Mysore
27
light rain

Social Media

ಭಾನುವಾರ, 02 ಆಗಸ್ಟ್ 2026
Light
Dark

ಪತ್ನಿ ಕೊಲೆಗೈದಿದ್ದ ಪತಿಗೆ ಜೀವಾವಧಿ ಶಿಕ್ಷೆ

court

ಮಂಡ್ಯ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ತೀರ್ಪು

ಮಂಡ್ಯ:ಪತ್ನಿಯನ್ನು ಕೊಲೆಗೈದಿದ್ದ ಅಪರಾಧ ಸಾಬೀತಾದ ಹಿನ್ನೆಲೆಯಲ್ಲಿ ಪತಿಗೆ ೨ನೇ ಅಪರ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶರಾದ ಸಯೀದುನ್ನಿಸಾ ಅವರು ಜೀವಾವಧಿ ಶಿಕ್ಷೆ ಹಾಗೂ ೧.೨೫ ಲಕ್ಷ ರೂ. ದಂಡ ವಿಧಿಸಿ ತೀರ್ಪು ನೀಡಿದ್ದಾರೆ.

ಮಳವಳ್ಳಿ ತಾಲ್ಲೂಕು ಧನಗೂರು ಗ್ರಾಮದ ಅಜ್ವಲ್ ಖಾನ್ (೩೯) ಜೀವಾವಧಿ ಶಿಕ್ಷೆಗೊಳಗಾದ ವ್ಯಕ್ತಿ. ೨೦೦೬ರ ಜ.೨೧ರಂದು ಸಲ್ಮಾ ಬೇಗಂ ಎಂಬವರನ್ನು ಅಜ್ವಲ್ ಖಾನ್ ಮದುವೆಯಾಗಿದ್ದ. ಮೂರು ವರ್ಷ ಆಕೆಯ ಜತೆ ಸಂಸಾರ ನಡೆಸಿದ ಈತ ನಂತರದ ದಿನಗಳಲ್ಲಿ ಸಲ್ಮಾ ಬೇಗಂ ಶೀಲದ ಮೇಲೆ ಅನುಮಾನಪಟ್ಟು ಮಾನಸಿಕವಾಗಿ ಹಾಗೂ ದೈಹಿಕವಾಗಿ ಹಿಂಸೆ ನೀಡುತ್ತಿದ್ದನು.

ಈ ಬಗ್ಗೆ ಸಲ್ಮಾ ಬೇಗಂ ತನ್ನ ತಂದೆ ಮತ್ತು ಸಹೋದರರಿಗೆ ತಿಳಿಸಲಾಗಿ, ಅವರು ಧೈರ್ಯ ಹೇಳಿ ಅನುಸರಿಸಿಕೊಂಡು ಜೀವನ ಮಾಡುವಂತೆ ಸಲಹೆ ನೀಡಿದ್ದರು. ಹೀಗಿದ್ದರೂ ಆರೋಪಿಯು ಆಗಾಗ್ಗೆ ಅಜಾಂ ಪಾಷ ಎಂಬ ವ್ಯಕ್ತಿಯೊಂದಿಗೆ ಸಂಬಂಧ ಇಟ್ಟುಕೊಂಡಿದ್ದೀಯಾ ಎಂದು ಶೀಲ ಶಂಕಿಸಿ,೨೦೨೩ರ ಮೇ ೮ರಂದು ಕೊಲೆ ಮಾಡಬೇಕೆಂದು ನಿರ್ಧರಿಸಿ ಬೆಳಿಗ್ಗೆ ೧೧ ಗಂಟೆ ಸಮಯದಲ್ಲಿ ಸಲ್ಮಾ ಬೇಗಂ ಮನೆಯಲ್ಲಿ ಒಬ್ಬರೇ ಇದ್ದಾಗ ತನ್ನ ಮಗನೊಂದಿಗೆ ಸೇರಿ ಕತ್ತು ಹಿಸುಕಿ ಉಸಿರುಗಟ್ಟಿಸಿ, ನಂತರ ತಲೆದಿಂಬನ್ನು ಮುಖದ ಮೇಲೆ ಅದುಮಿ ಕೊಲೆ ಮಾಡಿದ್ದನು.

ಈ ಸಂಬಂಧ ಹಲಗೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ,ಆರೋಪಿ ಅಜ್ವಲ್ ಖಾನ್ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಸದರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಡ್ಯದ ೨ನೇ ಅಪರ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದಲ್ಲಿ ವಿಚಾರಣೆ ನಡೆದು, ಆರೋಪಿಯು ತನ್ನ ಮಗನೊಂದಿಗೆ ಸೇರಿ ಪತ್ನಿಯನ್ನು ಕೊಲೆ ಮಾಡಿರುವುದು ದೃಢಪಟ್ಟ ಹಿನ್ನೆಲೆಯಲ್ಲಿ ನ್ಯಾಯಾಧೀಶರಾದ ಸಯೀದುನ್ನಿಸಾ ಅವರು ಆರೋಪಿ ಅಜ್ವಲ್ ಖಾನ್‌ಗೆ ಜೀವಾವಧಿ ಶಿಕ್ಷೆ, ೧ ಲಕ್ಷ ರೂ. ದಂಡ ಮತ್ತು ೨ ವರ್ಷಗಳ ಸಜೆ ಮತ್ತು ೨೫ ಸಾವಿರ ರೂ. ದಂಡ ವಿಧಿಸಿ ಶಿಕ್ಷೆಯ ತೀರ್ಪು ನೀಡಿದ್ದಾರೆ.

ಮೃತಳ ಮಕ್ಕಳಿಗೆ ಕಾನೂನು ಸೇವಾ ಪ್ರಾಧಿಕಾರದಿಂದ ಪರಿಹಾರ ನೀಡಲು ಆದೇಶಿಸಿದ್ದಾರೆ. ಅಭಿಯೋಜನೆಯ ಪರವಾಗಿ ಸರ್ಕಾರಿ ಅಭಿಯೋಜಕ ಹೆಬ್ಬಕವಾಡಿ ಕೆ.ನಾಗರಾಜು ವಾದ ಮಂಡಿಸಿದ್ದರು

Tags:
error: Content is protected !!