ಮಂಡ್ಯ: ಜೂನ್ 7 ರಿಂದ 9 ರವರೆಗೆ 3 ದಿನಗಳ ಕಾಲ ಮಂಡ್ಯದಲ್ಲಿ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ನಡೆಸಲಾಗುವುದು ಎಂದು ಜಿಲ್ಲಾ ಉಸುವಾರಿ ಸಚಿವ ಎನ್. ಚಲುವರಾಯಸ್ವಾಮಿ ಅವರು ತಿಳಿಸಿದರು.
87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಸಂಬಂಧ ಪೂರ್ವಭಾವಿ ಸಭೆ ನಡೆಸಿ ಮಾತನಾಡಿ, ಮಂಡ್ಯ ಜಿಲ್ಲೆಯಲ್ಲಿ ಈ ಹಿಂದೆ 1974ರಲ್ಲಿ ಮೊದಲನೇ ಬಾರಿಗೆ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಜರುಗಿರುತ್ತದೆ. ಎರಡನೇ ಬಾರಿಗೆ 1994 `ರಲ್ಲಿ ನಡೆದಿದೆ. ಈ ಐತಿಹಾಸಿಕ ಸಮ್ಮೇಳನವನ್ನು ನಡೆಸಿದ್ದರಿಂದ ಜಿಲ್ಲೆಯಲ್ಲಿ 3ನೇ ಬಾರಿಗೆ 30 ವಷಗಳ ನಂತರ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಲು ಅವಕಾಶ ಸಿಕ್ಕಿರುವುದು ಮಂಡ್ಯ ಜಿಲ್ಲೆಯ ಸೌಭಾಗ್ಯವಾಗಿದೆ ಎಂದರು.
ಸಮ್ಮೇಳನ ಯಶಸ್ವಿಯಾಗಿ ನಡೆಸಲು ಜಿಲ್ಲೆಯ ಹಿರಿಯ ಸಾಹಿತಿಗಳು ಕನ್ನಡ ಅಭಿಮಾನಿಗಳು ಸಾಹಿತ್ಯ ಪ್ರೇಮಿಗಳು ಜನಪ್ರತಿನಿಧಿಗಳು ಹಿರಿಯ ಸಾಹಿತ್ಯಾಸಕ್ತರ ಪಾಲ್ಗೊಳ್ಳುವಿಕೆ ಅಮೂಲ್ಯವಾಗಿದೆ. ಈ ನಿಟ್ಟಿನಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಪರಿಷತ್ತು, ಕೇಂದ್ರ ಸಾಹಿತ್ಯ ಪರಿಷತ್ತಿನ ಸಲಹೆಗಳೊಂದಿಗೆ ಸಮ್ಮೇಳನವನ್ನು ಯಶಸ್ವಿಯಾಗಿ ನಿರ್ವಹಿಸಲು ಎಲ್ಲರನ್ನೂ ಒಳಗೊಂಡಂತೆ 25 ಸಮಿತಿಗಳನ್ನು ರಚಿಸಲು ತೀರ್ಮಾನಿಸಲಾಗಿದೆ ಎಂದರು.
ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳ ಸಮಕ್ಷಮದಲ್ಲಿ ಸಮ್ಮೇಳನ ನಡೆಸಲು ಸೂಕ್ತ ಸ್ಥಳವನ್ನು ಅಂತಿಮಗೊಳಿಸಲಾಗುವುದು. ಮುಖ್ಯಮಂತ್ರಿಗಳು ಸಮ್ಮೇಳನದ ವೆಚ್ಚವನ್ನು ಬಿಡುಗಡೆ ಮಾಡಲು ಭರವಸೆ ನೀಡಿದ್ದಾರೆ. ಅದರಂತೆ ವಿವಿಧ ಸಮಿತಿಗಳ ನೇಮಕಮಾಡಿ ಸಮಿತಿಗಳು ಆಂತರಿಕವಾಗಿ ಸಭೆ ನಡೆಸಿ ಅಂತಿಮವಾಗಿ ಆಗಬಹುದಾದ ವೆಚ್ಚದ ಅಂದಾಜು ಮೊತ್ತವನ್ನು ಮಖ್ಯ ಸಮಿತಿಗೆ ಸಲ್ಲಿಸುತ್ತಾರೆ ಎಂದರು.
ಸಮ್ಮೇಳನದಲ್ಲಿ ಸ್ವಾಗತ ಸಮಿತಿ, ಸಮನ್ವಯ ಸಮಿತಿ, ಹಣಕಾಸು ಮತ್ತು ಲೆಕ್ಕ ಪರಿಶೋಧನಾ ಸಮಿತಿ, ವೇದಿಕೆ ಸಮಿತಿ, ಆಹಾರ ಮತ್ತು ಮೆರವಣಿಗೆ, ವಸತಿ, ಆರೋಗ್ಯ ಮತ್ತು ನೈರ್ಮಲ್ಯ ಸಾಂಸ್ಕೃತಿಕ ಸಾರಿಗೆ, ನಗರ ಅಲಂಕಾರ ವಿದ್ಯುತ್, ಪುಸ್ತಕ ಬಿಡುಗಡೆ, ಪ್ರಚಾರ, ಆಮಂತ್ರಣ, ಸ್ಮರಣಿಕೆ, ಮಾಧ್ಯಮ ಮತ್ತು ಶಿಷ್ಟಾಚಾರ ಸೇರಿದಂತೆ ೨೫ ಸಮಿತಿಗಳನ್ನು ರಚಿಸಲಾಗುವುದು ಎಂದರು.
ಸಮ್ಮೇಳನದಲ್ಲಿ ಕವಿಗೋಷ್ಠಿ ಉಪನ್ಯಾಸ, ಪುಸ್ತಕ ಮಳಿಗೆ ಆಯೋಜಿಸಲು ಹಾಗೂ ಪ್ರತಿನಿತ್ಯ ಸಮ್ಮೇಳನ ಸುಮಾರು 3 ರಿಂದ 4 ಲಕ್ಷ ಜನ ಸೇರುವ ನಿರೀಕ್ಷೆ ಇದ್ದು ವಸತಿ ಹಾಗೂ ಊಟದ ವ್ಯವಸ್ಥೆಗೆ ಯೋಜಿಸಲಾಗಿದೆ ಎಂದರು. ಸಭೆಯಲ್ಲಿ ಶಾಸಕ ಪಿ.ರವಿಕುಮಾರ್, ಜಿಲ್ಲಾಧಿಕಾರಿ ಡಾ.ಕುಮಾರ, ಜಿಲ್ಲಾ ಪಂಚಾಯತ್ ಸಿಇಒ ಶೇಖ್ ತನ್ನೀರ್ ಆಸಿಫ್, ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್ ಸೇರಿದಂತೆ ಇನ್ನಿತರರು ಹಾಜರಿದ್ದರು.





