ಮಂಡ್ಯ : ಕಾಡಿನತ್ತ ತೆರಳದ ಕಾಡಾನೆಗಳ ಹಿಂಡು ರೈತರ ಜಮೀನಿಗೆ ಲಗ್ಗೆ ಇಡುತ್ತಿದ್ದು, ಇದೀಗ ಚಿಕ್ಕ ಮಂಡ್ಯ ಸಮೀಪದ ಕಬ್ಬಿನ ಗದ್ದೆಯಲ್ಲಿ ಸೋಮವಾರ ಬೆಳಗ್ಗೆ ಪ್ರತ್ಯಕ್ಷವಾಗಿವೆ.
ಸೋಮವಾರ ಬೆಳ್ಳಂ ಬೆಳಗ್ಗೆ ರಾಮಕೃಷ್ಣ ಚಿತ್ರಮಂದಿರವಾಗಿದ್ದ ಕಟ್ಟಡದ ಹಿಂಬದಿಯ ಪ್ರದೇಶದ ಜಮೀನಿನಲ್ಲಿ ಕಾಡಾನೆಗಳು ಪ್ರತ್ಯಕ್ಷವಾಗಿದ್ದು, ಪುಟ್ಟಸ್ವಾಮಿ ಅವರಿಗೆ ಸೇರಿದ ಜಮೀನಿನಲ್ಲಿ ಬೀಡು ಬಿಟ್ಟಿವೆ.
ಮಂಡ್ಯ ನಗರಕ್ಕೆ ಸಮೀಪವೇ ಕಾಡಾನೆಗಳು ಪ್ರತ್ಯಕ್ಷ ಗೊಂಡಿರುವುದರಿಂದ ಸಾರ್ವಜನಿಕರು ಆನೆ ನೋಡಲು ಮುಗಿಬಿದ್ದಿದ್ದಾರೆ ಸುತ್ತಮುತ್ತಲ ಪ್ರದೇಶದ ಜನತೆ ಬೈಪಾಸ್ ರಸ್ತೆ ಹಾಗೂ ಮಂಡ್ಯ – ಚಿಕ್ಕ ಮಂಡ್ಯ ರಸ್ತೆಯಲ್ಲಿ ಜಮಾಯಿಸಿದ್ದು, ಪೊಲೀಸರು ಆನೆಗಳ ಹಿಂಡಿನತ್ತ ಸಾರ್ವಜನಿಕರು ತೆರಳದಂತೆ ಮುನ್ನೆಚ್ಚರಿಕೆ ವಹಿಸಿದ್ದಾರೆ.
ಹೊಸ ಬೂದನೂರು ಗ್ರಾಮದಲ್ಲಿ ಭಾನುವಾರ ಪ್ರತ್ಯಕ್ಷಗೊಂಡಿದ್ದ ಆನೆಗಳ ಹಿಂಡು ರಾತ್ರಿ ವೇಳೆ ಚಿಕ್ಕ ಮಂಡ್ಯ ದತ್ತ ಬಂದಿವೆ.ಅರಣ್ಯ ಪ್ರದೇಶದಿಂದ ನಾಡಿನತ್ತ ಮುಖ ಮಾಡಿರುವ ಆನೆಗಳ ಹಿಂಡು ಶನಿವಾರ ರಾತ್ರಿ ಅಂಬರಹಳ್ಳಿ ಸಮೀಪದ ಜಮೀನುಗಳಲ್ಲಿ ಕಾಣಿಸಿ ಕೊಂಡಿದ್ದವು.ಭಾನುವಾರ ಹೊಸ ಬೂದನೂರು ಗ್ರಾಮದ ಬೆಂಗಳೂರು-ಮೈಸೂರು ಹೆದ್ದಾರಿ ಬದಿಯ ಕಬ್ಬಿನ ಗದ್ದೆಗೆ ಲಗ್ಗೆ ಇಟ್ಟಿದ್ದವು, ಇದೀಗ ಮಂಡ್ಯ ನಗರ ಸಮೀಪ ಕಾಣಿಸಿಕೊಂಡಿವೆ.