ಮೈಸೂರು : ವಿಶ್ವವಿಖ್ಯಾತಿಯ ಮೈಸೂರು ದಸರಾ ಗಜಪಡೆಗಳಿಗೆ ನಾಳೆಯಿಂದ ಮರದ ಅಂಬಾರಿಯ ತಾಲೀಮು ನಡೆಯಲಿದೆ.
ಆನೆಗೆ ಔಪಚಾರಿಕ ಪೂಜೆಯನ್ನು ಸಲ್ಲಿಸುವುದರ ಮೂಲಕ ಮರದ ಅಂಬಾರಿ ಹೊರುವ ತಾಲೀಮು ಆರಂಭವಾಗಲಿದ್ದು, ಮರದ ಅಂಬಾರಿಗೆ ಸಂಜೆ 4 ಗಂಟೆಗೆ ಪೂಜೆಯು ನಡೆಯಲಿದೆ. ಬಳಿಕ 4:30 ಕ್ಕೆ ಕ್ರೇನ್ ಮೂಲಕ ಆನೆಗಳಿಗೆ ಮರದ ಅಂಬಾರಿಯನ್ನು ಕಟ್ಟಿದ ನಂತರ ಅಂಬಾರಿಯನ್ನು ಹೊತ್ತ ಆನೆಗಳು ಸಂಜೆ 05.00 ಗಂಟೆಗೆ ಅರಮನೆಯ ಮೂಲಕವಾಗಿ ಬನ್ನಿ ಮಂಟಪಕ್ಕೆ ಸಾಗಲಿವೆ. ಎಂದು ವನ್ಯಜೀವಿ ವಿಭಾಗದ ಡಿಸಿಎಫ್ ಕರಿಕಾಳನ್ ಅವರು ತಿಳಿಸಿದ್ದಾರೆ.
ಮರದ ಅಂಬಾರಿಯ ಟೈಮ್ ಟೇಬಲ್ ಇಲ್ಲಿದೆ ನೋಡಿ
ಸಂಜೆ 4 ಗಂಟೆ – ಮರದ ಅಂಬಾರಿಗೆ ಪೂಜೆ
ಸಂಜೆ 4 : 30 ಕ್ಕೆ – ಕ್ರೇನ್ ಮೂಲಕ ಆನೆಗಳಿಗೆ ಮರದ ಅಂಬಾರಿ ಕಟ್ಟಿವುದು
ಸಂಜೆ 5 ಗಂಟೆ – ಅರಮನೆಯ ಮೂಲಕವಾಗಿ ಬನ್ನಿ ಮಂಟಪಕ್ಕೆ ಸಾಗಲಿವೆ ಆನೆಗಳು

ಎಲ್ಲರ ಗಮನ ಸೆಳೆದಿದ್ದ ಭೀಮ ಮತ್ತು ಮಹೇಂದ್ರ ಆನೆಗಳ ಸಂಭಾಷಣೆ !
ಮಧ್ಯಾಹ್ನದ ಹೊತ್ತು. ಬಿರುಬಿಸಿಲು ಬೇರೆ. ಇಂತಹ ಸಮಯದಲ್ಲಿ ತಮ್ಮ ಮುಂದೆ ರಾಶಿಗಟ್ಟಲೆ ಬಿದಿದ್ದ ಆಲದ ಸೊಪ್ಪು ಹಾಗೂ ಹಸಿರು ಹುಲ್ಲನ್ನು ಸೊಂಡಿಲಲ್ಲಿ ಎತ್ತುಕೊಂಡು ಬಾಯಿಗೆ ಹಾಕಿಕೊಳ್ಳುತ್ತಿದ್ದ ಭೀಮ-ಮಹೇಂದ್ರರು ಇದರ ಮಧ್ಯದಲ್ಲಿ ತುಸು ಮಾತುಕತೆಯಾಡಲು ಪ್ರಾರಂಭಿಸಿದರು.
ಮಹೇಂದ್ರನ ಕಡೆಗೆ ತಿರುಗಿ, ತನ್ನ ಸೊಂಡಿಲನ್ನು ಆತನ ಸೊಂಡಿಲಿಗೆ ತಾಗಿಸುತ್ತಾ ಮಾತಿಗೆ ಶುರುಮಾಡಿದ ಭೀಮ, ‘ಅಣ್ಣ ನಿನಗೆ ಇದು ಮೊದಲ ದಸರಾವಂತೆ. ಈ ಅರಮನೆ, ಮೈಸೂರು ಬೀದಿ ನೋಡಿ ಏನು ಅನ್ನಿಸುತ್ತಿದೆ’ ಎನ್ನುತ್ತಾ ಪ್ರೀತಿಯಿಂದಲೇ ಕೊಂಬಿನಿಂದ ತಿವಿದ.
ಏನು ಹೇಳಲಿ ಭೀಮ. ಎಲ್ಲವೂ ಹೊಸತರದಂತೆ ಕಾಣುತ್ತಿದೆ. ನಮ್ಮ ಎದುರಿಗೆ ಇರುವ ದೊಡ್ಡ ಕಟ್ಟಡ. ಸಂಜೆ – ಬೆಳಿಗ್ಗೆ ಹೊತ್ತಿನಲ್ಲಿ ಹಾದಿಯಲ್ಲಿ ನಾವು ಹೋಗುವ ಸಮಯದಲ್ಲಿ ಕಾಣುವ ಬಣ್ಣ-ಬಣ್ಣದ ಉಡುಗೆ ತೊಟ್ಟ ಜನ, ಅವರ ಅರಚಾಟ- ಚೀರಾಟ, ವಾಹನಗಳ ಸದ್ದು ಎಲ್ಲವೂ ಮೊದಲಿಗೆ ಗಾಬರಿ ಪಡಿಸುತ್ತಿದ್ದವು. ಇನ್ನೇನು ಇಪ್ಪತ್ತು ದಿನಗಳಾಯಿತ್ತಲ್ಲ ಈಗ ಹೊಂದುಕೊಂಡಿದ್ದೇನೆ. ಅದು ಸರಿ ಮುಂದೆ ಇನ್ನೇನು ಮಾಡಬೇಕು ನಾವು’ ಎಂದು ಭೀಮನಿಗೆ ಮರು ಪ್ರಶ್ನೆ ಹಾಕಿದ ಮಹೇಂದ್ರ.
‘ಮುಂದೆ ಇರೋದು ಕನಾಣ್ಣ. ಇನ್ನೊಂದು ತಿಂಗಳು, ಜಂಬೂಸವಾರಿ ಅಂತ ಮಾಡ್ತಾರೆ. ಲಕ್ಷಾಂತರ ಜನ ಬಂದು ಸೇರುತ್ತಾರೆ. ನಮಗೆಲ್ಲ ಮಿಂಚು-ಮಿಂಚುವ ಬಟ್ಟೆಗಳನ್ನು ತೊಡಿಸಿ, ಬಣ್ಣಗಳಿಂದ ನಮ್ಮ ಮುಖ, ಕಾಲು, ಸೊಂಡಿಲಿಗೆಲ್ಲ ಚಿತ್ತಾರ ಬಿಡಿಸಿ ಸಿಂಗಾರ ಮಾಡುತ್ತಾರೆ. ಆ ವೈಭವ ನೋಡಬೇಕು ನೀನು. ಆಮೇಲೆ ವರ್ಷ-ವರ್ಷ ಇಲ್ಲಿಗೆ ಬರಬೇಕು ಎನ್ನುವೆ’ ಎಂದು ಖುಷಿಯಿಂದಲೇ ಹೇಳುತ್ತಿರಬೇಕಾದರೆ ಪಕ್ಕದಲ್ಲಿ ಗುರ್ರ್ ಎನ್ನುತ್ತಾ ನಿಂತಿದ್ದ ಅರ್ಜುನ, ‘ಮಧ್ಯಾಹ್ನದ ಹೊತ್ತು ಸ್ವಲ್ಪ ಸಮಾಧಾನವಾಗಿ ನಿದ್ದೆ ಮಾಡಲು ಬಿಡುವುದಿಲ್ಲ. ಮಾತನಾಡದೇ ಇರುವುದಕ್ಕೆ ಆಗುವುದಿಲ್ವ’ ಎಂದು ಗದರಿದ. ಭೀಮ-ಮಹೇಂದ್ರರು ಎದುರು ದಿಕ್ಕಿಗೆ ಮುಖ ಹಾಕಿ ನಿಂತರು.