Mysore
23
overcast clouds

Social Media

ಶನಿವಾರ, 25 ಜುಲೈ 2026
Light
Dark

ಕಾಡು ಪ್ರಾಣಿಗಳ ಹಾವಳಿ ನಿಯಂತ್ರಿಸಲು ಸೂಕ್ತ ಕ್ರಮ: ಡಿಸಿಎಫ್‌ ಶ್ರೀಪತಿ

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು

ಹನೂರು: ಕಾಡು ಪ್ರಾಣಿಗಳ ಹಾವಳಿ ನಿಯಂತ್ರಿಸಲು ರೈಲ್ವೆ ಬ್ಯಾರಿಕೇಡ್, ಆನೆಕಂದಕ ನಿರ್ಮಾಣ ಮಾಡಿ ಸೂಕ್ತ ಕ್ರಮ ವಹಿಸಲಾಗುವುದು ಎಂದು ಬಿ.ಆರ್. ಟಿ ಡಿಸಿ.ಎಫ್ ಶ್ರೀಪತಿ ತಿಳಿಸಿದರು.

ಹನೂರು ತಾಲೂಕಿನ ಬೈಲೂರು ಗ್ರಾಮದಲ್ಲಿ ಬಿ ಆರ್ ಟಿ ವಲಯ ವ್ಯಾಪ್ತಿಯ ಬೈಲೂರು ವಲಯದ ವ್ಯಾಪ್ತಿಯ ಮಾನವ ವನ್ಯಜೀವಿ ಪ್ರಾಣಿಗಳ ಸಂಘರ್ಷ ರೈತ ಮುಖಂಡರ ಕುಂದು ಕೊರತೆ ಸಭೆಯಲ್ಲಿ ಅವರು ಮಾತನಾಡಿದರು.

ಇತ್ತೀಚೆಗೆ ಒಂಟಿ ಸಲಗವೊಂದು ರೈತರ ಜಮೀನುಗಳಿಗೆ ಲಗ್ಗೆ ಇಟ್ಟು ತೊಂದರೆ ನೀಡುತ್ತಿರುವುದು ಗಮನಕ್ಕೆ ಬಂದಿದೆ. ಈಗಾಗಲೇ ರೈಲ್ವೆ ಬ್ಯಾರಿಕೇಡ್ ಇಲ್ಲದೆ ಇರುವ ಕಡೆ ರೈಲ್ವೆ ಬ್ಯಾರಿಕೇಡ್ ನಿರ್ಮಾಣ ಮಾಡಲು ಸರ್ಕಾರಕ್ಕೆ ಅನುದಾನಕ್ಕಾಗಿ ಮನವಿ ಸಲ್ಲಿಸಲಾಗಿದೆ. ಅನುದಾನ ಬಿಡುಗಡೆಯಾದ ನಂತರ ಸೂಕ್ತ ಕ್ರಮ ವಹಿಸಲಾಗುವುದು. ಕಾಡು ಪ್ರಾಣಿಗಳಿಂದ ಬೆಳೆ ನಾಶವಾಗಿರುವ ರೈತರಿಗೆ ಪರಿಹಾರ ನೀಡಲು ವಿಳಂಬವಾಗಿದೆ. ಸರ್ಕಾರ ಆನ್‌ಲೈನ್ ವ್ಯವಸ್ಥೆ ಮಾಡಿರುವುದರಿಂದ ತಾತ್ಕಾಲಿಕವಾಗಿ ತೊಂದರೆಯಾಗಿದೆ. ಕಾಡು ಪ್ರಾಣಿಗಳಿಂದ ಬೆಳೆ ನಾಶವಾಗಿದ್ದರೆ ರೈತರು ಮಾಹಿತಿ ನೀಡಿದ ತಕ್ಷಣ ನಮ್ಮ ಸಿಬ್ಬಂದಿಗಳು ಜಮೀನುಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಜಿಪಿಎಸ್ ಫೋಟೋ ಅಪ್ಲೋಡ್ ಮಾಡಿದ ನಂತರ ಪರಿಹಾರ ವಿತರಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ತುರ್ತು ಪರಿಹಾರ ನೀಡಲು ಕ್ರಮವಹಿಸಲಾಗುವುದು ಎಂದರು.

ಪರಿಸರ ಪ್ರೇಮಿ ಎನ್ ಕೃಷ್ಣಮೂರ್ತಿ ಮಾತನಾಡಿ ಹಲವಾರು ವರ್ಷಗಳಿಂದ ನಮ್ಮ ಭಾಗದಲ್ಲಿ ಹುಲಿ, ಚಿರತೆ, ಆನೆ ಎಲ್ಲಾ ಪ್ರಾಣಿಗಳು ನೆಮ್ಮದಿಯಾಗಿ ಅರಣ್ಯದಲ್ಲಿ ಸಮೃದ್ಧಿಯಾಗಿ ಓಡಾಡಿಕೊಂಡಿದೆ. ಇತ್ತೀಚಿನ ದಿನಗಳಲ್ಲಿ ಬೇರೆ ಕಡೆ ಪುಂಡಾಟ ನಡೆಸುವ ಆನೆ, ಹುಲಿ, ಚಿರತೆಗಳನ್ನು ನಮ್ಮ ಭಾಗದ ಅರಣ್ಯ ಪ್ರದೇಶಗಳಿಗೆ ತಂದು ಬಿಡುತ್ತಿರುವುದರಿಂದ ನಮ್ಮ ಭಾಗದ ರೈತರಿಗೆ ತೊಂದರೆಯಾಗುತ್ತಿದೆ. ಕಷ್ಟಪಟ್ಟು ಬೆಳೆದ ಬೆಳೆಗಳನ್ನು ಸಂರಕ್ಷಣೆ ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಪ್ರತಿನಿತ್ಯ ಕಾಡುಪ್ರಾಣಿಗಳ ಭಯದಲ್ಲೇ ಜೀವನ ಕಳೆಯುವಂತಾಗಿದೆ ನಾವು ಪ್ರತಿಭಟನೆ ಸೇರಿದಂತೆ ಎಲ್ಲಾ ರೀತಿಯ ಹೋರಾಟ ಮಾಡಿದ್ದೇವೆ. ಇನ್ನು ಮುಂದೆ ನಾವು ಯಾವುದೇ ಹೋರಾಟ ಮಾಡುವುದಿಲ್ಲ. ನೀವು ನಮಗೆ ವಿಷ ಕೊಟ್ಟುಬಿಡಿ ಎಂದು ಆಕ್ರೋಶ ಹೊರ ಹಾಕಿದರು.

ಈ ವೇಳೆ ಡಿಸಿಎಫ್ ಶ್ರೀಪತಿ ಮಾತನಾಡಿ ಈ ಹಿಂದೆ ಬೇರೆ ಕಡೆಯಿಂದ ಪ್ರಾಣಿಗಳನ್ನು ತಂದು ಬಿಡಲಾಗುತ್ತಿತ್ತು. ನಾನು ಬಂದ ನಂತರ ಯಾವುದೇ ಕಾರಣಕ್ಕೂ ಪ್ರಾಣಿಗಳನ್ನು ತಂದು ಬಿಟ್ಟಿಲ್ಲ. ನಾಗರಹೊಳೆ ಬಂಡಿಪುರ ಅರಣ್ಯಕ್ಕೆ ಬಿಡಲಾಗುತ್ತಿದೆ ಎಂದು ಸ್ಪಷ್ಟಪಡಿಸಿದರು.

ರೈತ ಮುಖಂಡ ಕುಮಾರ್ ಮಾತನಾಡಿ ಬೈಲೂರು ಹಾಗೂ ಚಿಕ್ಕರಂಗಶೆಟ್ಟಿ ದೊಡ್ಡಿ ಸಮೀಪ ಒಂದು ಪುಂಡಾನೆ ರಾತ್ರಿ ವೇಳೆ ರೈತರ ಜಮೀನುಗಳಲ್ಲಿ ಇದ್ದರೆ ಬೆಳಗಿನ ವೇಳೆ ಮುಖ್ಯರಸ್ತೆಗಳಲ್ಲಿ ಓಡಾಡುತ್ತಿದೆ. ಈ ಕೂಡಲೇ ಈ ಆನೆಯನ್ನು ಸ್ಥಳಾಂತರ ಮಾಡಿ ರೈತರಿಗೆ ಅನುಕೂಲ ಕಲ್ಪಿಸಬೇಕು. ಒಂದೊಮ್ಮೆ ಸ್ಥಳಾಂತರ ಮಾಡದಿದ್ದರೆ ಹಲವಾರು ರೈತರಗಳನ್ನು ಬಲಿ ತೆಗೆದುಕೊಳ್ಳುತ್ತದೆ. ಈಗಾಗಲೇ ರೈತನೋರ್ವ ಆನೆ ದಾಳಿಗೆ ಸಿಲುಕಿ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ ಎಂದರು.

ಮತ್ತೋರ್ವ ರೈತ ಮಾತನಾಡಿ, ರೈಲ್ವೆ ಬ್ಯಾರಿಕೇಡ್ ಅಳವಡಿಸದೆ ಇರುವ ಸ್ಥಳಗಳಲ್ಲಿ ಕಾಡಾನೆಗಳು ಜಮೀನುಗಳಿಗೆ ಲಗ್ಗೆ ಇಟ್ಟು ಬೆಳೆಗಳನ್ನು ನಾಶಪಡಿಸುತ್ತಿದೆ. ಈ ಕೂಡಲೇ ರೈಲ್ವೆ ಬ್ಯಾರಿ ಕೇಡ್ ಅಳವಡಿಸಿ ರೈತರಿಗೆ ಅನುಕೂಲ ಕಲ್ಪಿಸಬೇಕು, ಕೆಲವು ಕಡೆ ಇರುವ ರೈಲ್ವೆ ಬ್ಯಾರಿ ಕೇಡ್ ದುರಸ್ತಿ ಆಗಿರುವುದರಿಂದ ರೈತರಿಗೆ ಸಮಸ್ಯೆಯಾಗುತ್ತಿದೆ. ಈ ಕೂಡಲೇ ದುರಸ್ತಿ ಪಡಿಸಿ ರೈತರಿಗೆ ಅನುಕೂಲ ಕಲ್ಪಿಸಬೇಕು ಎಂದರು.

ಸಭೆಯಲ್ಲಿ ಮಲೆ ಮಹದೇಶ್ವರವನ್ನು ಜೀವಿಧಾಮದ ಡಿಸಿಎಫ್ ಭಾಸ್ಕರ್ ಪಿಜಿ ಪಾಳ್ಯ ವನ್ಯಜೀವಿ ವಲಯದ ವಲಯ ಅರಣ್ಯ ಅಧಿಕಾರಿ ಪುಟ್ಟರಾಜು, ಇನ್ಸ್ಪೆಕ್ಟರ್ ಆನಂದಮೂರ್ತಿ, ಬೈಲೂರು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಸದಾನಂದ ಸೇರಿದಂತೆ ರೈತ ಮುಖಂಡರುಗಳು ಹಾಜರಿದ್ದರು.

 

Tags:
error: Content is protected !!