Mysore
24
light rain

Social Media

ಬುಧವಾರ, 16 ಜುಲೈ 2025
Light
Dark

ಅಂಬೇಡ್ಕರ್ ಅವರ ತತ್ವ, ಆದರ್ಶ ಅಳವಡಿಸಿಕೊಳ್ಳುವುದು ಅತ್ಯಗತ್ಯ: ಡಾ. ಕುಮಾರ

ಮಂಡ್ಯ: ಭಾರತ ದೇಶದಲ್ಲಿ ಅಂಬೇಡ್ಕರ್ ಅವರು ಮಹಾನ್ ಮಾನವತಾವಾದಿ. ಸಮಾಜದಲ್ಲಿ ಪ್ರತಿಯೊಬ್ಬರಿಗೂ ಆರ್ಥಿಕ, ಸಾಮಾಜಿಕ ಹಾಗೂ ರಾಜಕೀಯ ಸಮಾನತೆ ದೊರಕಬೇಕು ಎಂದು ಶ್ರಮಿಸಿದವರು. ಅವರ ತತ್ವ, ಚಿಂತನೆ, ಆದರ್ಶಗಳನ್ನು ಪ್ರತಿಯೊಬ್ಬರೂ ಅಳವಡಿಸಿಕೊಳ್ಳುವುದು ಅತ್ಯಗತ್ಯ ಎಂದು ಜಿಲ್ಲಾಧಿಕಾರಿ ಡಾ. ಕುಮಾರ ಅಭಿಪ್ರಾಯ ವ್ಯಕ್ತಪಡಿಸಿದರು.

ಜಿಲ್ಲಾಧಿಕಾರಿ ಕಚೇರಿಯ ಮುಂಭಾಗದ ಉದ್ಯಾನವನದಲ್ಲಿ ನಡೆದ ಭಾರತ ರತ್ನ ಡಾ. ಬಿ.ಆರ್. ಅಂಬೇಡ್ಕರ್ ರವರ 133 ನೇ ಜನ್ಮ ದಿನಾಚರಣೆಯ ಅಂಗವಾಗಿ ಅಂಬೇಡ್ಕರ್ ರವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಭಾರತದಲ್ಲಿ ಡಾ. ಬಿ ಆರ್ ಅಂಬೇಡ್ಕರ್ ರವರು ಜನ್ಮ ತಾಳಿದ್ದು, ನಮ್ಮೆಲ್ಲರ ಪುಣ್ಯ, ಅವರು ನೀಡಿದ ಸಂವಿಧಾನವನ್ನು ಭಾರತೀಯರಾದ ನಾವೆಲ್ಲರೂ ಅಳವಡಿಸಿಕೊಂಡಿರುವುದು ಪುಣ್ಯದ ವಿಷಯ. ಭಾರತ ಅಸಮಾನತೆಗಳ ತವರೂರಾಗಿದ್ದ ಸಮಯದಲ್ಲಿ, ಅಸಮಾನತೆಯನ್ನು ಹೋಗಲಾಡಿಸುವಲ್ಲಿ ಅವರಿಗಾದ ಅಪಮಾನಗಳನ್ನು ಮೆಟ್ಟಿನಿಂತು, ಅಸಾಮಾನ್ಯ ಸಾಧನೆಯನ್ನು ಮಾಡಿದ್ದಾರೆ. ಅವರು ಕೇವಲ ವ್ಯಕ್ತಿಯಲ್ಲ, ದೊಡ್ಡ ಶಕ್ತಿ ಎಂದು ಹೇಳಿದರು.

ಸುಮಾರು 50,000 ಕ್ಕೂ ಹೆಚ್ಚು ಪುಸ್ತಕಗಳು ಅಂಬೇಡ್ಕರ್ ಅವರ ಮನೆಯಲ್ಲಿತ್ತು, ಅವರ ಮನೆಯನ್ನು ದೊಡ್ಡ ಖಾಸಗಿ ಗ್ರಂಥಾಲಯ ಎನ್ನಬಹುದು‌. ನಿಜವಾದ ಜ್ಞಾನದಾಹ ಉಳ್ಳವರು ಎಲ್ಲವನ್ನು ಗೆಲ್ಲುತ್ತಾರೆ ಎಂಬುದಕ್ಕೆ ಡಾ: ಬಿ.ಆರ್.ಅಂಬೇಡ್ಕರ್ ಅವರು ಸಾಕ್ಷಿಯಾಗಿದ್ದಾರೆ. ಸರ್ವ ಧರ್ಮಗಳನ್ನು ಸಮಾನತೆಯಿಂದ ಕಾಣಬೇಕು ಎಂದು ಹೇಳಿದ ದಾರ್ಶನಿಕ ಅಂಬೇಡ್ಕರ್ ಅವರಾಗಿದ್ದಾರೆ.

ಜಿಲ್ಲಾ ಪಂಚಾಯತ್‌ನ ಸಿಇಒ ಶೇಕ್ ತನ್ವೀರ್ ಆಸಿಫ್ ಮಾತನಾಡಿ, ಅಂಬೇಡ್ಕರ್ ರವರು ಅರ್ಥಶಾಸ್ತ್ರ, ಸಮಾಜಶಾಸ್ತ್ರ, ಭಾಷೆಯ ರಚನೆ, ರಾಜ್ಯಗಳ ವಿಭಜನೆ, ಮಹಿಳೆಯರ ಸಮಸ್ಯೆ, ರಾಜ್ಯ ಮತ್ತು ಅಲ್ಪಸಂಖ್ಯಾತರ ಸಮಸ್ಯೆ, ಅಸ್ಪೃಶ್ಯತೆ, ಜಾತಿ ಪದ್ಧತಿಯನ್ನು ಹೋಗಲಾಡಿಸುವ ಬಗ್ಗೆ ಇನ್ನೂ ಅನೇಕ ಪುಸ್ತಕವನ್ನು ರಚಿಸುವ ಮೂಲಕ ದೇಶದಲ್ಲಿದ್ದ ಸಮಸ್ಯೆಗಳ ಬಗ್ಗೆ ಚಿಂತನೆ ನಡೆಸಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್ ಯತೀಶ್, ಅಪರ ಜಿಲ್ಲಾಧಿಕಾರಿ ಹೆಚ್ ಎಲ್‌ ನಾಗರಾಜು, ಹೆಚ್ಚುವರಿ ಪೋಲೀಸ್ ವರಿಷ್ಠಾಧಿಕಾರಿ ತಿಮ್ಮಯ್ಯ, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಸಿದ್ದಲಿಂಗೇಶ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಮೋಹನ್, ನಗರ ಸಭೆ ಆಯುಕ್ತ ಆರ್ ಮಂಜುನಾಥ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Tags:
error: Content is protected !!