Mysore
21
overcast clouds

Social Media

ಸೋಮವಾರ, 10 ಆಗಸ್ಟ್ 2026
Light
Dark

ಚೇತನ್ ಅಹಿಂಸಾ ಗಡಿಪಾರಿಗೆ ಆಗ್ರಹ

ಅಭಿಮಾನಿಗಳು, ನಿರ್ಮಾಪಕರ ಸಂಘದ ಆಕ್ರೋಶ

ಬೆಂಗಳೂರು : ಪದ್ಮಭೂಷಣ ಡಾ.ರಾಜ್‌ಕುಮಾರ್ ಅವರ ಸ್ಮಾರಕದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವಿವಾದಾತ್ಮಕ ಹೇಳಿಕೆ ಪೋಸ್ಟ್ ಮಾಡಿದ್ದ ನಟ ಚೇತನ್ ಅಹಿಂಸಾ ವಿರುದ್ಧ ಕನ್ನಡ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿ ಗಡೀಪಾರಿಗೆ ಒತ್ತಾಯಿಸಿವೆ.

ಡಾ.ರಾಜ್‌ಕುಮಾರ್‌ರವರ ೯೭ನೇ ಹುಟ್ಟುಹಬ್ಬ ಸಂಭ್ರಮಾಚರಣೆ ನಡುವೆ ವಿವಾದ ಸೃಷ್ಟಿಸಿದ್ದ ನಟ ಚೇತನ್ ಅಹಿಂಸಾ ವಿರುದ್ಧ ಹಲವರು ಟೀಕಾಪ್ರಹಾರ ನಡೆಸಿದ್ದರು.

ಪದೇಪದೇ ಸಮಾಜದ ಸ್ವಾಸ್ಥ್ಯವನ್ನು ಹಾಳುಗೆಡವಲು ವಿವಾದಾತ್ಮಕ ಹೇಳಿಕೆಗಳನ್ನು ನೀಡುವ ಈತನನ್ನು ಗಡೀಪಾರು ಮಾಡಬೇಕೆಂದು ಒತ್ತಾಯಿಸಿದ್ದು, ಈ ನಡುವೆ ಡಾ.ರಾಜ್‌ಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷ ಸಾ.ರಾ.ಗೋವಿಂದು ಹಾಗೂ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಶಿವರಾಮೇಗೌಡ ಸೇರಿದಂತೆ ನೂರಾರು ಮಂದಿ ಚೇತನ್ ನಿವಾಸಕ್ಕೆ ಮುತ್ತಿಗೆ ಹಾಕಿದ ವೇಳೆ ನಟ ತನ್ನ ತಪ್ಪಿಗೆ ಕ್ಷಮೆ ಯಾಚಿಸಿದ್ದಾನೆ.

ಸಾ.ರಾ.ಗೋವಿಂದು ಅವರು ಚೇತನ್ ಕ್ಷಮಯಾಚನೆಗೆ ಲಾಯಕ್ಕಲ್ಲ. ಅವನಿಗೆ ಯಾವುದೇ ಯೋಗ್ಯತೆ ಇಲ್ಲ.  ಡಾ.  ರಾಜ್‌ಕುಮಾರ್‌ರವರ ಕರ್ನಾಟಕದ ಕೊಡುಗೆ ಬಗ್ಗೆ ಪ್ರಶ್ನೆ ಮಾಡುವ ಅಧಿಕಾರವಿಲ್ಲ. ಅವನು ಎಷ್ಟು ಸಿನಿಮಾ ಮಾಡಿದ್ದಾನೆ?, ಹಾದಿ ಬೀದಿಯಲ್ಲಿ ಬೇಡಿಕೊಂಡು ತಿಂತಿದ್ದೀಯಾ. ನೀನು ಮೇರು ನಟರ ಬಗ್ಗೆ ಮಾತನ್ನಾಡುತ್ತೀಯ. ನೀನೊಬ್ಬ ನಿರುದ್ಯೋಗಿ. ಕೈಯಲ್ಲಿ ಮಾಡುವುದಕ್ಕೆ ಕೆಲಸ ಇಲ್ಲ. ಮೊದಲು ಕೆಲಸ ಹುಡುಕಿಕೋ. ನಾವೂ ಸರ್ಕಾರದ ಮೇಲೆ ಒತ್ತಡ ಹಾಕುತ್ತೇವೆ. ಆತನನ್ನು ಈ ಕೂಡಲೇ ರಾಜ್ಯದಿಂದ ಹೊರಗೆ ಹಾಕಬೇಕು. ಅಣ್ಣಾವ್ರ ಸ್ಮಾರಕದ ಜಾಗ ನಮಗೆಲ್ಲ ದೇವಸ್ಥಾನ. ಸ್ಮಾರಕವನ್ನು ವಾಣಿಜ್ಯ ಸಂಕೀರ್ಣ ಅಂತೀಯಲ್ಲ ಅಲ್ಲಿ ಯಾವ ವಾಣಿಜ್ಯ ಚಟುವಟಿಕೆ ನಡೆಯುತ್ತಿದೆ ಎಂದು ಸಾ.ರಾ.ಗೋವಿಂದು ಪ್ರಶ್ನೆ ಮಾಡಿದ್ದಾರೆ.

ನಿರ್ಮಾಪಕರ ಸಂಘ ಆಕ್ರೋಶ
ಸಾಮಾಜಿಕ ಜಾಲತಾಣದಲ್ಲಿ ಚೇತನ್ ಅಹಿಂಸಾಗೆ ಬುದ್ದಿ ಇಲ್ಲ, ಕನ್ನಡಿಗರನ್ನು ಕೆಣಕುವ ಮಾತನ್ನಾಡಿದ್ದು, ಮುಂದೆ ಈ ರೀತಿ ನಡೆದುಕೊಂಡರೆ ಅವನಿಗೆ ತಕ್ಕ ಶಾಸ್ತಿಯಾಗುತ್ತದೆ ಎಂದು ನಿರ್ಮಾಪಕರ ಸಂಘ ಎಚ್ಚರಿಸಿದೆ.
ಒಬ್ಬ ಮೇರು ನಟನ ಬಗ್ಗೆ ಮಾತನಾಡುವಾಗ ಎಚ್ಚರಿಕೆಯಿಂದಿರಬೇಕು. ಇಲ್ಲದಿದ್ದರೆ ಅವರಿಗೆ ಅಭಿಮಾನಿಗಳೇ ಬುದ್ಧಿ ಕಲಿಸುತ್ತಾರೆ ಎಂದು ಹೇಳಿದ್ದಾರೆ. ಕೂಡಲೇ ರಾಜ್ಯಸರ್ಕಾರ ಈತನ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಕನ್ನಡ ಚಲನಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷ ಎಂ.ಜಿ. ರಾಮಮೂರ್ತಿ ಒತ್ತಾಯಿಸಿದ್ದಾರೆ.

Tags:
error: Content is protected !!