ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್ಸುಗಳಲ್ಲಿ ಇತ್ತೀಚೆಗೆ ನಿಗದಿತ ಸಂಖ್ಯೆಗಿಂತ ಹೆಚ್ಚು ಜನ ಪ್ರಯಾಣಿಸುತ್ತಿರುವುದು ಸರ್ವೇಸಾಮಾನ್ಯ ಆಗಿಬಿಟ್ಟಿದೆ. ಈ ಕಾರಣದಿಂದ ಜನರನ್ನು ನಿಯಂತ್ರಿಸಲು ಕೆಲವು ನಿಲ್ದಾಣಗಳಲ್ಲಿ ಚಾಲಕರು ಬಸ್ ನಿಲ್ಲಿಸದೇ ಹೋಗುವುದೂ ಉಂಟು. ಇದರಿಂದ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ನಿಗದಿತ ಸಮಯಕ್ಕೆ ಗಮ್ಯ ಸ್ಥಾನ ತಲುಪಲು ತೊಂದರೆಯಾಗುತ್ತಿದೆ. ಹಾಗೂ ಕೆಎಸ್ಆರ್ಟಿಸಿ ಬಸ್ನ ಕೆಲವು ನಿರ್ವಾಹಕರು ತಮ್ಮ ಬಸ್ಸಿನಲ್ಲಿ ಪ್ರಯಾಣಿಸುವ ವಯೋವೃದ್ಧರು, ಶಾಲಾ ಕಾಲೇಜು ವಿದ್ಯಾರ್ಥಿಗಳು ಹಾಗೂ ಮಹಿಳೆಯರನ್ನು ಬಸ್ ಹತ್ತುವಾಗ ಇಳಿಯುವಾಗ ಏಕವಚನದಲ್ಲಿ ಗದರುವುದು, ಟಿಕೆಟ್ ಪಡೆದ ಪ್ರಯಾಣಿಕರಿಗೆ ಸರಿಯಾಗಿ ಚಿಲ್ಲರೆ ನೀಡದೆ ಇಳಿಯುವಾಗ ಚಿಲ್ಲರೆ ಪಡೆದುಕೊಳ್ಳಿ ಎಂಬ ಮಾತು ಹೇಳಿ ಆಗಲೂ ಸರಿಯಾಗಿ ಕೊಡಬೇಕಾದ ಚಿಲ್ಲರೆ ಹಣ ನೀಡದೆ ಪ್ರಯಾಣಿಕರನ್ನೇ ಸತಾಯಿಸುತ್ತಾರೆ. ಇದರಿಂದ ಪ್ರಯಾಣಿಕರು ಮತ್ತು ನಿರ್ವಾಹಕರ ನಡುವೆ ಜಗಳ ಉಂಟಾಗುತ್ತದೆ. ಸಂಬಂಧಪಟ್ಟ ಅಧಿಕಾರಿಗಳು ಪ್ರಯಾಣಿಕರೊಂದಿಗೆ ಅನುಚಿತವಾಗಿ ವರ್ತಿಸುವ ನಿರ್ವಾಹಕರ ಮೇಲೆ ಶಿಸ್ತು ಕ್ರಮ ಜರುಗಿಸಬೇಕು ಹಾಗೂ ಪ್ರಯಾಣಿಕರೊಂದಿಗೆ ಸೌಜನ್ಯವಾಗಿ ವರ್ತಿಸಲು ಸೂಚನೆ ನೀಡಬೇಕಿದೆ.
– ಎಂ.ಪಿ.ದರ್ಶನ್ ಚಂದ್ರ, ಮುಕ್ಕಡಹಳ್ಳಿ , ಚಾಮರಾಜನಗರ ತಾ





