Mysore
24
overcast clouds

Social Media

ಮಂಗಳವಾರ, 16 ಜೂನ್ 2026
Light
Dark

ಸುದೀಪ್‍ರಿಂದ ಸ್ಫೂರ್ತಿ ಪಡೆದು ‘ಹೆಬ್ಬುಲಿ ಕಟ್‍’…

‘ಹೆಬ್ಬುಲಿ ಕಟ್’ ಎಂಬ ಹೊಸಬರ ಚಿತ್ರವು ಜುಲೈ.04ರಂದು ಬಿಡುಗಡೆಯಾಗುತ್ತಿದೆ. ಈ ಚಿತ್ರವನ್ನು ನೋಡಿದ ಸತೀಶ್‍ ನೀನಾಸಂ ಬಹಳ ಖುಷಿಯಾಗಿ, ತಮ್ಮ ಬೆಂಬಲ ಘೋಷಿಸಿದ್ದಾರೆ. ತಮ್ಮದೇ ಸತೀಶ್ ಪಿಕ್ಚರ್ ಹೌಸ್ ಬ್ಯಾನರ್‌ನಡಿ ಈ ಚಿತ್ರವನ್ನು ಅರ್ಪಿಸುವುದರ ಜೊತೆಗೆ, ಇತ್ತೀಚೆಗೆ ಚಿತ್ರದ ಟ್ರೇಲರ್‍ ಸಹ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.

ಉತ್ತರ ಕರ್ನಾಟಕದ ಪ್ರತಿಭೆಗಳೇ ಸೇರಿ ಈ ಚಿತ್ರವನ್ನು ರೂಪಿಸಿರುವುದು ವಿಶೇಷ. ಭೀಮರಾವ್‍ ಪೈದೊಡ್ಡಿ ಕಥೆ-ಚಿತ್ರಕಥೆ ಬರೆದು ನಿರ್ದೇಶಿಸಿರುವ ಈ ಚಿತ್ರದಲ್ಲಿ ಮೌನೇಶ್ ನಟರಂಗ, ಅನನ್ಯ ನಿಹಾರಿಕ, ಮಹಾದೇವ ಹಡಪದ, ಉಮಾ ವೈ.ಜಿ.ವಿನಯ್ ಮಹಾದೇವನ್, ಮಹಾಂತೇಶ್ ಹಿರೇಮಠ, ಪುನೀತ್ ಶೆಟ್ಟಿ ಮುಂತಾದವರು ನಟಿಸಿದ್ದಾರೆ.

ಈ ಚಿತ್ರದ ಕುರಿತು ಮಾತನಾಡಿದ ಸತೀಶ್‍ ನೀನಾಸಂ, ‘ನಾನು ಚಿತ್ರ ನೋಡಿದ್ದೇನೆ.‌‌ ಮೊದಲ ಬಾರಿಗೆ ಪೂರ್ಣಚಂದ್ರ ತೇಜಸ್ವಿ ಫೋನ್ ಮಾಡಿ ‘ಹೆಬ್ಬುಲಿ ಕಟ್’ ಚಿತ್ರವನ್ನು ನೋಡಿ ಎಂದರು. ಮೊದಲಾರ್ಧ ಮುಗಿಯುವಷ್ಟರಲ್ಲಿ ಎದೆ ಭಾರವಾಯ್ತು. ದ್ವಿತೀಯಾರ್ಧದಲ್ಲಿ ಕಡೆ 20 ನಿಮಿಷ ಉಸಿರಾಡಲು ಕಷ್ಟವಾಯಿತು. ಭಯ, ತಳಮಳ ಶುರುವಾಯ್ತು.‌ ಜನ ಯಾವ ರೀತಿ ಈ ಚಿತ್ರವನ್ನು ಸ್ವೀಕರಿಸುತ್ತಾರೋ ಗೊತ್ತಿಲ್ಲ. ರೀಲ್ಸ್, ಗಲಾಟೆ, ಯುದ್ಧ ಮಧ್ಯೆ ಒಂದೊಳ್ಳೆಯ ಚಿತ್ರ ಬರುತ್ತಿದೆ. ಸೋಷಿಯಲ್‍ ಮೀಡಿಯಾದಲ್ಲಿ ಕಳೆದು ಹೋಗುತ್ತಿರುವ ಪ್ರೇಕ್ಷಕರನ್ನು ‘ಹೆಬ್ಬುಲಿ ಕಟ್’ ಎಚ್ಚರಿಸುತ್ತದೆ, ಎದೆ ಭಾರ ಮಾಡುತ್ತದೆ ಎಂಬ ನಂಬಿಕೆ ಇದೆ’ ಎಂದರು.

ನಿರ್ದೇಶಕ ಭೀಮರಾವ್ ಪೈದೊಡ್ಡಿ ಮಾತನಾಡಿ, ‘ಪ್ರತಿಯೊಬ್ಬ ನಿರ್ದೇಶಕರಿಗೂ ಒಂದು ಕನಸಿರುತ್ತದೆ. ನಾನು ಸುದೀಪ್‍ ಅವರ ಅಭಿಮಾನಿ. ಅವರ ಸಿನಿಮಾಗಳನ್ನು ನೋಡಿ ಬೆಳೆದವನು. ಅವರ ಸ್ಟೈಲ್‍ ಕಾಪಿ ಮಾಡುವುದು ನನ್ನ ಹವ್ಯಾಸವಾಗಿತ್ತು. ಅವರ ‘ಹೆಬ್ಬುಲಿ’ ಚಿತ್ರವು ನನಗೆ ಸ್ಫೂರ್ತಿ. ಅವರನ್ನು ಐಕಾನ್‍ ಆಗಿ ಈ ಚಿತ್ರದಲ್ಲಿ ಬಳಸಿಕೊಂಡಿದ್ದೇನೆ. ಅದು ಒಬ್ಬ ಅಭಿಮಾನಿ ತನ್ನ ನೆಚ್ಚಿನ ನಟನಿಗೆ ಕೊಡುತ್ತಿರುವ ಒಂದು ಉಡುಗೊರೆ’ ಎಂದರು.

Tags:
error: Content is protected !!