ರಾಜ್ಯದಲ್ಲಿ ಭ್ರಷ್ಟಾಚಾರ ನಿಯಂತ್ರಣಕ್ಕಾಗಿ ಲೋಕಾಯುಕ್ತರು ಆಗಾಗ್ಗೆ ದಾಳಿ ನಡೆಸುವುದು ಮಾಧ್ಯಮಗಳಲ್ಲಿ ವರದಿಯಾಗುತ್ತವೆ. ಈಗಿನ ಪತ್ರಿಕಾ ವರದಿಗಳ ಪ್ರಕಾರ, ಮೂರೂವರೆ ವರ್ಷಗಳಲ್ಲಿ ೧,೨೩೦ ಕೇಸ್ಗಳು ದಾಖಲಾಗಿ ೧೬೭ ಪ್ರಕರಣಗಳಲ್ಲಿ ಶಿಕ್ಷೆ ಆಗಿದೆ ಅಂತೆ. ಜನಸಾಮಾನ್ಯರಿಗೂ ಗೊತ್ತಿದೆ ಭ್ರಷ್ಟಾಚಾರಿಗಳ ಸಂಖ್ಯೆ ದೊಡ್ಡದಾಗಿರುತ್ತದೆ, ಆದರೆ ಶಿಕ್ಷೆಗೊಳಗಾಗುವವರ ಸಂಖ್ಯೆ ಬಹಳ ಕಡಿಮೆ ಎಂಬುದು. ಹಲವಾರು ಸಂದರ್ಭಗಳಲ್ಲಿ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಲು ಸರ್ಕಾರದಿಂದ ಅನುಮತಿ ಸಿಗುತ್ತಿಲ್ಲ ಎಂಬುದು ಮಾಧ್ಯಮಗಳ ವರದಿಯಿಂದಲೇ ಜನರಿಗೆ ಗೊತ್ತಾಗುತ್ತದೆ.
೧,೪೫೭ ಕೋಟಿ ರೂ. ಹಗರಣದಲ್ಲಿ ಭ್ರಷ್ಟಾಚಾರದ ಆರೋಪ ಎದುರಿಸುತ್ತಿರುವ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಲೋಕಾಯುಕ್ತರು ಸರ್ಕಾರಕ್ಕೆ ಬರೆದ ಪತ್ರಕ್ಕೆ ಅನುಮತಿ ದೊರೆತಿಲ್ಲ. ೪ರಿಂದ ೬ ಜ್ಞಾಪನಾ ಪತ್ರಗಳನ್ನು ಬರೆದರೂ ಉತ್ತರವಿಲ್ಲ ಎಂಬುದು ಮಾಧ್ಯಮಗಳಿಂದಲೇ ತಿಳಿದುಬಂದಿದೆ. ಇದರಿಂದ ಭ್ರಷ್ಟಾಚಾರದ ನಿರ್ಮೂಲನೆಗಾಗಿ ಸೂಕ್ತ ಕ್ರಮ ಕೈಗೊಳ್ಳಲು ಸರ್ಕಾರಕ್ಕೆ ಮನಸ್ಸಿಲ್ಲವೆಂಬ ಅನುಮಾನ ಜನಸಾಮಾನ್ಯರಲ್ಲಿ ಬರುವುದರಲ್ಲಿ ಸಂಶಯವಿಲ್ಲ.
ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಇತ್ತೀಚಿನ ಹರಿತವಾದ ಹೇಳಿಕೆಗಳನ್ನು ನೋಡಿದಾಗ ಭ್ರಷ್ಟಾಚಾರವನ್ನು ಬಗ್ಗುಬಡಿಯಲು ಮುಂದಾಗುತ್ತಾರೆಂದು ಆಶಾಭಾವನೆ ಇಟ್ಟುಕೊಳ್ಳಬಹುದೇನೋ?
-ಎ.ಎಸ್. ಗೋಪಾಲಕೃಷ್ಣ, ಮೈಸೂರು



