ಮಂಡ್ಯ: ಮದುವೆಯಾಗಲು ನಿರಾಕರಿಸಿದ ಪರಿಣಾಮ ಯುವತಿಯ ಹಿಂದೆ ಬಿದ್ದ ವ್ಯಕ್ತಿಯೋರ್ವ ನಾಲ್ಕು ವರ್ಷಗಳಿಂದ ಆಕೆಗೆ ಕಿರುಕುಳ ನೀಡಿರುವ ಆರೋಪ ಕೇಳಿಬಂದಿದೆ.
ಆಕೆಗೆ ನಿಶ್ಚಯವಾಗಿದ್ದ ಮದುವೆಯನ್ನೆಲ್ಲಾ ರದ್ದು ಮಾಡಿಸಿದ್ದಲ್ಲದೇ ಆಕೆಗೆ ಆಸಿಡ್ ದಾಳಿ ಮಾಡುವ ಬೆದರಿಕೆಯೊಡ್ಡಿದ್ದ ಆರೋಪದಲ್ಲಿ ಚಿಕ್ಕಬಳ್ಳಿ ಬಾಲಕೃಷ್ಣ ಎಂಬುವವನ ವಿರುದ್ಧ ಮಂಡ್ಯದ ಕೆರಗೋಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
4 ವರ್ಷಗಳ ಹಿಂದೆ ಸಂತ್ರಸ್ತೆ ಹಾಗೂ ಬಾಲಕೃಷ್ಣಗೆ ಮದುವೆ ನಿಶ್ಚಯವಾಗಿತ್ತು. ಈ ವೇಳೆ ಸಂತ್ರಸ್ತೆಯು ಬಾಲಕೃಷ್ಣ ಜೊತೆಯಲ್ಲಿ ಹಲವಾರು ಫೋಟೋಗಳನ್ನು ತೆಗೆಸಿಕೊಂಡಿದ್ದಳು. ಆದರೆ ಬಾಲಕೃಷ್ಣ ಹಲವು ಸುಳ್ಳುಗಳನ್ನು ಹೇಳಿ ಮದುವೆ ನಿಶ್ಚಯ ಮಾಡಿಕೊಂಡಿದ್ದು ಗೊತ್ತಾಯಿತು. ಈ ವೇಳೆ ಸಂತ್ರಸ್ತೆ ನಾನು ಆತನ ಜೊತೆ ಮದುವೆ ಆಗಲ್ಲ ಎಂದು ಮದುವೆಗೆ ನಿರಾಕರಿಸಿದ್ದಳು. ಇದರಿಂದ ಕೆರಳಿದ್ದ ಬಾಲಕೃಷ್ಣ ಅಂದಿನಿಂದಲೇ ಯುವತಿಗೆ ಕಿರುಕುಳ ನೀಡುತ್ತಾ ಬಂದಿದ್ದ.
ಯುವತಿ ಜೊತೆ ಇದ್ದ ಹಳೆಯ ಫೋಟೋಗಳನ್ನು ತೋರಿಸಿ ನಿಶ್ಚಯವಾಗಿದ್ದ ಮದುವೆಯನ್ನೆಲ್ಲಾ ರದ್ದು ಮಾಡುತ್ತಾ ಬಂದಿದ್ದ. ಈ ಹಿನ್ನೆಲೆಯಲ್ಲಿ ಸಂತ್ರಸ್ತೆ ನೀಡಿದ್ದ ದೂರಿನ ಮೇರೆಗೆ ಕೆರಗೋಡು ಪೊಲೀಸ್ ಠಾಣೆಯಲ್ಲಿ ಬಾಲಕೃಷ್ಣ ವಿರುದ್ಧ ಎಫ್ಐಆರ್ ದಾಖಲಾಗಿದೆ.





