ಶ್ರೀರಂಗಪಟ್ಟಣ : ಅನೈತಿಕ ಸಂಬಂಧದ ಶಂಕೆಯಿಂದ ಪತಿಯೇ ಪತ್ನಿಯನ್ನು ಹತ್ಯೆ ಮಾಡಿರುವ ಘಟನೆ ತಾಲ್ಲೂಕಿನ ಆಲಗೂಡು ಗ್ರಾಮದಲ್ಲಿ ನಡೆದಿದೆ.
ಗ್ರಾಮದ ರಶ್ಮಿ(೩೫) ಎಂಬಾಕೆ ಕೊಲೆಯಾದ ಗೃಹಿಣಿಯಾಗಿದ್ದು, ಪತಿ ರಮೇಶ್(೪೨) ಎಂಬಾತ ಕಬ್ಬಿಣದ ರಾಡ್ನಿಂದ ತಲೆಗೆ ಒಡೆದು ಕೊಲೆ ಮಾಡಿರುವುದಾಗಿ ತಿಳಿದು ಬಂದಿದೆ.
ಇವರಿಗೆ ೧೩ ವರ್ಷದ ಮಗ, ೧೨ ವರ್ಷದ ಪುತ್ರಿ ಇದ್ದಾರೆ. ಕಳೆದ ಹಲವು ದಿನಗಳಿಂದಲೂ ಗಂಡ ಹೆಂಡತಿ ನಡುವೆ ಜಗಳ ನಡೆಯುತ್ತಿದ್ದು, ಅಕ್ಕಪಕ್ಕದವರು ಇದು ಮಾಮೂಲಿ ಎಂದುಕೊಂಡಿದ್ದರು. ಇತ್ತೀಚೆಗೆ ಇವರ ಜಗಳ ಬಿಡಿಸಲೂ ಯಾರೂ ಬರುತ್ತಿರಲಿಲ್ಲ ಎನ್ನಲಾಗಿದೆ. ರಮೇಶ ಹೊರಗೇ ಊಟ ಮಾಡಿಕೊಂಡು ಬರುತ್ತಿದ್ದರೆ, ರಶ್ಮಿ ಮನೆಯಲ್ಲಿ ಊಟ ಮಾಡಿಕೊಂಡಿದ್ದರೆಂದು ತಿಳಿದುಬಂದಿದೆ.
ಬುಧವಾರ ರಾತ್ರಿ ಸುಮಾರು ೭.೩೦ರ ಸಮಯದಲ್ಲಿ ಜಗಳ ವಿಕೋಪಕ್ಕೆ ಹೋಗಿ ಪತಿ ರಮೇಶ ಕಬ್ಬಿಣದ ಸಲಾಕೆಯಿಂದ ತನ್ನ ಪತ್ನಿ ರಶ್ಮಿಯ ತಲೆಗೆ ಹೊಡೆದು ಹೊರ ಬಂದಿದ್ದಾನೆ. ಬಂದು ಸ್ನೇಹಿತರಿಗೆ ಪೋನ್ ಮಾಡಿ ನನ್ನ ಹೆಂಡತಿಯನ್ನು ಹೊಡೆದು ಕೊಂದಿರುವುದಾಗಿ ವಿಷಯ ತಿಳಿಸಿದ್ದು, ಕೂಡಲೇ ಮನೆಗೆ ಬಂದು ನೋಡಲಾಗಿ ರಕ್ತದ ಮಡುವಿನಲ್ಲಿ ರಶ್ಮಿ ಬಿದ್ದಿದ್ದರೆನ್ನಲಾಗಿದೆ.
ಇನ್ನೂ ಉಸಿರಾಡುತ್ತಿರುವುದನ್ನು ಗಮನಿಸಿದ ನೆರೆಹೊರೆಯವರು ಕೂಡಲೇ ಗಾಯಾಳುವನ್ನು ಮಂಡ್ಯದ ಮಿಮ್ಸ್ ಆಸ್ಪತ್ರೆಗೆ ದಾಖಲಿಸಿದರಾದರೂ ಕೊನೆಯುಸಿರೆಳೆದರೆಂದು ತಿಳಿದುಬಂದಿದೆ. ಈ ಸಂಬಂಧ ಅರಕೆರೆ ಠಾಣಾ ಪೋಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.




