Mysore
23
mist

Social Media

ಸೋಮವಾರ, 17 ನವೆಂಬರ್ 2025
Light
Dark

ಸಮುದಾಯ ೫೦- ಮುಂಗಾಣ್ಕೆಯ ದಿಕ್ಕಿನಲ್ಲಿ ಹೆಜ್ಜೆ 

ಜನಾಂದೋಲನ ಅಭಿವ್ಯಕ್ತಿ ಚಿಂತನೆಗಳಿಗೆ ರಜತ ಸಂಭ್ರಮ

೧೯೭೦ರ ದಶಕ ಕರ್ನಾಟಕದ ಮಟ್ಟಿಗೆ ಹೇಳುವುದಾದರೆ, ಪ್ರಜಾಪ್ರಭುತ್ವದ ಪಯಣದಲ್ಲಿ ಒಂದು ನಿರ್ಣಾಯಕ ಪರ್ವ. ಸ್ವತಂತ್ರ ಭಾರತದ ಪ್ರಜಾಪ್ರಭುತ್ವದ ಕನಸುಗಳು ಭಗ್ನವಾಗುತ್ತಿರುವ ಆತಂಕಗಳು ಹೆಚ್ಚಾಗಿ ವ್ಯಕ್ತವಾಗತೊಡಗಿದ್ದು ೧೯೬೦-೭೦ರ ದಶಕದಲ್ಲೇ. ಇದು ಭ್ರಮಾಧಿನ ಸಮಾಜದ ಅಭಿವ್ಯಕ್ತಿಯಾಗಿರಲಿಲ್ಲ, ಬದಲಾಗಿ ನೆಲದ ವಾಸ್ತವವಾಗಿತ್ತು (Ground Reality). ಸ್ವಾತಂತ್ರ್ಯದ ಪೂರ್ವಸೂರಿಗಳು ಬಯಸಿದ ಅಥವಾ ಕನಸಿದ ಆದರ್ಶ ಭಾರತವನ್ನು ಕಟ್ಟುವುದರಲ್ಲಿ ಆಳುವ ವರ್ಗಗಳು ಎಡವುತ್ತಲೇ ಬಂದಾಗ, ಸಾಮಾಜಿಕ ಪಿರಮಿಡ್ಡಿನ ತಳಪಾಯದಲ್ಲಿರುವ ಬಹುಸಂಖ್ಯೆಯ ಜನರಲ್ಲಿ ಸಹಜವಾಗಿಯೇ ತಲ್ಲಣಗಳು, ಆತಂಕಗಳು ಹೆಚ್ಚಾಗುತ್ತಾ ಹೋಗಿದ್ದವು. ಸಮಾಜದ ಒಂದು ಸಣ್ಣ ವರ್ಗ ಫಲಾನುಭವಿಗಳಾಗಿ ಮೇಲೇರುತ್ತಾ ಹೋದಂತೆಯೇ ಮತ್ತೊಂದು ದೊಡ್ಡ ವರ್ಗ ಅವಕಾಶವಂಚಿತರಾಗಿ ನಾಳೆಗಳನ್ನು ಎಣಿಸುವಂತಾಗಿದ್ದು ಚಾರಿತ್ರಿಕ ಸತ್ಯ.

ಈ ತುಮುಲಗಳಿಗೆ ಸ್ಪಂದಿಸುವ ಒಂದು ಪ್ರಜ್ಞಾವಂತ, ಸಂವೇದನಾಶೀಲ ಸಮಾಜವೂ ಜೊತೆಜೊತೆಗೇ ನಡೆದುಬಂದಿದ್ದು, ಈ ಸಮಾಜದ ಸದಸ್ಯರು ಅಥವಾ ಸಾಮಾನ್ಯ ಪರಿಭಾಷೆಯಲ್ಲಿ ಬುದ್ಧಿಜೀವಿಗಳು, ನೆಲ ನೋಡುತ್ತಾ ನಡೆಯುತ್ತಿದ್ದುದರಿಂದ, ತಳಸಮಾಜದ ತಲ್ಲಣಗಳನ್ನು, ನಾಡಿಮಿಡಿತವನ್ನು ಗ್ರಹಿಸಲು ಸಾಧ್ಯವಾಗಿತ್ತು. ಇದು ಹಲವು ಆಯಾಮಗಳಲ್ಲಿ ಪ್ರಕಟಗೊಂಡಿತ್ತು. ಸಾಹಿತ್ಯ, ರಂಗಭೂಮಿ, ಸಂಘಟನೆ, ಹೋರಾಟ, ಪ್ರತಿರೋಧ ಇತ್ಯಾದಿ ಮಾದರಿಗಳು ನೋವುಂಡ ಜನತೆಯ ಪರ ದನಿ ಎತ್ತುವಂತಹ ಒಂದು ವರ್ಗವನ್ನು ಸೃಷ್ಟಿಸಿದ್ದನ್ನು ಅಲ್ಲಗಳೆಯಲಾಗುವುದಿಲ್ಲ. ಮಾರ್ಕ್ಸ್, ಲೋಹಿಯಾ, ಪೆರಿಯಾರ್, ಅಂಬೇಡ್ಕರ್, ಮಾವೋ, ಗಾಂಧಿ… ಹೀಗೆ ದಾರ್ಶನಿಕರು ಬಿಟ್ಟುಹೋದ ಹಾದಿಯ ಮೈಲಿಗಲ್ಲುಗಳನ್ನು ದಾಟುತ್ತಾ, ತಳಸಮಾಜವನ್ನು ತಲುಪಲು ಮುಂದಾಗಿದ್ದು, ಈ ವರ್ಗದ ಔದಾತ್ಯ ಎನ್ನುವುದಕ್ಕಿಂತಲೂ ನೈತಿಕ ಬಾಧ್ಯತೆ ಎಂದು ಹೇಳಬಹುದು.

ಇದನ್ನು ಓದಿ: ವಿರಾಜಪೇಟೆ ಸ್ವಚ್ಛತೆ: ಪುರಸಭೆ ಪ್ರಯತ್ನಕ್ಕೆ ಸಿಗದ ಮನ್ನಣೆ

ಸಂವಹನ ಮಾಧ್ಯಮಗಳು ಸೀಮಿತವಾಗಿದ್ದ ಈ ಪರಿಸರದಲ್ಲಿ ತಳಸಮಾಜದ ಶೋಷಿತ ಜನತೆಯನ್ನು ತಲುಪುವುದೇ ಒಂದು ದುಸ್ಸಾಹಸವಾಗಿದ್ದುದರಿಂದ, ಸಂವಿಧಾನ, ಪ್ರಜಾಪ್ರಭುತ್ವ, ಮಾನವ ಹಕ್ಕುಗಳು, ಮಹಿಳಾ ಸಂವೇದನೆ, ಲಿಂಗಸೂಕ್ಷ್ಮತೆ, ಕಾರ್ಮಿಕ ಹಕ್ಕುಗಳು, ರೈತಾಪಿ ಕಾಳಜಿ ಮತ್ತು ಅತ್ಯಂತ ಶೋಷಿತ ಸಮಾಜಗಳನ್ನು ತಲುಪಲು ಭಿನ್ನ ಹಾದಿಗಳನ್ನು ಆಯ್ದುಕೊಳ್ಳುವುದೂ ಮುಖ್ಯವಾಗಿತ್ತು. ಕನ್ನಡ ಸಾಹಿತ್ಯ ವಲಯ ಇದಕ್ಕೆ ಅಕ್ಷರ ರೂಪದಲ್ಲಿ ಚಾಲನೆ ನೀಡಿತ್ತು. ಆದರೆ ಅನಕ್ಷರಸ್ಥರೇ ಹೆಚ್ಚಾಗಿದ್ದ ಗ್ರಾಮೀಣ ಭಾರತದ ಶೋಷಿತರನ್ನು ತಲುಪಲು ಇದು ಸಾಲುತ್ತಿರಲಿಲ್ಲ. ಈ ಸಂದಿಗ್ಧತೆಯ ನಡುವೆ, ಸಮಾಜದ ಕಟ್ಟಕಡೆಯ ವ್ಯಕ್ತಿಯನ್ನೂ ನೇರವಾಗಿ, ಪರಿಣಾಮಕಾರಿಯಾಗಿ ತಲುಪಿ, ಅವರಿಗೆ ಶೋಷಣೆಯ ಕಾರಣಗಳನ್ನು ಮತ್ತು ಅದರಿಂದ ವಿಮೋಚನೆ ಪಡೆಯುವ ಮಾರ್ಗಗಳನ್ನು ತೋರಿಸುವ ಅತ್ಯುತ್ತಮ ಸಂವಹನ ಮಾಧ್ಯಮವಾಗಿ ಕಂಡಿದ್ದು ರಂಗಭೂಮಿ.

ಈ ಉದಾತ್ತ ಕಲ್ಪನೆಯೊಂದಿಗೆ ಕರ್ನಾಟಕದಲ್ಲಿ ಹುಟ್ಟಿಕೊಂಡಿದ್ದು ‘ಸಮುದಾಯ’ ಎಂಬ ಜನಾಂದೋಲನದ ರಂಗರೂಪ. ಸಮುದಾಯ, ಜನ್ಮ ತಳೆದದ್ದು ನಗರ ಪ್ರದೇಶದಲ್ಲಿ. ಆದರೆ ಇದರ ಗುರಿ ಇದ್ದುದು ‘ಗ್ರಾಮಭಾರತ’ ಅಥವಾ ನಗರೀಕರಣದಿಂದ ಬಹಳ ದೂರವೇ ಉಳಿದಿದ್ದ ಅವಕಾಶವಂಚಿತ ಸಮಾಜಗಳು. ಅಕ್ಷರ ಕಲಿತ, ಸಾಹಿತ್ಯಾಧ್ಯಯನ ಮಾಡಿದ್ದ, ದಾರ್ಶನಿಕರ ತಾತ್ವಿಕ ದರ್ಶನಗಳನ್ನು ಬಲ್ಲವರಾಗಿದ್ದ, ಸಮಾಜಮುಖಿ ವ್ಯಕ್ತಿಗಳ ಒಂದು ಪ್ರಯತ್ನವಾಗಿ ಹುಟ್ಟಿಕೊಂಡ ಸಮುದಾಯ, ಭಿನ್ನ ಸವಾಲುಗಳನ್ನು ಎದುರಿಸುತ್ತಾ, ಏಳು ಬೀಳುಗಳ ನಡುವೆ ೫೦ ವರ್ಷಗಳನ್ನು ಪೂರೈಸಿದೆ.

ಆಗಸ್ಟ್ ೧೯೭೫ರಲ್ಲಿ ಕೆ.ವಿ.ನಾರಾಯಣ್ ರಚಿಸಿದ್ದ ‘ಹುತ್ತವ ಬಡಿದರೆ’ ನಾಟಕ ಪ್ರಸನ್ನ ಅವರ ನಿರ್ದೇಶನದಲ್ಲಿ ಪ್ರದರ್ಶನಗೊಳ್ಳುವ ಮೂಲಕ ಸಮುದಾಯ, ಕರ್ನಾಟಕದಲ್ಲಿ ತನ್ನ ಮೊದಲ ಹೆಜ್ಜೆ ಇರಿಸಿತ್ತು. ಇದೇ ಸಮಯದಲ್ಲಿ ೧೯೭೭ರಲ್ಲಿ ಸ್ಥಾಪಿಸಲಾದ ಸಮುದಾಯ ರಾಜ್ಯ ಸಮಿತಿ (ಕರ್ನಾಟಕ ರಾಜ್ಯ ಸಮುದಾಯ ಸಮನ್ವಯ ಸಮಿತಿ) ಸಮುದಾಯದ ಪ್ರಯೋಗಗಳನ್ನು ರಾಜ್ಯದ ಉದ್ದಗಲಕ್ಕೂ ಪಸರಿಸುವ ಕ್ರಿಯೆಯಲ್ಲಿ ಮಹತ್ವದ ಪಾತ್ರ ವಹಿಸಿತ್ತು. ಈ ಎರಡೂ ಸಾಂಸ್ಕೃತಿಕ ಚಳವಳಿಗಳ ೫೦ ಹೆಜ್ಜೆಗಳನ್ನು ಕನ್ನಡ ನಾಡು ಕಂಡಿದೆ. ಈ ಸಂಭ್ರಮದ ನಡುವೆ, ನಡೆದು ಬಂದ ಹಾದಿ, ನಡೆಯಬೇಕಾದ ಮಾರ್ಗ, ತಲುಪಲಾಗದಿರುವ, ಆದರೆ ತಲುಪಲೇ ಬೇಕಾದ ಅಂತಿಮ ಗುರಿ (Goal Post)) ಇವುಗಳನ್ನು ಅವಲೋಕನ ಮಾಡುವ ಸಂದರ್ಭ ಇದಾಗಿದೆ.

ಇದನ್ನು ಓದಿ: ೨೦೧೮, ೨೦೧೯ರ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿ, ಪ್ರದಾನ ಮೈಸೂರಿನಲ್ಲಿ .. ಮುಂದೆ?

ನವ ಉದಾರವಾದ, ಮತೀಯವಾದ, ಮತಾಂಧತೆ, ಮಹಿಳಾ ದೌರ್ಜನ್ಯ, ಜಾತಿ ತಾರತಮ್ಯ ಮತ್ತು ಅಸ್ಪೃಶ್ಯತೆ, ಶಿಕ್ಷಣ-ಆರೋಗ್ಯ ಸೇವೆಗಳ ವಾಣಿಜ್ಯೀಕರಣ ಹಾಗೂ ನೈಸರ್ಗಿಕ ಸಂಪನ್ಮೂಲಗಳ ವ್ಯವಸ್ಥಿತ ಲೂಟಿ, ನೈಸರ್ಗಿಕ ವಿನಾಶ ಈ ಎಲ್ಲ ಸಂಕೀರ್ಣ ಸಮಸ್ಯೆಗಳ ನಡುವೆ ಬೃಹದಾಕಾರವಾಗಿ ಬೆಳೆಯುತ್ತಿರುವ ಬಲಪಂಥೀಯ ರಾಜಕಾರಣ- ಇದು ಸಮುದಾಯ ಎದುರಿಸಬೇಕಾದ ಹಿಮಾಲಯದೆತ್ತರದ ಸಮಸ್ಯೆಯಾಗಿ ಕಾಣುತ್ತಿದೆ. ಬದಲಾದ ಭಾರತದಲ್ಲಿ, ವಿಕಸಿತವಾಗುವ ಕಡೆ ಸಾಗುತ್ತಿ ರುವ ಭಾರತದಲ್ಲಿ ಪ್ರಜಾಪ್ರಭುತ್ವ ಮತ್ತು ಸಂವಿಧಾನಗಳ ಚೌಕಟ್ಟಿನೊಳಗೆ ಮಾನವೀಯ ಸಮಾಜವೊಂದನ್ನು ಮರುಕಟ್ಟು ಅಗತ್ಯತೆ ಇಡೀ ಸಮಾಜದ ಮುಂದಿದೆ. ಸಮುದಾಯ, ಈ ನೊಗದ ಭಾರವನ್ನು ಹೊತ್ತು ಮುನ್ನಡೆಯಬೇಕಿದೆ. ಪ್ರತಿಯೊಂದು ಹೆಜ್ಜೆಯಲ್ಲೂ ಎಲ್ಲರನ್ನೂ, ಎಲ್ಲ ವರ್ಗಗಳನ್ನೂ ಒಳಗೊಳ್ಳುತ್ತಾ ಉಜ್ವಲ ಭವಿಷ್ಯದೆಡೆಗೆ ಸಾಗುವ ದೊಡ್ಡ ಜವಾಬ್ದಾರಿ ಮತ್ತು ಸವಾಲು ‘ಸಮುದಾಯ’ ದ ಮುಂದಿದೆ.

“ಇಂದು ‘ಮನುಷ್ಯತ್ವದೆಡೆಗೆ ಅಸಮುದಾಯ- ೫೦’ ರಂಗೋತ್ಸವಕ್ಕೆ ಚಾಲನೆ ಮೈಸೂರು: ನಗರದ ಸಮುದಾಯ ತಂಡದ ರಂಗಕರ್ಮಿಗಳು, ಸಾಹಿತಿಗಳು, ಕಾರ್ಯಕರ್ತರು ಹಾಗೂ ಸಾಂಸ್ಕ ತಿಕ ನಗರಿಯ ರಂಗಭೂಮಿಯ ಪರಿಚಾರಕರು, ಕಲಾವಿದರು, ಇಲ್ಲಿನ ಪ್ರಗತಿಪರ ಎಡಪಂಥೀಯ ಸಂಘಟನೆಗಳ ಜೊತೆಗೂಡಿ ‘ಮನುಷ್ಯತ್ವದೆಡೆಗೆ ಸಮುದಾಯ – ೫೦’ ಎಂಬ ಮೂರು ದಿನಗಳ ರಂಗೋತ್ಸವವನ್ನು ಅ.೩೧ ರಿಂದ ನವೆಂಬರ್ ೨ರವರೆಗೆ ಆಚರಿಸಲು ಸಿದ್ಧವಾಗಿದ್ದಾರೆ. ಅ.೩೧ರಂದು ಮೈಸೂರಿನ ಕಲಾಮಂದಿರ ಆವರಣದಲ್ಲಿ ಕಲಾ ಶಿಬಿರದ ಉದ್ಘಾಟನೆಯೊಂದಿಗೆ ಈ ರಂಗೋತ್ಸವ ಚಾಲನೆ ಪಡೆಯಲಿದೆ.

ಡಾ.ಎಂ.ಎಸ್.ಮೂರ್ತಿ ಅವರಿಂದ ಉದ್ಘಾಟಿಸಲ್ಪಡುವ ಈ ರಂಗೋತ್ಸವ ಮತ್ತು ಶಿಬಿರದ ಹಂದರದಲ್ಲೇ ಸಂಜೆ ೬ಕ್ಕೆ ರಂಗೋತ್ಸವಕ್ಕೆ ಸಾಹಿತಿ ಡಾ.ಕೆ.ಮರುಳಸಿದ್ದಪ್ಪ ಉದ್ಘಾಟನೆ ನೆರವೇರಿಸಲಿದ್ದಾರೆ. ನವೆಂಬರ್ ೧ ರಂದು ಸಂಜೆ ೬ಕ್ಕೆ ಎಡಪಂಥೀಯ, ಪ್ರಗತಿಶೀಲ ಸಾಹಿತಿ ನಿರಂಜನ ಅವರ ಪಯಣವನ್ನು ಕುರಿತ ‘ನಿರಂಜನ ಮರು ಓದು’ ಕೃತಿಯ ಅನಾವರಣವಾಗಲಿದ್ದು, ನಂತರ ಸಂವಾದವನ್ನು ಏರ್ಪಡಿಸಲಾಗಿದೆ. ನವೆಂಬರ್ ೨ರಂದು ವಿಚಾರ ಸಂಕಿರಣಗಳನ್ನು ಆಯೋಜಿಸಲಾಗಿದ್ದು, ಸಂಜೆ ೫ಕ್ಕೆ ಸಮಾರೋಪ ಸಮಾರಂಭ ನಡೆಯಲಿದೆ.

ನಾ. ದಿವಾಕರ

Tags:
error: Content is protected !!