ಹನೂರು ತಾಲ್ಲೂಕು ವ್ಯಾಪ್ತಿಯ ರೈತರಲ್ಲಿ ಆತಂಕ
ಹನೂರು: ತಾಲ್ಲೂಕು ವ್ಯಾಪ್ತಿಯಲ್ಲಿ ಸಮರ್ಪಕ ಮಳೆಯಾಗದ ಹಿನ್ನೆಲೆಯಲ್ಲಿ ಉಡುತೊರೆ ಜಲಾಶಯ ಭರ್ತಿಯಾಗದೆ, ಇರುವ ನೀರು ಕೂಡ ಖಾಲಿಯಾಗುತ್ತಿರುವುದರಿಂದ ರೈತರಲ್ಲಿ ಆತಂಕ ಮನೆ ಮಾಡಿದೆ.
ಹನೂರು ಕ್ಷೇತ್ರ ವ್ಯಾಪ್ತಿಯಲ್ಲಿ ಸಮರ್ಪಕವಾಗಿ ಮಳೆಯಾಗದೆ ಜಲಾಶಯಗಳೆಲ್ಲ ಬರಿದಾಗುತ್ತಿದ್ದು, ಮುಂದಿನ ಬೇಸಿಗೆ ಕಾಲದಲ್ಲಿ ಕುಡಿಯುವ ನೀರು ಹಾಗೂ ಜಾನುವಾರುಗಳಿಗೆ ತೊಂದರೆಯಾಗಲಿದೆ ಎಂದು ರೈತರು ಆತಂಕ ವ್ಯಕ್ತಪಡಿಸಿದ್ದಾರೆ.
ದೀಪಾವಳಿ ಹಬ್ಬದ ಸಂದರ್ಭದಲ್ಲಿ ಒಂದು ದಿನ ನಿರಂತರವಾಗಿ ಭಾರಿ ಮಳೆ ಬಿದ್ದ ಪರಿಣಾಮ ಉಡುತೊರೆ ಜಲಾಶಯಕ್ಕೆ ಅಲ್ಪ ಪ್ರಮಾಣದಲ್ಲಿ ನೀರು ಹರಿದು ಜಲಾಶಯ ಅರ್ಧ ಭರ್ತಿಯಾಗಿತ್ತು. ಕುಡಿಯುವ ನೀರಿಗೆ ಹಾಗೂ ಜಾನುವಾರುಗಳಿಗೆ ತೊಂದರೆಯಾಗುತ್ತಿದ್ದರಿಂದ ಉಡುತೊರೆ ಜಲಾಶಯದಿಂದ ಮಾರ್ಟಳ್ಳಿ ಸಮೀಪದ ಕೀರೆಪಾತಿ ಹಾಗೂ ಕೌದಳ್ಳಿ ಭಾಗದ ಹಲವು ಗ್ರಾಮಗಳಿಗೆ ಹಳ್ಳದ ಮೂಲಕ ನೀರು ಹರಿಸಲಾಗಿತ್ತು. ಇದೀಗ ಜಲಾಶಯದಲ್ಲಿನೀರಿನ ಪ್ರಮಾಣ ಕಡಿಮೆ ಆಗಿರುವುದರಿಂದ ಈ ಭಾಗದರೈತರಿಗೆ ಮುಂದಿನ ದಿನಗಳಲ್ಲಿ ನೀರಿನ ಸಮಸ್ಯೆಯಾಗಬಹುದು ಎಂಬ ಆತಂಕ ಎದುರಾಗಿದೆ.
ಕ್ಷೇತ್ರ ವ್ಯಾಪ್ತಿಯ ಮೂರು ಜಲಾಶಯಗಳಿಗೆ ಮಾತ್ರ ಕಾವೇರಿ ನದಿ ಮೂಲದಿಂದ ನೀರು ತುಂಬಿಸುವ ಯೋಜನೆ ಪ್ರಗತಿಯಲ್ಲಿದೆ. ಉಳಿದ ಜಲಾಶಯಗಳಿಗೂ ಕಾವೇರಿ ನದಿ ಮೂಲದಿಂದ ನೀರು ತುಂಬಿಸಿದರೆ ಕ್ಷೇತ್ರ ವ್ಯಾಪ್ತಿಯ ಸಾವಿರಾರು ರೈತರಿಗೆ ಅನುಕೂಲವಾಗಲಿದೆ ಎಂದು ರೈತ ಮುಖಂಡರು ಮನವಿ ಮಾಡಿದ್ದಾರೆ.
” ಈ ಬಾರಿ ಸಮರ್ಪಕವಾಗಿ ಮಳೆಯಾಗದೆ ಜಲಾಶಯ ಭರ್ತಿಯಾಗಿಲ್ಲ. ಕುಡಿಯುವ ನೀರಿನ ಸಮಸ್ಯೆ ಇರುವ ಕಡೆ ಜಲಾಶಯದಿಂದ ನೀರು ಬಿಡಲಾಗಿದೆ. ಜಲಾಶಯದಲ್ಲಿ ೦.೧ ಟಿಎಂಸಿ ನೀರು ಮಾತ್ರ ಇದೆ. ಸಂಕ್ರಾಂತಿ ಹಬ್ಬದ ಸಂದರ್ಭದಲ್ಲಿ ಜಲಾಶಯದಿಂದ ನೀರು ಹರಿಸಿದರೆ ಸಂಪೂರ್ಣ ಖಾಲಿಯಾಗಲಿದೆ. ಮಳೆಯಾದರೆ ಬೇಸಿಗೆ ಸಮಯದಲ್ಲಿ ಅನುಕೂಲವಾಗಲಿದೆ. ಇಲ್ಲದಿದ್ದರೆ ಕುಡಿಯುವ ನೀರಿನ ಸಮಸ್ಯೆ ಎದುರಾಗಲಿದೆ.”
ಕರುಣಾಮಯಿ, ಎಇಇ, ಕಾವೇರಿ ನೀರಾವರಿ ನಿಗಮ





