಯ, ‘ನಾವು ಮೊದಲೇ ಎಚ್ಚರಿಸಿದಂತೆ ಚುನಾವಣೆ ಮುಗಿದ ತಕ್ಷಣ ಮೋದಿ ಸರ್ಕಾರ ಬೆಲೆ ಏರಿಕೆಯ ಬರೆ ಎಳೆದಿದೆ. ಮೇ 1ರಿಂದ ವಾಣಿಜ್ಯ ಸಿಲಿಂಡರ್ ಬೆಲೆ 3,071 ರೂ.ಗೆ ಜಿಗಿದಿದೆ’ ಎಂದು ಕಿಡಿಕಾರಿದ್ದಾರೆ.

4 ತಿಂಗಳಲ್ಲಿ 6 ಬಾರಿ ಏರಿಕೆ: 1,518 ರೂ. ಹೊರೆ
ಕಳೆದ ನಾಲ್ಕೇ ತಿಂಗಳಲ್ಲಿ ಕೇಂದ್ರ ಸರ್ಕಾರ ವಾಣಿಜ್ಯ ಸಿಲಿಂಡರ್ ದರವನ್ನು ಆರು ಬಾರಿ ಹೆಚ್ಚಿಸಿದ್ದು, ಒಟ್ಟು 1,518 ರೂ. ಹೊರೆ ಹಾಕಿದೆ ಎಂದು ಸಿಎಂ ಅಂಕಿ-ಅಂಶ ಸಮೇತ ಬೊಟ್ಟು ಮಾಡಿದ್ದಾರೆ. ‘ಚುನಾವಣೆ ವೇಳೆ ಉದ್ದೇಶಪೂರ್ವಕವಾಗಿ ತಡೆಹಿಡಿದಿದ್ದ ಬೆಲೆ ಏರಿಕೆಯನ್ನು ಈಗ ಜನರ ತಲೆಗೆ ಕಟ್ಟಲಾಗಿದೆ. ಇದು ಆಡಳಿತವಲ್ಲ, ಬಡವರ ಜೇಬಿಗೆ ಕನ್ನ ಹಾಕುವ ಸಂಘಟಿತ ಲೂಟಿ’ ಎಂದು ಹರಿಹಾಯ್ದಿದ್ದಾರೆ.

‘ಹೋಟೆಲ್‌ನಿಂದ ಮನೆ ಅಡುಗೆಮನೆವರೆಗೆ ಬಿಸಿ’
‘ಜಾಗತಿಕ ಮಾರುಕಟ್ಟೆಯಲ್ಲಿ ಏನೇ ಆದರೂ ಮೋದಿ ಸರ್ಕಾರ ಸಾಮಾನ್ಯ ಜನರ ಬೆನ್ನಿಗೆ ಚೂರಿ ಹಾಕುತ್ತದೆ. ಈ ಏರಿಕೆ ಕೇವಲ ಹೋಟೆಲ್, ರೆಸ್ಟೋರೆಂಟ್‌ಗೆ ಸೀಮಿತವಲ್ಲ. ಸಣ್ಣ ಅಂಗಡಿ, ಕ್ಯಾಂಟೀನ್, ಅಡುಗೆ ಸೇವೆಗಳ ಮೂಲಕ ಪ್ರತಿ ಮನೆಗೂ ಹೊಡೆತ ಬೀಳಲಿದೆ’ ಎಂದು ಸಿದ್ದರಾಮಯ್ಯ ಎಚ್ಚರಿಸಿದ್ದಾರೆ.

‘ಒಂದು ಕಪ್ ಚಹಾದಿಂದ ಮಧ್ಯಾಹ್ನದ ಊಟದವರೆಗೆ ಎಲ್ಲವೂ ದುಬಾರಿ ಆಗಲಿದೆ. ನಗರದ ಕಾರ್ಮಿಕ ವರ್ಗ, ದಿನಗೂಲಿ ನೌಕರರು, ಸಣ್ಣ ವ್ಯಾಪಾರಿಗಳು ನೇರ ಹೊಡೆತ ತಿನ್ನಲಿದ್ದಾರೆ’ ಎಂದಿದ್ದಾರೆ.

‘ಕಾರ್ಮಿಕ ದಿನದಂದು ಮೋದಿಯವರ ಉಡುಗೊರೆ’
‘ಕಾರ್ಮಿಕರು ಘನತೆ, ಪರಿಹಾರ ಕೇಳುತ್ತಿರುವಾಗ ಮೋದಿ ಸರ್ಕಾರ ಹಣದುಬ್ಬರ ಮತ್ತು ನೆಪಗಳನ್ನು ಉಡುಗೊರೆಯಾಗಿ ಕೊಡುತ್ತಿದೆ. ಕಾರ್ಮಿಕ ದಿನದಂದೇ ಕಾರ್ಮಿಕ ವರ್ಗದ ಬದುಕಿಗೆ ಬರೆ ಎಳೆದಿದೆ’ ಎಂದು ಸಿಎಂ ವ್ಯಂಗ್ಯವಾಡಿದ್ದಾರೆ.

ವಾಣಿಜ್ಯ ಸಿಲಿಂಡರ್ ದರ ಏರಿಕೆಯಿಂದ ಉಪಾಹಾರ, ಊಟದ ದರ ಏರಿಕೆಯಾಗುವುದು ಅನಿವಾರ್ಯವಾಗಿದ್ದು, ಸಾಮಾನ್ಯ ಜನರ ಬಜೆಟ್ ಮತ್ತಷ್ಟು ಹಳಿ ತಪ್ಪಲಿದೆ.

Tags:
error: Content is protected !!