ಮಂಡ್ಯ : ಗ್ರಾಮೀಣ ಭಾಗದ ಜನರ ಜೀವನೋಪಯ ಮಾರ್ಗಕ್ಕೆ ವರದಾನವಾಗಿರುವ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯು 2024-25ನೇ ಸಾಲಿನಲ್ಲಿ ಶೇ.102 ರಷ್ಟು ಗುರಿ ಮೀರಿದ ಸಾಧನೆ ಮಾಡುವ ಮೂಲಕ ಮಂಡ್ಯ ಜಿಲ್ಲಾ ಪಂಚಾಯತ್ ಉತ್ತಮ ಸಾಧನೆ ಮಾಡಿದೆ.
ಮ-ನರೇಗಾ ಯೋಜನೆಯಡಿ ಜಿಲ್ಲೆಯಲ್ಲಿ ಒಟ್ಟು 3,44,904 ಲಕ್ಷ ಕುಟುಂಬಗಳಿಗೆ ಉದ್ಯೋಗ ಚೀಟಿ ವಿತರಿಸಲಾಗಿದೆ. ಇದರಲ್ಲಿ 1,46,039 ಕುಟುಂಬಗಳ ಉದ್ಯೋಗ ಚೀಟಿಗಳು ಸಕ್ರಿಯವಾಗಿದ್ದು, 258697 ಫಲಾನುಭವಿಗಳು ಇದರ ಪ್ರಯೋಜನ ಪಡೆದುಕೊಂಡಿದ್ದಾರೆ.
ಗುರಿ ಸಾಧಿಸಿರುವ ತಾಲ್ಲೂಕು;
ಜಿಲ್ಲೆಯಲ್ಲಿ ಒಟ್ಟು 27 ಲಕ್ಷ ಮಾನವ ದಿನಗಳ ಗುರಿ ನಿಗಧಿಯಾಗಿತ್ತು. ಇದರಲ್ಲಿ ಜಿಲ್ಲೆ 2769096 ಗುರಿ ಸಾಧಿಸಿದ್ದು, ಶೇ.102.55 ರಷ್ಟು ಗುರಿ ಸಾಧಿಸಿದೆ. ಜಿಲ್ಲೆಯ ಕೆ.ಆರ್ ಪೇಟೆ ತಾಲ್ಲೂಕು ಶೇ.144.55 ರಷ್ಟು ಗುರಿ ಸಾಧನೆ ಮಾಡಿದೆ. ನಿಗದಿತ ಗುರಿ ಮೀರಿದ ಸಾಧನೆ ಮಾಡಿದೆ. ಈ ತಾಲೂಕಿನಲ್ಲಿ ಒಟ್ಟು 528538 ಮಾನವ ದಿನ ಸೃಜನೆ ಗುರಿ ಹೊಂದಲಾಗಿದ್ದು, ಇದರಲ್ಲಿ 764005 ಮಾನವ ದಿನಗಳನ್ನು ಪೂರ್ತಿಗೊಳಿಸಿ ದಾಖಲೆ ಬರೆದಿದೆ ಹಾಗೂ ಮದ್ದೂರು ತಾಲ್ಲೂಕಿನ 649083 ಮಾನವ ದಿನ ಗುರಿಯಲ್ಲಿ 689083 ಪೂರೈಸಿ ಶೇ.106.63 ರಷ್ಟು ಸಾಧನೆ ಮಾಡಿದೆ. ಗುರಿಗೂ ಮೀರಿ ಸಾಧನೆ ಮಾಡಿದ್ದು, ಇನ್ನೂ ಉಳಿದ 05 ತಾಲ್ಲೂಕುಗಳಲ್ಲಿ ಶೇ 70 ರಿಂದ 90 ರಷ್ಟು ಮಾನವದಿನ ಸೃಜಿಸಿದೆ. ಮನರೇಗಾ ಯೋಜನೆ ಉದ್ಯೋಗ ನೀಡಿ ಜನರ ವಲಸೆ ತಪ್ಪಿಸಿ ಗ್ರಾಮೀಣ ಜನರ ಸಬಲೀಕರಣಕ್ಕೆ ಸಾಕ್ಷಿಯಾಗಿದೆ.
ಕ್ರಿಯಾ ಯೋಜನೆ ;
2025-26 ನೇ ಸಾಲಿನಲ್ಲಿ ಎಲ್ಲಾ ಗ್ರಾಮ ಪಂಚಾಯಿತಿಗಳ ಕ್ರಿಯಾ ಯೋಜನೆಯನ್ನು ಅನುಮೋದನೆ ನೀಡಲಾಗಿದೆ. ಗ್ರಾಮ ಪಂ. ಗಳಲ್ಲಿ ಗ್ರಾಮೀಣ ಭಾಗಕ್ಕೆ ಹಾಗೂ ಜನರ ಅನುಕೂಲವಾಗುವಂತಹ ಕಾಮಗಾರಿಗಳನ್ನು ಅನುಮೋದನೆ ನೀಡಲಾಗಿದ್ದು ಕಾಮಗಾರಿಗಳ ಅನುಷ್ಟಾನಕ್ಕೆ ಕ್ರಮವಹಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.
ಕೂಲಿ ಹೆಚ್ಚಳ ;
ಈ ಯೋಜನೆಯಡಿ ಆಯಾ ರಾಜ್ಯಗಳಿಗೆ ಅನುಗುಣವಾಗಿ ಕೂಲಿಯನ್ನು ನಿಗದಿ ಮಾಡಲಾಗಿದೆ. ಇದೀಗ ಕೇಂದ್ರ ಗ್ರಾಮೀಣಾಭಿವೃದ್ಧಿ ಮಂತ್ರಾಲಯವು ಮ-ನರೇಗಾ ಯೋಜನೆ ಕೂಲಿ ಹೆಚ್ಚಳ ಮಾಡಿ ಆದೇಶ ಹೊರಡಿಸಿದೆ. ಇದರನ್ವಯ ಕರ್ನಾಟಕದಲ್ಲಿ 2024-25 ನೇ ಸಾಲಿನಲ್ಲಿ 349 ರೂ. ಗಳಿಂದ ಕೂಲಿಯನ್ನು 2025-26 ನೇ ಸಾಲಿನಲ್ಲಿ 370 ರೂ.ಗಳಿಗೆ ಕೂಲಿ ಹೆಚ್ಚಳ ಮಾಡಿದೆ. ಏಪ್ರಿಲ್ 1, 2025 ರಿಂದ 370 ರೂ.ಗಳ ಕೂಲಿ ಜಾರಿಯಲ್ಲಿರುತ್ತದೆ.
ಏಕೀಕೃತ ಸಹಾಯವಾಣಿ ;
ಮಹಾತ್ಮ ಗಾಂಧಿ ನರೇಗಾ ಯೋಜನೆ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಯೋಜನೆಗಳ ಮಾಹಿತಿಗಾಗಿ ಹಾಗೂ ಕುಂದುಕೊರತೆಗಳ ನಿವಾರಣೆಗಾಗಿ ಏಕೀಕೃತ ಸಹಾಯವಾಣಿ 8277506000 ಅನ್ನು ಸ್ಥಾಪಿಸಲಾಗಿರುತ್ತದೆ. ಯಾವುದೇ ಮಾಹಿತಿಗಾಗಿ ಹಾಗೂ ಕುಂದುಕೊರತೆಗಳ ನಿವಾರಣೆಗಾಗಿ 8277506000 ಸಂಖ್ಯೆಗೆ ಕರೆ ಮಾಡಬಹುದು.
ಮ-ನರೇಗಾ ಯೋಜನೆಯಡಿಯಲ್ಲಿ ವೈಯಕ್ತಿಕ ಮತ್ತು ಸಮುದಾಯ ಕಾಮಗಾರಿಗಳ ಒಳಗೊಂಡಂತೆ 2024-25 ನೇ ಸಾಲಿನಲ್ಲಿ ವಾರ್ಷಿಕ ಗುರಿ ಮೀರಿ ಮಂಡ್ಯ ಜಿಲ್ಲೆ ಶೇ. 102 ರಷ್ಟು ಮಾನವದಿನ ಸೃಜನೆ ಮಾಡಿ ಪ್ರಗತಿ ಸಾಧಿಸಿದೆ. ಮನರೇಗಾ ಯೋಜನೆಯು ಗ್ರಾಮೀಣ ಭಾಗದ ಜನರ ಬದುಕಿಗೆ ಆಶಾಕಿರಣವಾಗಿದ್ದು ಏ.01 ಕೂಲಿದರ ಹೆಚ್ಚಾಗಿದ್ದು ನರೇಗಾ ಯೋಜೆಯ ಕೂಲಿಕಾರರು ನಿರಂತರವಾಗಿ ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕು ಎಂದು ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ನಂದಿನಿ ಕೆ.ಆರ್ ತಿಳಿಸಿದ್ದಾರೆ.





