Mysore
32
overcast clouds

Social Media

ಮಂಗಳವಾರ, 16 ಜೂನ್ 2026
Light
Dark

ಹಾಡುಪಾಡು : ವಾರದ ಮುಖ

ಒಂದು ಕಾಲದಲ್ಲಿ ಮೈಸೂರಿನ ಸಯ್ಯಾಜಿರಾವ್ ರಸ್ತೆ- ಸರ್ದಾರ್ ಪಟೇಲ್ ರಸ್ತೆಗಳು ಸೇರುವ ಒಂದು ಮೂಲೆಯಲ್ಲಿ ಪೆನ್ನು ಮಾರುತ್ತಾ, ಬಾನ್ಸುರಿ ನುಡಿಸುತ್ತಾ ಜನಸಂದಣಿಯನ್ನು ಅಯಸ್ಕಾಂತದಂತೆ ಸೆಳೆಯುತ್ತಿದ್ದ ಶ್ರೀಯುತ ದಿನೇಶ್ ಚಂದ್ರ ಮಿಶ್ರಾ ಅವರಿಗೆ ಈಗ ೮೫ ವರ್ಷ! ಈಗ ಇವರ ಬಾನ್ಸುರಿಯ ಸದ್ದು ಕೇಳಬೇಕಾದರೆ ಅಲ್ಲೇ ಪಕ್ಕದಲ್ಲಿರುವ ಅರಸು ಕಾಂಪ್ಲೆಕ್ಸಿನಲ್ಲಿರುವ ಇವರ ಪೆನ್ನಿನ ಅಂಗಡಿಗೆ ಹೋಗಿ ಒಂದು ಪೇಪರಿನಲ್ಲಿ ಬರೆದು ಇವರ ಬಳಿ ಕೇಳಿಕೊಳ್ಳಬೇಕು. ಏಕೆಂದರೆ ವೋಂಸಹಜ ಕಾರಣಗಳಿಂದಾಗಿ ಇವರ ಶ್ರವಣಶಕ್ತಿ ಮಂದವಾಗಿದೆ. ಇನ್ನೂ ಒಂದು ವಿಷಯವೆಂದರೆ ಕೆಲವು ವರ್ಷಗಳ ಹಿಂದೆ ನಡೆದ ಹೃದಯ ಶಸ್ತ್ರ ಚಿಕಿತ್ಸೆಯಿಂದಾಗಿ ಇವರಿಗೆ ಒಂದು ನಿಮಿಷಕ್ಕಿಂತ ಹೆಚ್ಚು ಬಾನ್ಸುರಿ ನುಡಿಸಲೂ ಆಗುವುದಿಲ್ಲ.

ದಿನೇಶ್ ಚಂದ್ರ ಮಿಶ್ರಾ ಅವರ ಹಿರಿಯರು ಉತ್ತರ ಪ್ರದೇಶದ ಕನೌಜ್ ಪ್ರದೇಶಕ್ಕೆ ಸೇರಿದವರು. ನಂತರ ಕಾರಣಾಂತರಗಳಿಂದಾಗಿ ಕಲಕತ್ತಾಗೆ ವಲಸೆ ಹೋದವರು. ಅಲ್ಲಿ ಅವರಿಗೆ ಒಂದು ಪೆನ್ನಿನ ಕಾರ್ಖಾನೆ ಇತ್ತು. ಆ ಪೆನ್ನು ಮಾರುತ್ತಾ ದೇಶ ಸುತ್ತುತ್ತಿದ್ದ ಮಿಶ್ರಾ ಅವರಿಗೆ ಮೈಸೂರು ಯಾಕೋ ಇಷ್ಟವಾಯಿತು. ಆ ಕಾರಣದಿಂದ ಇಲ್ಲೇ ಉಳಿದುಕೊಂಡರು. ರಸ್ತೆ ಬದಿಯಲ್ಲಿ ಪೆನ್ನು ಮಾರುತ್ತಾ, ಬಾನ್ಸುರಿ ನುಡಿಸುತ್ತಾ ಜೀವನ ಕಟ್ಟಿಕೊಂಡರು. ಈಗ ಇವರ ಮಗ ಖ್ಯಾತ ಬಾನ್ಸುರಿ ವಾದಕ ಮತ್ತು ತಯಾರಕ. ಮಗಳು ಹೆಸರಾಂತ ಮಾಧ್ಯಮ ತಜ್ಞೆ. ಆದರೆ ಈ ಯಾವುದರ ಪರಿವೆಯೂ ಇಲ್ಲದೆ ಮಿಶ್ರಾ ಅವರು ವಾರದ ದಿನಗಳಲ್ಲಿ ಅಪರಾಹ್ನ ಎರಡರಿಂದ ಇರುಳಿನ ತನಕ ತಮ್ಮ ಅಂಗಡಿಯಲ್ಲಿ ಕೂತಿರುತ್ತಾರೆ ಮತ್ತು ಮನಸಾದಾಗ ಸಣ್ಣಗೆ ಬಾನ್ಸುರಿಯನ್ನೂ ಬಾರಿಸುತ್ತಾರೆ.

ಮಿಶ್ರಾ ಅವರು ಮೈಸೂರಿನ ರಾಜಮಾರ್ಗದ ಬದಿ ಬಾನ್ಸುರಿ ನುಡಿಸಲು ತೊಡಗಿ ಐವತ್ತು ವರ್ಷಗಳಾಗುತ್ತಾ ಬಂತು. ಅವರ ‘ಹಾರ್ವೆಸ್ಟ್’ ಪೆನ್ನಿನ ಕಾರ್ಖಾನೆ ನಿಂತು ಹೋಗಿದೆ. ಬಾನ್ಸುರಿ ನುಡಿಸುವ ಶಕ್ತಿಯೂ ಕುಂದುತ್ತಾ ಬಂದಿದೆ. ಆದರೂ ಏನೂ ಗೊಣಗದೆ, ಯಾರನ್ನೂ ದೂರದೆ ಮೈಸೂರನ್ನೂ ಇನ್ನಷ್ಟು ಪ್ರೀತಿಸುತ್ತಿರುವ ಅವರಿಗೆ ನಾವು ಕೃತಜ್ಞರಾಗಬೇಕಾಗಿದೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!