ರಾಜ್ಯದಲ್ಲಿ ಎಂಟು ಸಾವಿರಕ್ಕೂ ಅಧಿಕ ಪೋಕ್ಸೊ ಪ್ರಕರಣಗಳು ದಾಖಲಾಗಿವೆ ಎಂದು ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನ್ಯಾಯಮೂರ್ತಿ ಎಚ್. ಶಶಿಧರ ಶೆಟ್ಟಿ ಮೈಸೂರಿನ ಸಮಾರಂಭವೊಂದರಲ್ಲಿ ಕಳವಳ ವ್ಯಕ್ತಪಡಿಸಿರುವುದು ಮಾಧ್ಯಮಗಳಲ್ಲಿ ಪ್ರಕಟವಾಗಿದೆ. ಅಪ್ರಾಪ್ತ ವಯಸ್ಕ ಬಾಲಕ ಬಾಲಕಿಯರ ಮೇಲೆ ನಡೆಸಲಾಗುತ್ತಿರುವ ಲೈಂಗಿಕ ಕಿರುಕುಳ ಅಥವಾ ದೌರ್ಜನ್ಯ ದಿನೇ ದಿನೇ ಹೆಚ್ಚುತ್ತಿರುವುದು ಕಳವಳಕಾರಿಯಾದ ಸಂಗತಿ. ಹೆಣ್ಣು ಮಕ್ಕಳು ಮಾತ್ರವಲ್ಲದೆ, ಶೇ. ೪೩ ರಷ್ಟು ಬಾಲಕರ ಮೇಲೂ ಲೈಂಗಿಕ ದೌರ್ಜನ್ಯ ನಡೆಸಲಾಗುತ್ತಿದೆ ಎಂಬುದು ಆತಂಕಕಾರಿ ವಿಚಾರವಾಗಿದೆ.
ಸಾಮಾನ್ಯವಾಗಿ ಶಾಲಾ ಕಾಲೇಜುಗಳು, ವಿದ್ಯಾರ್ಥಿಗಳ ವಸತಿ ನಿಲಯಗಳು ಮುಂತಾದ ಕಡೆ ಲೈಂಗಿಕ ದೌರ್ಜನ್ಯ ನಡೆಯುತ್ತ ಬಂದಿದೆ. ಕೆಲವು ಪ್ರಕರಣಗಳಲ್ಲಿ ಹೆಣ್ಣು ಮಕ್ಕಳಿಗೆ ವಿವಿಧ ರೀತಿಯ ಬೆದರಿಕೆ ಅಥವಾ ಆಮಿಷ ಒಡ್ಡಿ ಇಂತಹ ಹೀನ ಕೃತ್ಯಗಳನ್ನು ಶಿಕ್ಷಕರೆನ್ನಿಸಿಕೊಂಡವರೂ ಮಾಡುತ್ತಿರುವುದು ವೃತ್ತಿ ದ್ರೋಹ ಮತ್ತು ಆತ್ಮದ್ರೋಹವಾಗಿದೆ. ಮಾನ,ಮರ್ಯಾದೆಗಳಿಗೆ ಅಂಜಿ ಅಥವಾ ಬೆದರಿಕೆಗಳಿಗೆ ಬಲಿಯಾಗಿ ಎಷ್ಟೋ ಮಕ್ಕಳು ಇಂತಹ ವಿಷಯವನ್ನು ತಮ್ಮ ತಂದೆ ತಾಯಿ ಅಥವಾ ಪೋಷಕರಿಗೆ ಕಡೆಯವರೆಗೂ ತಿಳಿಸದೆ ಒzಡುತ್ತಾರೆ. ಕಡೆಗೆ ವಿಷಯ ಬಹಿರಂಗವಾದಾಗ ಪರಿಸ್ಥಿತಿ ಕೈಮೀರಿ ಹೋಗಿರುತ್ತದೆ. ಹೆಣ್ಣು ಮಕ್ಕಳು ಮತ್ತು ಬಾಲಕರ ಮೇಲೆ ಲೈಂಗಿಕ ದೌರ್ಜನ್ಯದ ಯಾವುದೇ ಪ್ರಕರಣ ನಡೆದರೂ, ವಿಳಂಬ ಮಾಡದೇ, ಸಮೀಪದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಬಹುದು. ಈ ನಿಟ್ಟಿನಲ್ಲಿ, ಮನೆಯಲ್ಲಿ ಪೋಷಕರು, ಶಾಲಾ- ಕಾಲೇಜುಗಳ ಮುಖ್ಯಸ್ಥರು, ಮಕ್ಕಳಿಗೆ ಸೂಕ್ತ ತಿಳಿವಳಿಕೆ ನೀಡಿ, ಅವರಲ್ಲಿ ಆತ್ಮ ಸ್ಥೈರ್ಯ ತುಂಬಬೇಕು. ಮಕ್ಕಳ ಚಟುವಟಿಕೆಗಳ ಮೇಲೆ ನಿಗಾ ಇಟ್ಟು ಮುನ್ನೆಚ್ಚರಿಕೆ ವಹಿಸಬೇಕಾಗಿದೆ.
-ಕೆ.ವಿ.ವಾಸು, ಮೈಸೂರು


