Mysore
29
overcast clouds

Social Media

ಭಾನುವಾರ, 14 ಜೂನ್ 2026
Light
Dark

ಅದ್ಧೂರಿ ಜಂಬೂಸವಾರಿ ಅರಮನೆ ನಗರಿ ಸಜ್ಜು

ಲಕ್ಷಾಂತರ ಪ್ರವಾಸಿಗರ ಆಗಮನದ ನಿರೀಕ್ಷೆ; ನಾಳೆ ವೈಭವದ ದಸರಾ ಕಣ್ತುಂಬಿಕೊಳ್ಳಲು ಕಾತರ

ಮೈಸೂರು: ನಾಡಿನ ಇತಿಹಾಸ, ಕಲೆ, ಸಂಸ್ಕೃತಿ, ಪರಂಪರೆ, ಪ್ರಜಾ ಸರ್ಕಾರಗಳ ಸಾಧನೆಯನ್ನು ಅನಾವರಣಗೊಳಿಸುವ ನಾಡಹಬ್ಬ ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾದ ವಿಜಯದಶಮಿ (ಜಂಬೂಸವಾರಿ) ಮೆರವಣಿಗೆಗೆ ಅರಮನೆ ನಗರಿ ಸಂಪೂರ್ಣ ಸಜ್ಜಾಗಿದೆ. 

ದಸರಾ ಮೊದಲ ದಿನದಿಂದ ಸಡಗರ, ಸಂಭ್ರಮದಿಂದ ಕಳೆಗಟ್ಟಿರುವ ಮೈಸೂರಿನಲ್ಲಿ ಬುಧವಾರ ಜರುಗುವ ಜಂಬೂ ಸವಾರಿಯನ್ನು ಸಾಕ್ಷೀಕರಿಸಲು ಲಕ್ಷಾಂತರ ಮಂದಿ ಕುತೂಹಲದಿಂದ ಕಾಯುತ್ತಿದ್ದಾರೆ. ಎರಡು ವರ್ಷಗಳಿಂದ ಕೊರೊನಾ ಕಾರಣಕ್ಕಾಗಿ ಅರಮನೆ ಆವರಣಕ್ಕೆ ಸೀಮಿತವಾಗಿದ್ದ ಜಂಬೂಸವಾರಿ ಎಂದಿನಂತೆ ಅರಮನೆಯಿಂದ ಬನ್ನಿಮಂಟಪದ ತನಕ ಸಾಗಲಿದೆ. ಅ.೫ರಂದು ಮಧ್ಯಾಹ್ನ ೨.೩೫ರಿಂದ ೨.೫೦ರೊಳಗೆ ಅರಮನೆ ಬಲರಾಮ ದ್ವಾರದಲ್ಲಿ ನಂದಿ ಧ್ವಜಕ್ಕೆ ಪೂಜೆ ಮಾಡುವ ಮೂಲಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ವಿಜಯದಶಮಿ ಮೆರವಣಿಗೆಗೆ ನಾಂದಿ ಹಾಡುವರು.

ಸಂಜೆ ೫.೦೭ರಿಂದ ರಿಂದ ೫.೧೮ ಗಂಟೆಯೊಳಗೆ ಅರ್ಜುನ ಆನೆಯ ಮೇಲೆ ಚಿನ್ನದ ಅಂಬಾರಿಯಲ್ಲಿ ವಿರಾಜಮಾನವಾಗಿರುವ ಶ್ರೀಚಾಮುಂಡೇಶ್ವರಿದೇವಿಗೆ ಪುಷ್ಪಾರ್ಚನೆ ನೆರವೇರಿಸಲಿದ್ದಾರೆ. ಮೆರವಣಿಗೆಯಲ್ಲಿ ೩೦ ಜಿಪಂ, ರಾಜ್ಯಮಟ್ಟದ ವಿವಿಧ ಇಲಾಖೆಗಳು, ನಿಗಮ ಮಂಡಳಿಗಳು ಸೇರಿ ೪೩ಕ್ಕೂ ಹೆಚ್ಚು ಸ್ತಬ್ಧಚಿತ್ರಗಳು, ಹೆಸರಾಂತ ಕಲಾತಂಡಗಳು ಸೇರಿ ಒಟ್ಟು ೧೦೦ಕ್ಕೂ ಹೆಚ್ಚು ಜಾನಪದತಂಡಗಳು ಭಾಗವಹಿಸಲಿವೆ. ಇದರೊಂದಿಗೆ ಚಿನ್ನದ ಅಂಬಾರಿ ಹೊತ್ತ ಅಭಿಮನ್ಯು ಸೇರಿ ಇತರ ಗಜಪಡೆ, ಅಶ್ವರೋಹಿ ಪಡೆಗಳು, ಆನೆಗಾಡಿಗಳು ಪಾಲ್ಗೊಳ್ಳಲಿವೆ.

೮ಮಂದಿಗೆ ಅವಕಾಶ: ಚಿನ್ನದ ಅಂಬಾರಿಗೆ ಪುಷ್ಪಾರ್ಚನೆ ವೇಳೆ ಶಿಷ್ಟಾಚಾರದ ಪ್ರಕಾರ ಮುಖ್ಯಮಂತ್ರಿ ಸೇರಿ ಎಂಟು ಮಂದಿ ಗಣ್ಯರಿಗೆ ಮಾತ್ರ ಅವಕಾಶವಿದೆ. ಮುಖ್ಯಮಂತ್ರಿ, ಉಚ್ಚ ನ್ಯಾಯಾಲಯದ ಮುಖ್ಯನ್ಯಾಯಮೂರ್ತಿ, ಉಸ್ತುವಾರಿ ಸಚಿವರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರು, ಜಿಲ್ಲಾಧಿಕಾರಿ, ನಗರ ಪೊಲೀಸ್‌ಆಯುಕ್ತರು, ರಾಜವಂಶಸ್ಥ ಯದುವೀರ್‌ಕೃಷ್ಣದತ್ತ ಚಾವರಾಜಒಡೆಯರ್, ಮೈಸೂರಿನ ಪ್ರಥಮ ಪ್ರಜೆ ಶಿವಕುಮಾರ್ ಮಾತ್ರ ವೇದಿಕೆ ಮೇಲಿರುತ್ತಾರೆ.

ಸಂಜೆ ೭.೩೦ಕ್ಕೆ ಪಂಜಿನಕವಾಯತು: ದಸರಾದ ಪ್ರಮುಖ ಆಕರ್ಷಣೆಗಳಲ್ಲಿ ಒಂದಾದ ಪಂಜಿನ ಕವಾಯತು (ಟಾರ್ಚ್‌ಲೈಟ್ ಪೆರೇಡ್) ರಾತ್ರಿ ೭.೩೦ಗಂಟೆಗೆಆರಂಭವಾಗಲಿದೆ. ಗೌರವ ವಂದನೆ ಸ್ವೀಕರಿಸುವ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅವರು ಕೊರೊನಾ ಸೋಂಕಿಗೆ ಒಳಗಾಗಿರುವ ಕಾರಣ ಅವರ ಅಧಿಕೃತ ಕಾರ್ಯಕ್ರಮ ಈತನಕ ನಿಗಧಿಯಾಗಿಲ್ಲ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ.ಸುನಿಲ್‌ಕುಮಾರ್ ಸೇರಿದಂತೆ ಗಣ್ಯಾತಿಗಣ್ಯರು ಹಾಜರಿರುತ್ತಾರೆ.

ನಾಡಗೀತೆ ಬಳಿಕ ಎರಡು ಗಂಟೆಗಳ ಕಾಲ ಪಥ ಸಂಚಲನ, ಮೈನವಿರೇಳಿಸುವ ಬೈಕ್, ಅಶ್ವಾರೋಹಿ ಪಡೆಗಳ ಸಾಹಸ, ಚಮತ್ಕಾರ, ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.

ಸಕಲ ಸಿದ್ಧತೆ ಸಿದ್ಧತೆ: ಈಗಾಗಲೇ ಜಂಬೂಸವಾರಿ ಮೆರವಣಿಗೆಗೆ ಅಂಬಾರಿ ಹೊರಲಿರುವ ಅಭಿಮನ್ಯು ನೇತೃತ್ವದ ಗಜಪಡೆಯೊಂದಿಗೆ ತಾಲೀಮು ನಡೆಸಿದ್ದು, ಗಜಪಡೆ, ಅಶ್ವರೋಹಿಪಡೆಗಳು ಜನರ ಗಮನ ಸೆಳೆಯಲು ಕಾದಿವೆ. ಈಗಾಗಲೇ ಅರಮನೆ ಎದುರು ವಿಶಾಲವಾದ ಶಾಮಿಯಾನ ಹಾಕಿದ್ದು, ಗೋಲ್ಡ್‌ಕಾರ್ಡ್, ವಿವಿಐಪಿ,ವಿಐಪಿ ಪಾಸ್‌ವುಳ್ಳವರಿಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ.

 

 

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!