ಮದ್ದೂರು: ಸಾಲಬಾಧೆ ತಾಳಲಾರದೆ ರೈತನೋರ್ವ ಮೃತಪಟ್ಟಿರುವ ಘಟನೆ ತಾಲ್ಲೂಕಿನ ಬೆಸಗರಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಪಣ್ಣೇದೊಡ್ಡಿ ಗ್ರಾಮದಲ್ಲಿ ಭಾನುವಾರ ಮಧ್ಯಾಹ್ನ ಜರುಗಿದೆ.
ಪಣ್ಣೇದೊಡ್ಡಿ ಗ್ರಾಮದ ಲೇ.ಚನ್ನಯ್ಯ ಅವರ ಪುತ್ರ ಸಿ.ಪಿ.ಸುರೇಶ್ (೫೭) ಮೃತಪಟ್ಟ ರೈತ. ಮೃತನಿಗೆ ಪತ್ನಿ ಸೇರಿದಂತೆ ಇಬ್ಬರು ಪುತ್ರಿಯರಿದ್ದು, ಮೃತ ಸಿ.ಪಿ.ಸುರೇಶ್ ಅವರಿಗೆ ೨೦ ಗುಂಟೆ ಜಮೀನಿದ್ದು, ವ್ಯವಸಾಯ ಮಾಡಲು ಸ್ವಸಹಾಯ ಸಂಘ ಮತ್ತು ಡಿಸಿಸಿ ಬ್ಯಾಂಕ್ಗಳಿಂದ ೭೫ ಸಾವಿರ, ಕಾವೇರಿ ಗ್ರಾಮೀಣ ಬ್ಯಾಂಕ್ ೨ ಲಕ್ಷ, ಚಿನ್ನಾಭರಣಗಳನ್ನು ೨ ಲಕ್ಷಕ್ಕೆ ಗಿರಿವಿಯಿಟ್ಟಿದ್ದು ಕೈಸಾಲ ೧ ಲಕ್ಷ ಒಟ್ಟು ೬ ಲಕ್ಷಕ್ಕೂ ಅಧಿಕ ಸಾಲ ಮಾಡಿರುವುದಾಗಿ ತಿಳಿದುಬಂದಿದೆ.
ವ್ಯವಸಾಯದಲ್ಲಿ ನಷ್ಟದ ಜತೆಗೆ ಅಧಿಕ ಕೈಸಾಲ ಮಾಡಿದ್ದ ಹಿನ್ನೆಲೆಯಲ್ಲಿ ಮನನೊಂದ ಸುರೇಶ್ ಕಳೆದ ಎರಡು ದಿನಗಳ ಹಿಂದೆ ತನ್ನ ಜಮೀನಿನಲ್ಲಿ ಕ್ರಿಮಿನಾಶಕ ಸೇವಿಸಿ ತೀವ್ರ ಅಸ್ವಸ್ಥಗೊಂಡಿದ್ದ ಈತನನ್ನು ಜಿಲ್ಲಾಸ್ಪತ್ರೆಗೆ ಚಿಕಿತ್ಸೆಗೆ ದಾಖಲು ಮಾಡಲಾಗಿತ್ತು.
ಭಾನುವಾರ ಮಧ್ಯಾಹ್ನ ಚಿಕಿತ್ಸೆ ಫಲಕಾರಿಯಾಗಿದ್ದು, ಸುರೇಶ್ ಮೃತಪಟ್ಟಿದ್ದು, ಮೃತನ ಪತ್ನಿ ನೀಡಿದ ದೂರಿನ ಮೇರೆಗೆ ಬೆಸಗರಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ





