Mysore
26
broken clouds

Social Media

ಸೋಮವಾರ, 10 ಆಗಸ್ಟ್ 2026
Light
Dark

ನನ್ನ ಗೆಲುವು ಜೆಡಿಎಸ್ ಭಿಕ್ಷೆ ಅಲ್ಲ, ನಾಗಮಂಗಲ ಜನರ ಭಿಕ್ಷೆ : ಸಚಿವ ಚಲುವರಾಯಸ್ವಾಮಿ

ನಾಗಮಂಗಲ : ನಾಲ್ಕನೇ ಬಾರಿ ಸಚಿವರಾದ ನಂತರ ಪ್ರಥಮ ಬಾರಿಗೆ ಸ್ವಕ್ಷೇತ್ರ ನಾಗಮಂಗಲಕ್ಕೆ ಆಗಮಿಸಿದ ಸಚಿವ ಎನ್. ಚಲುವರಾಯಸ್ವಾಮಿ ಅವರಿಗೆ ಇಂದು ನಾಗಮಂಗಲದ ಜನ ಅಭೂತಪೂರ್ವ ಸ್ವಾಗತ ಕೋರಿದರು.

ನೆಲ್ಲಿಗೆರೆ ಟೋಲ್‌ನಿಂದ ಸಾವಿರಾರು ಕಾರ್ಯಕರ್ತರು ಬೈಕ್  ರ‍್ಯಾಲಿ ನಡೆಸಿದರು. ಕ್ರೇನ್ ಮೂಲಕ ಸಚಿವರಿಗೆ ಮೋಸಂಬಿ, ಸೇಬು, ಮುಸುಕಿನ ಜೋಳ ಮತ್ತು ಬೆಲ್ಲದ ಹಾರ ಹಾಕಲಾಯಿತು. 4 ಕಿ.ಮೀ. ಉದ್ದದ ಬೈಕ್ ಮೆರವಣಿಗೆ, ಪೂಜಾ ಕುಣಿತ ತಂಡಗಳೊಂದಿಗೆ ಸಾಗಿದ ಮೆರವಣಿಗೆಗೆ ಗ್ರಾಮಗಳಲ್ಲಿ ಮಹಿಳೆಯರು ಬೆಲ್ಲದಾರತಿ ಮಾಡಿ ಸ್ವಾಗತಿಸಿದರು.

ನಾಗಮಂಗಲ ಮಂಡ್ಯ ಸರ್ಕಲ್‌ನಲ್ಲಿ ಸಾವಿರಾರು ಜನರನ್ನುದ್ದೇಶಿಸಿ ಮಾತನಾಡಿದ ಸಚಿವರು ಜೆಡಿಎಸ್ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು.

“ನನ್ನ ಗೆಲುವು ಜೆಡಿಎಸ್ ಭಿಕ್ಷೆ ಅಲ್ಲ, ಜನರ ಭಿಕ್ಷೆ”

“ಜೆಡಿಎಸ್ ಭಿಕ್ಷೆ ಅಲ್ಲ. ನಾಗಮಂಗಲದ ಜನರು ಕೊಟ್ಟ ಭಿಕ್ಷೆಯಿಂದಲೇ ನಾನು 1999ರಲ್ಲಿ ಗೆದ್ದಿದ್ದು. ಅಂದು 6 ಜನ ಪಕ್ಷ ಬಿಟ್ಟು ಹೋದಾಗ ನಾನು 4 ಜನರನ್ನು ಉಳಿಸಿಕೊಂಡು ಜೆಡಿಎಸ್ ಪಕ್ಷ ಕಟ್ಟಿದ್ದು. ಅವತ್ತು ಗೌರವವಾಗಿ ಉಳಿಸಿಕೊಂಡಿದ್ದರೆ ಜೆಡಿಎಸ್‌ನಿಂದ 50ರಿಂದ 60 ಜನ ಗೆಲ್ಲುತ್ತಿದ್ದರು” ಎಂದು ಹೇಳಿದರು.

“ಡಿಕೆಶಿ ಸಿಎಂ ಆಗೋದನ್ನ ಯಾರು ತಡೆಯಲು ಆಗಲ್ಲ”

“ಡಿ.ಕೆ. ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರು ಅಣ್ಣ-ತಮ್ಮನಂತೆ ಪಕ್ಷ ಕಟ್ಟಿದ್ದಾರೆ. ನಾನು 2028ಕ್ಕೆ ಮತ್ತೆ ಗೆದ್ದು ವಿಧಾನಸಭೆಗೆ ಹೋದರೆ ಡಿ.ಕೆ. ಶಿವಕುಮಾರ್ ಅವರು ಮತ್ತೊಮ್ಮೆ ಮುಖ್ಯಮಂತ್ರಿ ಆಗುವುದನ್ನು ಯಾರು ತಡೆಯಲು ಸಾಧ್ಯವಿಲ್ಲ” ಎಂದು ಭವಿಷ್ಯ ನುಡಿದರು.

“ಕುಮಾರಸ್ವಾಮಿ ಅವರಿಗೆ 10-20 ಸೀಟ್ ಗೆಲ್ಲೋದು ದೊಡ್ಡ ವಿಷಯ. ಅವರು ಬೇರೆಯವರ ಮನೆಗೆ ಹೋಗಬೇಕು ಅಥವಾ ನಮ್ಮ ಹತ್ರ ಬರಬೇಕು. ಡಿಕೆಶಿ, ಸಿದ್ದರಾಮಯ್ಯ ಯಾರ ಮನೆಗೂ ಹೋಗುವುದಿಲ್ಲ. ಜನರ ಮನೆಗೆ ಮಾತ್ರ ಹೋಗಿ ಮತ ಕೇಳುತ್ತೇವೆ” ಎಂದು ಟೀಕಿಸಿದರು.

“ನಿಮ್ಮ ಋಣದಿಂದ 4 ಬಾರಿ ಮಂತ್ರಿ”

“ನಿಮ್ಮ ಆಶೀರ್ವಾದದಿಂದಲೇ ನಾನು ಮತ್ತೊಮ್ಮೆ ಸಚಿವನಾಗಿದ್ದೇನೆ. ನಿಮ್ಮ ಋಣದಿಂದ ನಾನು ನಾಲ್ಕು ಬಾರಿ ಮಂತ್ರಿಯಾಗುವ ಭಾಗ್ಯ ಪಡೆದಿದ್ದೇನೆ. ನಾಗಮಂಗಲ ಮತ್ತು ಕೊಪ್ಪ ಜನರಿಗೆ ಧನ್ಯವಾದಗಳು” ಎಂದು ಭಾವುಕರಾದರು.

“ಅಭಿವೃದ್ಧಿಯೇ ನನ್ನ ಉತ್ತರ”

ಟೀಕೆ-ಟಿಪ್ಪಣಿಗೆ ಉತ್ತರ ಕೊಡುವುದಿಲ್ಲ. ನಾನು ಮಾಡಿದ ಕೆಲಸವೇ ಅವರಿಗೆ ಉತ್ತರ. ನಾನು ಕಟ್ಟಿದ ಕಾಂಪ್ಲೆಕ್ಸ್ ಅನ್ನು ಈಗ ಉದ್ಘಾಟಿಸಿದ್ದೇನೆ. ನಾಗಮಂಗಲದ ರಸ್ತೆ, ಕೊಪ್ಪದ ಬಸ್ ನಿಲ್ದಾಣ, ಬೆಕ್ಕರಳೆಯ ರಸ್ತೆ, ಕೊಪ್ಪ ಹೋಬಳಿಗೆ ನೀರು ಕೊಟ್ಟು ಅಭಿವೃದ್ಧಿ ಮಾಡಿದ್ದು ನಾನೇ. ಸೋತವನು, ಗೆದ್ದವನು ಲೀಡರ್ ಅಲ್ಲ. ಜನಸೇವೆ ಮಾಡುವವನೇ ನಿಜವಾದ ಲೀಡರ್ ಎಂದು ಹೇಳಿದರು.

“2028ರ ಗುರಿ”
2028ಕ್ಕೆ ವಿಧಾನಸಭೆ ಚುನಾವಣೆ ಬರುತ್ತಿದೆ. ಗ್ರಾ.ಪಂ, ತಾ.ಪಂ, ಜಿಲ್ಲಾ ಪಂ ಚುನಾವಣೆಯಲ್ಲಿ ವ್ಯತ್ಯಾಸವಾಗದಂತೆ ಹೋರಾಟ ಮಾಡೋಣ. ಕಾಂಗ್ರೆಸ್‌ನಲ್ಲಿ ಎಲ್ಲಾ ಸಮಾಜಕ್ಕೂ ಸಮಾನ ಅವಕಾಶವಿದೆ. ಬಿಜೆಪಿ-ಜೆಡಿಎಸ್‌ನಲ್ಲಿ ಮಾತ್ರ ಬೇರೆ ಬೇರೆ ಎಂದು ವ್ಯತ್ಯಾಸ ತೋರಿಸಿದರು.

“ಬರದ ಬಗ್ಗೆ ಧೈರ್ಯ”
ಮಳೆ ಬಂದು ಕೆ.ಆರ್.ಎಸ್, ಹೇಮಾವತಿ ಅಣೆಕಟ್ಟು ತುಂಬುತ್ತಿದೆ. ಕುಡಿಯುವ ನೀರಿಗೆ ಯಾವುದೇ ಸಮಸ್ಯೆ ಇಲ್ಲ. ಎಲ್ಲರೂ ಧೈರ್ಯವಾಗಿರಿ ಎಂದು ರೈತರಿಗೆ ಅಭಯ ನೀಡಿದರು.

ಕಾರ್ಯಕ್ರಮದಲ್ಲಿ ಸಚ್ಚಿನ್ ಚಲುವರಾಯಸ್ವಾಮಿ,ಸಹೋದರ ಲಕ್ಷ್ಮಿಕಾಂತ್,ಸುನೀಲ್ ಲಕ್ಷ್ಮಿಕಾಂತ್,ಜಿ ಪಂ ಮಾಜಿ ಸದಸ್ಯ ಪ್ರಸನ್ನ,ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಜೇಶ್, ಸ್ಥಳೀಯ ಮುಖಂಡರು, ಕಾರ್ಯಕರ್ತರು ಮತ್ತು ಅಪಾರ ಸಂಖ್ಯೆಯ ಸಾರ್ವಜನಿಕರು ಭಾಗವಹಿಸಿದ್ದರು.

Tags:
error: Content is protected !!