ನಮ್ಮಲ್ಲಿ ಗುರುವಿಗೆ ಅಗ್ರಸ್ಥಾನ ಕೊಟ್ಟಿದ್ದೇವೆ. ಒಂದು ಅಕ್ಷರ ಕಲಿಸಿದವರನ್ನು ಗುರುವೆಂದು ಒಪ್ಪಿಕೊಂಡಿದ್ದೇವೆ. ಗುರುವು ನಮಗೆ ಒಳ್ಳೆಯ ಮಾರ್ಗ,ನಡತೆ ಹಾಗೂ ಜ್ಞಾನವನ್ನು ಎರೆಯುವ ದೇವರ ಸಮಾನ ಎಂದು ಪೂಜಿಸುತ್ತೇವೆ. ಈ ಗುರು-ಶಿಷ್ಯರ ಸಂಬಂಧ ಪ್ರಾಚೀನ ಕಾಲದಿಂದಲೂ ಬಂದಂತ ಭವ್ಯವಾದ ಬಂಧವಾಗಿದೆ. ಇದು ಎಲ್ಲ ಸಂಬಂಧಗಳಿಗಿಂತಲೂ ಮಿಗಿಲು ಎಂದು ಹೇಳಬಹುದು. ಶಿಷ್ಯನಾದವನು ಗುರುಗಳಿಂದ ಪಡೆದ ಜ್ಞಾನವನ್ನು ಗುರುವಿನ ಮುಂದೆ ಪ್ರದರ್ಶಿಸಿದಾಗ ಇದರಿಂದ ಗುರುವಿಗೆ ಆಗುವ ಸಂತೋಷಕ್ಕೆ ಸಮಾನವಾದ ಉಡುಗೊರೆಯೇ ಇಲ್ಲದಂತಾಗುತ್ತದೆ. ಗುರು- ಶಿಷ್ಯರ ಸಂಬಂಧಕ್ಕೆ ಸಂಬಂಧಿಸಿದಂತೆ ಹಲವು ನಿದರ್ಶನಗಳನ್ನು ಇತಿಹಾಸ ಪುಟಗಳಲ್ಲಿ ಓದಿದ್ದೇವೆ. ಹೀಗೆ ಗುರುವಿಲ್ಲದ ಜಗತ್ತನ್ನು ನಾವು ಊಹಿಸಿಕೊಳ್ಳಲು ಸಾಧ್ಯವಿಲ್ಲ. ಮಣ್ಣಿನ ಮುದ್ದೆಯಂತಿರುವ ಶಿಷ್ಯರಿಗೆ ಸರಿಯಾದ ರೂಪ ಕೊಡುವವರು ಶಿಕ್ಷಕರೇ ಆಗಿರುತ್ತಾರೆ. ಇದರಿಂದ ಗುರುವಿನ ಕೆಲಸ ಅಗಾಧವಾಗಿದೆ. ಆದ್ದರಿಂದ ಗುರುಗಳನ್ನು ಬ್ರಹ್ಮ ವಿಷ್ಣು ಮಹೇಶ್ವರರಿಗೆ ಹೋಲಿಸಿ ಪೂಜಿಸುವ ಸಂಸ್ಕಾರ ನಮ್ಮ ನಾಡಿನ ಜನತೆಯದ್ದಾಗಿದೆ.
ಗುರು ಇಲ್ಲದೆ ಗುರಿ ಸಾಗದು,
ಗುರು ಇಲ್ಲದೆ ಜ್ಞಾನ ಅರಿಯಲಾಗದು
ಗುರು ಇಲ್ಲದೆ ಸದ್ಗುಣ ಬೆಳೆಯದು
ಗುರು ಇಲ್ಲದೆ ಕಾಯಕ ಪೂರ್ಣಗೊಳ್ಳದು……!
-ಅನಿಲ್ ರಾಜ, ಮೈಸೂರು



