Mysore
22
broken clouds

Social Media

ಶನಿವಾರ, 16 ಮೇ 2026
Light
Dark

ಗ್ರಾಪಂ ಅಧಿಕಾರಿಗಳ ನಿಗಾಕ್ಕೆ ಜಿಪಿಎಸ್ ಸಿಸ್ಟಂ  

ಕೆ.ಬಿ.ರಮೇಶನಾಯಕ

ಬಯೋಮೆಟ್ರಿಕ್ ಹಾಜರಾತಿ ಜತೆಗೆ ಜಿಪಿಎಸ್

ವ್ಯವಸ್ಥೆ ಜಾರಿಗೆ ಚಿಂತನೆ ಹಾಜರಾತಿ ಹಾಕಿ ಬೇಕಾಬಿಟ್ಟಿ ಓಡಾಡುವ ಸಿಬ್ಬಂದಿಗಳಿಗೆ ಬ್ರೇಕ್

ಮೈಸೂರು: ಗ್ರಾಮೀಣ ಜನರಿಗೆ ಮೂಲಸೌಕರ್ಯಗಳನ್ನು ಒದಗಿಸುವ ಜತೆಗೆ, ರಾಜ್ಯ, ಕೇಂದ್ರ ಸರ್ಕಾರಗಳ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುವಂತಹ ಮಹತ್ವದ ಹೊಣೆಗಾರಿಕೆ ಹೊಂದಿರುವ ಗ್ರಾಪಂಗಳ ಅಧಿಕಾರಿಗಳ ಕಣ್ಣಾ-ಮುಚ್ಚಾಲೆಯಾಟಕ್ಕೆ ಬ್ರೇಕ್ ಹಾಕಲು ರಾಜ್ಯ ಸರ್ಕಾರ ಜಿಪಿಎಸ್ ವ್ಯವಸ್ಥೆಯನ್ನು ಜಾರಿಗೆ ತರಲು ಚಿಂತನೆ ನಡೆಸಿದೆ.

ಗ್ರಾಮ ಪಂಚಾಯಿತಿಗಳಲ್ಲಿ ಬಿಲ್ ಕಲೆಕ್ಟರ್‌ರಿಂದ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ತನಕವೂ ಬಯೋಮೆಟ್ರಿಕ್ ಹಾಜರಾತಿ ವ್ಯವಸ್ಥೆ ಇದ್ದರೂ ಸಾರ್ವಜನಿಕರಿಗೆ ಕಚೇರಿ ಸಮಯದಲ್ಲಿ ಸಿಗದೆ ಇರುವ ದೂರುಗಳು ಬಂದಿರುವ ಕಾರಣಕ್ಕಾಗಿ ರಾಜ್ಯಸರ್ಕಾರ ಈಗ ಬೇಕಾಬಿಟ್ಟಿಯಾಗಿ ಓಡಾಡುವ ಅಧಿಕಾರಿಗಳ ಮೇಲೆ ಕಣ್ಗಾವಲು ಇಡಲು ಜಿಪಿಎಸ್ ಮೊರೆ ಹೋಗುತ್ತಿದೆ. ಈಗಾಗಲೇ ಇದಕ್ಕೆ ಬೇಕಾದ ಸಿದ್ಧತೆ ಮಾಡಿಕೊಳ್ಳುವಂತೆ ಸಂಬಂಧಿಸಿದ ಎಲ್ಲ ಪಂಚಾಯಿತಿಗಳಿಗೆ ಮೌಖಿಕ ಸೂಚನೆ ನೀಡಲಾಗಿದೆ.

ಈ ನೂತನ ವ್ಯವಸ್ಥೆ ಶೀಘ್ರದಲ್ಲೇ ಜಾರಿಗೆ ಬಂದರೆ ಕಚೇರಿ ಸಮಯದಲ್ಲಿ ಕಾರ್ಯನಿಮಿತ್ತ ಹೊರಗಡೆ ಇದ್ದೇನೆ ಎನ್ನುವ ಮಾತಿಗೆ ಕಡಿವಾಣ ಬೀಳಲಿದೆ. ರಾಜ್ಯದಲ್ಲಿ ೬ ಸಾವಿರ ಗ್ರಾಮ ಪಂಚಾಯಿತಿಗಳಿದ್ದು, ಇಲ್ಲಿ ಪೌರ ಕಾರ್ಮಿಕರು, ದ್ವಿತೀಯ ದರ್ಜೆ ಸಹಾಯಕರು, ಲೆಕ್ಕ ಸಹಾಯಕರು, ಬಿಲ್ ಕಲೆಕ್ಟರ್, ಕಾರ್ಯದರ್ಶಿ, ಪಿಡಿಒಗಳು, ನೀರುಗಂಟಿಗಳು, ಡಾಟಾ ಎಂಟ್ರಿ ಆಪರೇಟರ್, ಗ್ರಂಥಪಾಲಕರು ಕಾರ್ಯನಿರ್ವಹಿಸುತ್ತಿದ್ದಾರೆ. ಅಧಿಕಾರಿಗಳ ಹಾಜರಾತಿಗೆ ಬಯೋ ಮೆಟ್ರಿಕ್ ವ್ಯವಸ್ಥೆ ಇದ್ದು, ಬೆಳಿಗ್ಗೆ ಮತ್ತು ಸಂಜೆ ಹೊತ್ತು ಪಂಚತಂತ್ರ ೨.೦ ತಂತ್ರಾಂಶದಲ್ಲಿ ಬಯೋಮೆಟ್ರಿಕ್ ಒತ್ತಬೇಕಿದೆ. ಕಾರ್ಯದರ್ಶಿ ಹಾಗೂ ಪಿಡಿಒಗಳು ಪ್ರತಿ ನಿತ್ಯ ಚಲನ-ವಲನ ವಹಿಯನ್ನು ಬರೆಯಬೇಕು. ಈ ಬುಕ್‌ನಲ್ಲಿ ತಾಲ್ಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ, ಗ್ರಾಮೀಣ ಕುಡಿಯುವ ನೀರು ಸರಬರಾಜು, ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗ, ನ್ಯಾಯಾಲಯಕ್ಕೆ ಹೋಗುತ್ತೇನೆ ಎನ್ನುವುದು, ಆಶ್ರಯ ಮನೆಗಳ ಜಿಪಿಎಸ್ ಮಾಡುವುದು, ಸ್ಥಳ ಪರಿಶೀಲನೆ ಮೊದಲಾದ ಕೆಲಸಗಳ ವಿಚಾರವನ್ನು ನಮೂದಿಸಿ ಹೋಗುತ್ತಾರೆ.

ಆದರೆ, ಜಿಪಂ, ತಾಪಂ ಕಚೇರಿಗೆ ಹೋಗದೆ ಇದ್ದರೂ ಬಹುತೇಕರು ಪುಸ್ತಕದಲ್ಲಿ ನಮೂದಿಸಿರುವುದು ಕಂಡು ಬರುತ್ತದೆ. ಬಯೋಮೆಟ್ರಿಕ್ ಹಾಜರಾತಿಯನ್ನು ಕಡ್ಡಾಯವಾಗಿ ಮಾಡಿದ್ದರೂ ಕಚೇರಿಯಲ್ಲಿ ಮಾತ್ರ ಈ ಸಿಬ್ಬಂದಿ ಲಭ್ಯವಿರುವುದಿಲ್ಲ. ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳು ಗ್ರಾಪಂಗಳ ಎಲ್ಲ ಸರ್ಕಾರಿ ನೌಕರರ ಬಯೋಮೆಟ್ರಿಕ್ ಹಾಜರಾತಿಯನ್ನು ಕಡ್ಡಾಯವಾಗಿ ಪಂಚತಂತ್ರ ೨.೦ ತಂತ್ರಾಂಶದ ಮೂಲಕ ಪಡೆದು ಪ್ರತಿ ತಿಂಗಳು ವೇತನ ಪಾವತಿಸಲು ಕ್ರಮಕೈಗೊಳ್ಳುವುದರಿಂದ ಬಯೋಮೆಟ್ರಿಕ್‌ನಲ್ಲಿ ಗೈರು ಹಾಜರಾತಿ ಇಲ್ಲದಂತೆನೋಡಿಕೊಳ್ಳುತ್ತಾರೆ. ಹೀಗಾಗಿಯೇ, ಅಧಿಕಾರಿಗಳ ಹಾಜರಾತಿ ದೊರೆತರೂ ಸಾರ್ವಜನಿಕರ ಕುಂದುಕೊರತೆಗಳಿಗೆ ಸ್ಪಂದಿಸಲು ಸಿಗುತ್ತಿಲ್ಲ ಎನ್ನುವ ದೂರಿಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಕಡಿವಾಣ ಹಾಕಲು ಮುಂದಾಗಿದೆ.

ಜಿಪಿಎಸ್ ಸಿಸ್ಟಂ: ಗ್ರಾಮ ಪಂಚಾಯಿತಿಗಳಲ್ಲಿ ಬಯೋಮೆಟ್ರಿಕ್ ಹಾಜರಾತಿಯಾದರೂ ಜಿಪಿಎಸ್ ಸಿಸ್ಟಂ ಅಳವಡಿಕೆ ಮಾಡಿದರೆ ತುಂಬಾ ಅನುಕೂಲವಾಗಲಿದೆ ಎಂದು ಹೇಳಿರುವ ಕಾರಣ ಇಂತಹ ಕ್ರಮಕ್ಕೆ ಮುಂದಾಗಿದೆ. ಪಿಡಿಒ ಹಾಗೂ ಕಾರ್ಯದರ್ಶಿಗಳು ಜಿಪಂ, ತಾಪಂ ಕಚೇರಿಗೆ ಹೋಗಿರುತ್ತೇನೆಂದು ನಮೂದಿಸಿದ್ದ ಮೇಲೆ ಅಲ್ಲಿಗೆ ಹೋಗಿರಬೇಕು. ಒಂದು ವೇಳೆ ಲಾಗ್ ಪುಸ್ತಕದಲ್ಲಿ ಬರೆದು ಬೇರೆ ಕಡೆ ಹೋಗಿದ್ದರೆ ಜಿಪಿಎಸ್ ಟ್ರ್ಯಾಕಿಂಗ್‌ನಲ್ಲಿ ಗೊತ್ತಾಗಲಿದೆ. ಇದರಿಂದಾಗಿ, ಅಧಿಕಾರಿಗಳು ಕರ್ತವ್ಯದ ಸಮಯದಲ್ಲಿ ಸಾರ್ವಜನಿಕರಿಗೆ ಲಭ್ಯವಿಲ್ಲದೆ ಬೇರೆ ಸ್ವಂತ ಕೆಲಸದಲ್ಲಿ ಭಾಗಿಯಾಗಿದ್ದರೆ ಜಿಪಿಎಸ್‌ನಲ್ಲಿ ಪತ್ತೆ ಮಾಡಿ ಕ್ರಮ ಕೈಗೊಳ್ಳಬಹುದಾಗಿದೆ. ಇದರಿಂದಾಗಿ ಅಧಿಕಾರಿಗಳು ಒಂದು ವೇಳೆ ಜಿಪಿಎಸ್ ಟ್ರ್ಯಾಕಿಂಗ್ ವೇಳೆ ಸುಳ್ಳು ಹೇಳಿ ಸಿಕ್ಕಿಬಿದ್ದರೆ ಅಂತಹವರ ವಿರುದ್ಧ ಕ್ರಮ ಕೈಗೊಳ್ಳಲು ದಾರಿಯಾಗಲಿದೆ.

ಬಯೋಮೆಟ್ರಿಕ್ ಸಹಿ ಕಡ್ಡಾಯ: 

ಪಿಡಿಒ, ಗ್ರಾಮ ಪಂಚಾಯಿತಿ ಕಾರ್ಯದರ್ಶಿ, ದ್ವಿತೀಯ ದರ್ಜೆ ಲೆಕ್ಕ ಸಹಾಯಕರು ಸೇರಿದಂತೆ ಕರ ವಸೂಲಿಗಾರರು, ಡೇಟಾ ಎಂಟ್ರಿ ಆಪರೇಟರ್, ಸ್ವಚ್ಛತಾಗಾರರು, ನೀರುಗಂಟಿಗಳು, ಗ್ರಂಥಪಾಲಕರು ಎಲ್ಲ ಸಿಬ್ಬಂದಿ ಪ್ರತಿದಿನ ಬಯೋಮೆಟ್ರಿಕ್ ಮೂಲಕ ಹಾಜರಾತಿ ದಾಖಲಿಸಬೇಕು. ‘ಪಿಡಿಒ ಹುದ್ದೆ ಕಾರ್ಯಕಾರಿ ಸ್ವರೂಪದ್ದಾಗಿರುವುದರಿಂದ ಹಾಜರಾತಿ ದಾಖಲಿಸುವುದು ಕಡ್ಡಾಯವಾಗಿರಲಿದೆ’ ಎಂದು ಸುತ್ತೋಲೆ ಸ್ಪಷ್ಟಪಡಿಸಿದೆ. ಜತೆಗೆ PBL ಗಳು ಸಾರ್ವಜನಿಕರಿಗೆ ಯಾವ ಸಮಯದಲ್ಲಿ ಕಚೇರಿಯಲ್ಲಿ ಲಭ್ಯ ಇರುತ್ತಾರೆ ಎಂಬುದನ್ನು ಮುಂಚಿತವಾಗಿ ತಿಳಿಸಬೇಕು. ಇಲ್ಲದಿದ್ದರೆ ಸಿಬ್ಬಂದಿಯ ವೇತನ ಪಾವತಿಯನ್ನು ಹಾಜರಾತಿ ದಾಖಲೆ ಆಧರಿಸಿ ಮಾಡಲು ಸೂಚನೆ ನೀಡಲಾಗಿದೆ. ಸಿಬ್ಬಂದಿಯ ಹಾಜರಾತಿ ಪರಿಶೀಲಿಸಿ ಪ್ರತಿ ತಿಂಗಳು ವೇತನ ಪಾವತಿ ಕ್ರಮ ಕೈಗೊಳ್ಳುವ ಹೊಣೆ ತಾಲ್ಲೂಕು ಪಂಚಾಯಿತಿಗಳ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ವಹಿಸಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದರು.

 

 

Tags:
error: Content is protected !!