ಸರ್ಕಾರವು ೭೦ ವರ್ಷದೊಳಗಿನ ನಿವೃತ್ತ ಸರ್ಕಾರಿ ಪಿಂಚಣಿದಾರರಿಗೆ, ಕುಟುಂಬ ಪಿಂಚಣಿದಾರರಿಗೆ ಮತ್ತು ಅವರ ಅರ್ಹ ಅವಲಂಬಿತ ವಿಕಲಚೇತನ ಮಕ್ಕಳ ಆರೋಗ್ಯ ವೈದ್ಯಕೀಯ ಸೌಲಭ್ಯಗಳಿಗಾಗಿ ‘ಸಂಧ್ಯಾ ಕಿರಣ’ ನಗದು ರಹಿತ ಆರೋಗ್ಯ ಯೋಜನೆಯನ್ನು ಜರಿಗೆ ತಂದಿದೆ. ಈ ಯೋಜನೆಯು ’ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್’ ಮೂಲಕ ಅನುಷ್ಠಾನಗೊಳ್ಳುವುದಾಗಿ ಆದೇಶ ಹೊರಡಿಸಲಾಗಿದೆ.
ಈ ಯೋಜನೆಯ ವ್ಯಾಪ್ತಿಯೊಳಗೆ ಸರ್ಕಾರಿ ನೌಕರರು ನಿವೃತ್ತಿ ಹೊಂದಿದ ದಿನಾಂಕದಿಂದ ೭೦ ವರ್ಷ ವಯೋಮಿತಿ ತಲುಪುವವರೆಗೆ ಅಂದರೆ ಹತ್ತು ವರ್ಷ ಮಾತ್ರ ಈ ಸೌಲಭ್ಯ ದೊರಕುವುದು ಎಂದೇ ಅರ್ಥವ್ಯಾಪ್ತಿಯಾಗಿದೆ. ಇದರಿಂದಾಗಿ ೭೦ ವರ್ಷ ಮೀರಿದ ನೌಕರರು ಸಂಧ್ಯಾಕಿರಣ ಸೌಲಭ್ಯದಿಂದ ವಂಚಿತರಾಗುತ್ತಾರೆ. ಎಪ್ಪತ್ತು ವರ್ಷ ದಾಟಿದ ನಂತರವೇ ಸಹಜವಾಗಿ ಆರೋಗ್ಯದಲ್ಲಿ ಏರುಪೇರುಗಳು, ಒತ್ತಡಗಳು, ಅವಲಂಬಿತರ ಆಶ್ರಯ ಕೊರತೆಗಳೂ ಉಂಟಾಗುವುದು.ಇಂಥ ಸಮಸ್ಯೆಗಳ ಪರಿಸ್ಥಿತಿಯನ್ನು ನನ್ನಂಥ ಈ ವಯೋಮಾನದ ನೌಕರರು ಅನುಭವಿಸುತ್ತಿರುವ ನೋವುಗಳೂ ಸಹ. ಆದುದರಿಂದ ಸಂಧ್ಯಾಕಿರಣ ಯೋಜನೆಯ ವ್ಯಾಪ್ತಿಗೆ ೭೦ ವರ್ಷದೊಳಗಿನವರಿಗೆ ಮಾತ್ರ ಸೀಮಿತಗೊಳಿಸದೇ ಎಲ್ಲ ವಯೋಮಾನದವರಿಗೂ ಅನ್ವಯಿಸುವಂತೆ ಮಾಡುವುದರಿಂದ ಸಾಮಾಜಿಕ ನ್ಯಾಯವನ್ನು ಪಾಲಿಸಿದಂತಾಗುತ್ತದೆ. ಸರ್ಕಾರ ಇತ್ತ ಗಮನಹರಿಸಬೇಕು.
-ಜಿ.ಹೆಚ್.ಸಂಕಪ್ಪ, ಮೈಸೂರು



