ಗ್ರಾಮದಲ್ಲಿ ಆತಂಕ ಸೃಷ್ಟಿಸಿದ ಆನೆಗಳ ಹಿಂಡು; ಶಾಶ್ವತ ಪರಿಹಾರಕ್ಕೆ ಗ್ರಾಮಸ್ಥರ ಒತ್ತಾಯ
ಕಾಂಗೀರ ಬೋಪಣ್ಣ
ವಿರಾಜಪೇಟೆ: ಸಮೀಪದ ಅರಣ್ಯ ಪ್ರದೇಶದಿಂದ ಲಗ್ಗೆಹಿಡುತ್ತಿರುವ ಕಾಡಾನೆ ಹಿಂಡು ಪಟ್ಟಣ ಸಮೀಪದ ಕಡಂಗಮರೂರು ಗ್ರಾಮದಲ್ಲಿ ಆತಂಕ ಸೃಷ್ಟಿಸಿದೆ. ಅರಣ್ಯ ಇಲಾಖೆ ಕಾಡಾನೆ ಹಾವಳಿ ತಡೆಯುವ ನಿಟ್ಟಿನಲ್ಲಿ ಶಾಶ್ವತ ಪರಿಹಾರ ಕಂಡುಕೊಳ್ಳಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.
ಕಡಂಗಮರೂರು ಗ್ರಾಮದಲ್ಲಿ ಕಾಡಾನೆಗಳು ಕಾಣಿಸಿಕೊಂಡು ರೈತರ ಬೆಳೆ ಹಾನಿ ಮಾಡಿದ್ದು, ಜನರು ಮುಕ್ತವಾಗಿ ಓಡಾಡಲು ಸಾಧ್ಯವಾಗದೆ ಜೀವ ಭಯ ತಂದಿವೆ. ಈ ವಿಚಾರವನ್ನು ಅರಣ್ಯ ಇಲಾಖೆಗೆ ತಿಳಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಗ್ರಾಮಸ್ಥರು ಅಳಲು ತೋಡಿಕೊಂಡಿದ್ದಾರೆ.
ಅರಣ್ಯ ಇಲಾಖೆ ಕಾಡಾನೆಗಳನ್ನು ಅರಣ್ಯಕ್ಕೆ ಅಟ್ಟುವುದಾಗಿ ಹೇಳಿಕೊಂಡು ಕಾರ್ಯಾಚರಣೆ ನಡೆಸುತ್ತಾರೆ. ಆದರೆ ಅವು ಯಾವ ಅರಣ್ಯ ಸೇರುತ್ತದೆ ಎಂಬುದರ ಬಗ್ಗೆ ಗಮನಹರಿಸುತ್ತಿಲ್ಲ. ಕಾಡಿಗಟ್ಟಿದ ಆನೆಗಳು ಅದೇ ದಿನ ಸಂಜೆ ಅಥವಾ ಮಾರನೇ ದಿನ ಮತ್ತೆ ಗ್ರಾಮಕ್ಕೆ ಲಗ್ಗೆಇಟ್ಟು ಬೆಳೆಹಾನಿ ಮಾಡುತ್ತಿವೆ.
ಬಿಳುಗುಂದ, ಐಮಂಗಲ, ಮಗ್ಗುಲ, ಚೆಂಬೆಬೆಳ್ಳೂರು ಕದನೂರು, ಬೆಳ್ಳರಿಮಾಡು ಗ್ರಾಮಗಳಲ್ಲಿ ಓಡಾಡುವ ಆನೆಗಳ ಹಿಂಡು ಕಡಂಗಮರೂರು ಗ್ರಾಮದತ್ತ ಬರುತ್ತವೆ. ಇತ್ತೀಚೆಗೆ ಚೆಂಬೆಳ್ಳೂರಿನಲ್ಲಿ ಒಂದು ಆನೆಯನ್ನು ಸೆರೆ ಹಿಡಿಯಲಾಗಿದೆಯಾದರೂ ಅದರ ಹಿಂಡಿನಲ್ಲಿದ್ದ ಉಳಿದ ಆನೆಗಳು ಮತ್ತೆ ಗ್ರಾಮದಲ್ಲಿ ತೊಂದರೆ ನೀಡುತ್ತಿವೆ. ಇಲ್ಲಿಂದ ಆ ಆನೆಗಳನ್ನು ಅರಣ್ಯ ಇಲಾಖೆ ಕಾಡಿಗಟ್ಟಿದೆ. ಆದರೆ ಅವು ಅರಣ್ಯಕ್ಕೆ ಹೋಗದೆ ಅಮ್ಮತ್ತಿಯ ಟಾಟ ತೋಟದ ಮೂಲಕ ವಾಪಸ್ ಬರುತ್ತಿವೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಇತ್ತೀಚೆಗೆ ಕಾಡಾನೆ-ಮಾನವ ಸಂಘರ್ಷದಿಂದ ಅನೇಕ ಜನರ ಬಲಿಯಾಗಿದೆ. ಈ ರೀತಿಯಾದಾಗ ಮಾತ್ರ ಎಚ್ಚರವಾಗುವ ಇಲಾಖೆ ಮತ್ತು ಜನಪ್ರತಿನಿಧಿಗಳು ಒಂದೆರಡು ದಿನ ಅಬ್ಬರಿಸುತ್ತಾರೆ. ಮತ್ತೆ ಮೌನಕ್ಕೆ ಜಾರುತ್ತಾರೆ. ಖಾಯಂ ಪರಿಹಾರವಾಗಿ ಅರಣ್ಯದಲ್ಲಿ ವನ್ಯಜೀವಿಗಳಿಗೆ ಅಗತ್ಯ ಮೂಲ ಸೌಕರ್ಯ ಒದಗಿಸಬೇಕಿದೆ.
ರೈಲ್ವೆ ಬೇಲಿ ಕೆಲಸ ಕುಂಟುತ್ತಾ, ತೆವಳುತ್ತಾ ಸಾಗುತ್ತಿದೆ. ಪಾಲಂಗಾಲ ಗ್ರಾಮ ವ್ಯಾಪ್ತಿಯಲ್ಲಿ ಬಂಡೆ ಇರುವ ಕಾರಣ ಕಂದಕ ನಿರ್ಮಾಣ ಕೆಲಸ ಅಸಾಧ್ಯವಾಗಿದೆ. ಸರ್ಕಾರ , ಜನಪ್ರತಿನಿಧಿಗಳು ಬದಲಾದರೂ ಅದೇ ಸ್ಥಿತಿ ಮತ್ತು ಕಥೆ ಮುಂದುವರಿಯುತ್ತದೆ. ರೈತರು, ಕಾರ್ಮಿಕರು, ತೋಟ ಗದ್ದೆಗೆ ಹೋಗುವಾಗ ಜೀವ ಕೈಯಲ್ಲಿಡಿದುಕೊಂಡು ಹೋಗಬೇಕಷ್ಟೆ ಎನ್ನುವುದು ಗ್ರಾಮಸ್ಥರ ನೋವಿನ ನುಡಿ.
” ಕಡಂಗಮರೂರು ಗ್ರಾಮದಲ್ಲಿ ಕಾಡಾನೆ ಉಪಟಳ ಹೆಚ್ಚುತ್ತಿದೆ. ಅನಾಹುತ ಸಂಭವಿಸುವ ಮುನ್ನ ಅರಣ್ಯ ಇಲಾಖೆ ಎಚ್ಚೆತ್ತುಕೊಳ್ಳಬೇಕಿದೆ. ಕಾಡಾನೆಗಳನ್ನು ಕಾಡಿಗಟ್ಟುವ ಕಾರ್ಯಾಚರಣೆಯಿಂದ ಸಮಸ್ಯೆ ಬಗೆಹರಿಯುವುದಿಲ್ಲ. ಅರಣ್ಯದಲ್ಲಿ ಕಾಡಾನೆಗೆ ಬೇಕಾದ ಆಹಾರ ಸುಲಭದಲ್ಲಿ ದೊರಕುವಂತೆ ಮಾಡಬೇಕು. ರೈಲ್ವೆ ಬ್ಯಾರಿಕೇಡ್, ಕಂದಕ ಯೋಜನೆಯನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಜಾರಿಗೊಳಿಸಬೇಕು. ಶಾಶ್ವತವಾಗಿ ಸಮಸ್ಯೆ ಬಗೆಹರಿಸಲು ಪ್ರಯತ್ನಿಸಬೇಕು.”
-ಸತೀಶ್, ಕಡಂಗಮರೂರು ಗ್ರಾಮಸ್ಥರು
” ಕಾಡಾನೆ-ಮಾನವ ಸಂಘರ್ಷ ತಡೆಯುವ ನಿಟ್ಟಿನಲ್ಲಿ ಈಗಾಗಲೇ ಹಲವು ಕ್ರಮಗಳನ್ನು ಅರಣ್ಯ ಇಲಾಖೆಯಿಂದ ಕೈಗೊಳ್ಳಲಾಗುತ್ತಿದೆ. ಕಡಂಗಮರೂರು ಗ್ರಾಮದಲ್ಲಿ ಕಾಡಾನೆ ಉಪಟಳ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಆನೆಗಳನ್ನು ತಕ್ಷಣ ಕಾಡಿಗಟ್ಟುವ ಕಾರ್ಯ ಮಾಡಲಾಗುವುದು. ಶಾಶ್ವತ ಪರಿಹಾರ ಸಂಬಂಧ ಹಿರಿಯ ಅಧಿಕಾರಿಗಳ ಗಮನ ಸೆಳೆಯಲಾಗುವುದು.”
-ಶಿವರಾಂ, ವಲಯ ಅರಣ್ಯಧಿಕಾರಿ, ವಿರಾಜಪೇಟೆ





