ಹಲಗೂರು: ಇಲ್ಲಿಗೆ ಸಮೀಪದ ಗಾಣಾಳು ಜಲಪಾತದಲ್ಲಿ ಈಜಲು ಇಳಿದಿದ್ದ ಯುವಕನೊಬ್ಬ ನೀರಿನಲ್ಲಿ ಸಿಲುಕಿ ಮೃತಪಟ್ಟಿರುವ ಘಟನೆ ಶನಿವಾರ ಮಧ್ಯಾಹ್ನ ಸಂಭವಿಸಿದೆ.
ಮೃತನನ್ನು ಉತ್ತರ ಪ್ರದೇಶದ ವಾರಣಾಸಿ ಮೂಲದ ಚೋಟೆ ಲಾಲ್ ಜೈಸ್ವಾಲ್ ಅವರ ಪುತ್ರ ಸೌರಭ್ ಜೈಸ್ವಾಲ್ (೨೯) ಎಂದು ಗುರುತಿಸಲಾಗಿದೆ. ಬೆಂಗಳೂರಿನ ಬೆಳ್ಳಂದೂರಿನ ಖಾಸಗಿ ಕಂಪೆನಿಯಲ್ಲಿ ಸಾಫ್ಟ್ವೇರ್ ಡೆವಲಪರ್ ಆಗಿ ಕಾರ್ಯನಿರ್ವಹಿಸುತ್ತಿದ್ದರೆಂದು ತಿಳಿದುಬಂದಿದೆ.
ಸೌರಭ್ ಜೈಸ್ವಾಲ್ ತನ್ನ ಇಬ್ಬರು ಸ್ನೇಹಿತರೊಂದಿಗೆ ಪ್ರವಾಸಕ್ಕೆಂದು ಹಲಗೂರು ಸಮೀಪದ ಗಾಣಾಳು ಜಲಪಾತಕ್ಕೆ ಆಗಮಿಸಿದ್ದರು. ಜಲಪಾತಕ್ಕೆ ಸಾರ್ವಜನಿಕರ ಪ್ರವೇಶ ನಿಷೇಧವಾಗಿದ್ದರೂ, ಗೇಟ್ ಮೇಲಿಂದ ಹಾರಿ ಒಳಗೆ ಪ್ರವೇಶಿಸಿರುವುದಾಗಿ ತಿಳಿದುಬಂದಿದೆ.
ಶಕುನಿದೊಡ್ಡಿ ಬಳಿ ವಾಹನ ನಿಲ್ಲಿಸಿ ಕಾಲ್ನಡಿಗೆಯಲ್ಲಿ ಜಲಪಾತ ತಲುಪಿದ್ದಾರೆ.
ಜಲಪಾತದ ನೀರಿನಲ್ಲಿ ಈಜಲು ಇಳಿದ ವೇಳೆ ಸೌರಭ್ ನೀರಿನ ಮಡುವಿನಲ್ಲಿ ಸಿಲುಕಿ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಘಟನೆ ತಿಳಿದು ಸ್ಥಳಕ್ಕೆ ಧಾವಿಸಿದ ಪೊಲೀಸರು ಹಾಗೂ ಅಗ್ನಿಶಾಮಕ ದಳ ಶನಿವಾರ ಸಂಜೆ ೪ ಗಂಟೆಗೆ ಶೋಧ ಕಾರ್ಯ ಆರಂಭಿಸಿ ರಾತ್ರಿ ಸುಮಾರು ೧೦.೩೦ಕ್ಕೆ ಮೃತದೇಹವನ್ನು ಜಲಪಾತದಿಂದ ಹೊರತೆಗೆದರು.
ಮಂಡ್ಯ ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಬಿ.ಎಂ.ರಾಘವೇಂದ್ರ, ಮಳವಳ್ಳಿ ಸಹಾಯಕ ಅಗ್ನಿಶಾಮಕ ಅಧಿಕಾರಿ ಪಿ.ಹೇಮಂತ್ ಕುಮಾರ್, ಹಲಗೂರು ಪಿಎಸ್ಐ ಲೋಕೇಶ್, ಅಗ್ನಿಶಾಮಕ ಸಿಬ್ಬಂದಿ ನಾಗೇಶ್, ಮೋಹನ್, ದಶರಥ, ನೀಲಕಂಠ, ಪ್ರವೀಣ್ ಬಾಳೇಗೌಡ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.




