ಮೈಸೂರು : ದಲಿತರು ಬೌದ್ಧ ಧರ್ಮಕ್ಕೆ ಹೋದರೆ ಅದು ಮತಾಂತರ ಅಲ್ಲ. ಧರ್ಮದ ಬಗ್ಗೆ ಜ್ಞಾನ ಇಲ್ಲದವರು ಅದನ್ನು ಮತಾಂತರ ಅನ್ನುತ್ತಾರೆ ಅಷ್ಟೇ ಎಂದು ಸಚಿವ ಮಹದೇವಪ್ಪ ಹೇಳಿದ್ದಾರೆ.
ಮೈಸೂರಿನಲ್ಲಿ ನಡೆದ ಬೌದ್ಧ ಸಮಾವೇಶದಲ್ಲಿ ಭಾಗಿಯಾಗಿ ಮಾತನಾಡಿದ ಸಚಿವರು, ದಲಿತ ಸಮುದಾಯಕ್ಕೆ ಸ್ವಾಭಿಮಾನ ಮತ್ತು ಐಕ್ಯದ ಸಂದೇಶ ನೀಡಿದರು.
ಬೌದ್ಧ ಧರ್ಮಕ್ಕೆ ಹೋಗುವುದು ನಮ್ಮ ಸ್ವಾತಂತ್ರ್ಯದ ಸಂಕೇತ. ಭಾರತ ನಮ್ಮ ದೇಶ. ನಾವು ಈ ದೇಶದ ಮೂಲ ನಿವಾಸಿಗಳು. ದೊಣ್ಣೆ ಕೋಲು ಗನ್ನಿಂದ ನಮ್ಮ ಶಕ್ತಿಯನ್ನು ಕಡಿಮೆ ಮಾಡಲು ಬಿಡಬಾರದು. ನಮ್ಮ ವೈಚಾರಿಕತೆ, ಸಂಘಟನೆ ಇನ್ನಷ್ಟು ಗಟ್ಟಿಯಾಗಬೇಕು ಎಂದು ಕರೆ ನೀಡಿದರು.
ದಲಿತರು ನಮಗೆ ನಾವೇ ಹೊಲೆಯ ಮಾದಿಗ ಪದ ಬಳಸಿ ದೊಡ್ಡದು ಮಾಡುತ್ತಿದ್ದೇವೆ. ಇದು ನಮಗೆ ನಾಚಿಕೆ ಆಗಬೇಕು. ನಾವು ಇದಕ್ಕೆ ಬೇರೆ ಪದಗಳನ್ನು ಬಳಸಬೇಕು. ನಾನು ಚಿಕ್ಕವನ್ನಿದ್ದಾಗ ಯಾರಾದರೂ ಹೊಲೆಯ ಮಾದಿಗ ಎಂದರೆ ಜಾತಿ ನಿಂದನೆ ಕೇಸ್ ಹಾಕಿಸುತ್ತಿದ್ದೆ. ಆದರೆ ಈಗ ನಮಗೆ ನಾವೇ ಹೊಲೆಯ ಮಾದಿಗ ಎಂದು ಜೋರಾಗಿ ಹೇಳಿ ಕೊಳ್ಳುತ್ತಿದ್ದೇವೆ. ಇದು ನನಗೆ ನೋವಾಗುತ್ತಿದೆ ಎಂದು ಬೇಸರಿಸಿದರು.
ಇದನ್ನೂ ಓದಿ:-ಭಾರತದಲ್ಲಿ ಬೌದ್ಧ ಧರ್ಮ ಬೆಳೆಯಲು ಮನುವಾದಿಗಳು ಬಿಡಲಿಲ್ಲ : ಸಚಿವ ಸತೀಸ್ ಜಾರಕಿಹೊಳಿ ಕಿಡಿ
ಸಿದ್ದರಾಮಯ್ಯಗಾಗಿ ಟೋಂಕ ಕಟ್ಟಿದ್ದ ದಲಿತರು
ಚಾಮುಂಡೇಶ್ವರಿ ಕ್ಷೇತ್ರದ ಉಪಚುನಾವಣೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಗೆಲುವಿಗೆ ದಲಿತರು ಟೋಂಕ ಕಟ್ಟಿ ನಿಂತರು. ಚುನಾವಣೆ ವೇಳೆ ಯಾವುದೇ ಆಸೆ-ಆಮಿಷಕ್ಕೆ ಒಳಗಾಗದೆ ಬೆಂಬಲ ನೀಡಿದ್ದಾರೆ ಎಂದು ಅವರು ಪ್ರಶಂಸಿಸಿದರು. 2006ರಲ್ಲಿ ಸಿದ್ದರಾಮಯ್ಯ ಅವರ ರಾಜಕೀಯ ಜೀವನವನ್ನು ನಾಶಪಡಿಸುವ ರಾಜಕೀಯ ಷಡ್ಯಂತ್ರ ನಡೆದಿತ್ತು. ಆಗಲೂ ದಲಿತ ಸಮುದಾಯ ಸಿಎಂ ಸಿದ್ದರಾಮಯ್ಯ ಅವರ ಬೆನ್ನಿಗೆ ನಿಂತಿತ್ತು. ಇಂದು ಚಾಮುಂಡೇಶ್ವರಿ ಉಪಚುನಾವಣೆಯಲ್ಲಿ ಇದೇ ಐತಿಹಾಸಿಕ ಘಟನೆ ಪುನರಾವರ್ತನೆಯಾಗಿದೆ ಎಂದರು.
ಆರ್.ಎಸ್.ಎಸ್ ಉದ್ದೇಶ ಶ್ರೇಣಿಕೃತ ಸಮಾಜವನ್ನು ಜೀವಂತವಾಗಿ ಇಡುವುದಾಗಿದೆ. ಶ್ರೇಣೀಕೃತ ವ್ಯವಸ್ಥೆ ಒಳಗೆ ದಲಿತರನ್ನೆ ಆರ್.ಎಸ್.ಎಸ್ ಸೇರಿಸಿಲ್ಲ. ಬೌದ್ಧ ಧರ್ಮದಲ್ಲಿ ಇತರ ಧರ್ಮಗಳಲ್ಲಿ ಕಾಲ್ಪನಿಕ ಕಥೆಗಳಿಲ್ಲ. ಬುದ್ಧನು ನಿಜವಾದ ಮಾರ್ಗದರ್ಶಿ. ದಲಿತರು ಎರಡನೇ ದರ್ಜೆ ಪ್ರಜೆಗಳಲ್ಲ. ನಾವು ಬ್ರಾಹ್ಮಣ್ಯದ ಗುಲಾಮರಲ್ಲ. ಇಂದು ದಲಿತರು ಎಡಬಿಂಡಗಿ ಆಗಿದ್ದೇವೆ. ಮೂಢನಂಬಿಕೆಯನ್ನು ಪಾಲಿಸುತ್ತೇವೆ, ಬುದ್ದನು ಬೇಕು ಅಂತೀವಿ. ಬುದ್ಧ ಬೇಕು ಎಂದೆ ಈ ಎಡಬಿಡಂಗಿತನ ನಿಲ್ಲಬೇಕು ಎಂದು ಹೇಳಿದರು.





