Mysore
27
overcast clouds

Social Media

ಶನಿವಾರ, 20 ಜೂನ್ 2026
Light
Dark

ನಿರಂತರ ಮಳೆಯಿಂದ ಅರೇಬಿಕಾ ಕಾಫಿಗೆ ಗಂಡಾಂತರ

ಲಕ್ಷ್ಮಿಕಾಂತ್ ಕೊಮಾರಪ್ಪ

ಕಾಫಿ ಕೊಯ್ಲು ಮಾಡಲಾಗದ ಪರಿಸ್ಥಿತಿ; ಕೆಲವೆಡೆ ನೆಲಕಚ್ಚುತ್ತಿರುವ ಬೆಳೆ 

ಸೋಮವಾರಪೇಟೆ: ಜಿಲ್ಲೆಯಾದ್ಯಂತ ನಿರಂತರವಾಗಿ ಮಳೆಯಾಗುತ್ತಿದ್ದು, ಮೋಡ ಕವಿದ ವಾತಾವರಣ ಕಂಡುಬರುತ್ತಿದೆ. ಇದೇ ವಾತಾವರಣ ಮುಂದುವರಿದಲ್ಲಿ ಅರೇಬಿಕಾ ಕಾಫಿಗೆ ಗಂಡಾಂತರ ಎದುರಾಗಲಿದೆ.

ಸೋಮವಾರಪೇಟೆ ತಾಲ್ಲೂಕಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಅರೇಬಿಕಾ ಕಾಫಿ ಬೆಳೆಯಲಾಗುತ್ತದೆ. ಶನಿವಾರಸಂತೆ, ಶಾಂತಳ್ಳಿ, ಕೊಡ್ಲಿಪೇಟೆ ಹೋಬಳಿ ವ್ಯಾಪ್ತಿಯಲ್ಲಿ ಶೇ.೯೫ ರೈತರು ಕಾಫಿ ಬೆಳೆಯುತ್ತಾರೆ. ಈ ವ್ಯಾಪ್ತಿಯಲ್ಲಿ ನಿರಂತರ ಮಳೆಯಾಗುತ್ತಿರುವುದರಿಂದ ಕಾಫಿ ಬೆಳೆಗೆ ಹಾನಿಯಾಗಲಿದ್ದು, ಬೆಳೆಗಾರರು ಆತಂಕದಲ್ಲಿ ದಿನ ಕಳೆಯುವಂತಾಗಿದೆ. ಕಾಫಿ ಹಣ್ಣನ್ನು ನವೆಂಬರ್‌ನಿಂದ ಡಿಸೆಂಬರ್ ಒಳಗೆ ಕೊಯ್ಯುವುದು ವಾಡಿಕೆ. ಕೊಯ್ದ ಕಾಫಿ ಹಣ್ಣನ್ನು ಪಲ್ಪರ್ ಮಾಡಿ ಕಣದಲ್ಲಿ ಕಾಫಿ ಬೀಜವನ್ನು ಪಾರ್ಚಿಮೆಂಟ್ ಮಾಡಿ ಒಣಗಿಸಲಾಗುತ್ತದೆ. ಬಳಿಕ ಜನವರಿ ಹಾಗೂ ಫೆಬ್ರವರಿಯಲ್ಲಿ ಅದನ್ನು ಮಾರಾಟ ಮಾಡಲಾಗುತ್ತದೆ. ಸ್ವಲ್ಪ ಪ್ರಮಾಣದಲ್ಲಿ ಕಾಫಿ ಉಂಡೆ ಚೆರಿಯನ್ನು ಒಣಗಿಸಿ ಮಾರಾಟ ಮಾಡುತ್ತಾರೆ. ಆದರೆ ಈಗ ಹೋಬಳಿ ವ್ಯಾಪ್ತಿಯಲ್ಲಿ ನಿರಂತರ ಮಳೆಯಾಗುತ್ತಿದ್ದು, ಇದರಿಂದ ಚಿಕ್ಕಪುಟ್ಟ ಕಾಫಿ ಬೆಳೆಗಾರರಿಗೆ ಗಂಡಾಂತರ ಎದುರಾಗಲಿದೆ ಎಂದು ರೈತರು ಅಸಹಾಯಕತೆ ವ್ಯಕ್ತಪಡಿಸುತ್ತಿದ್ದಾರೆ.

ಸಾಮಾನ್ಯವಾಗಿ ೧ರಿಂದ ೧೦ ಎಕರೆವರೆಗೆ ಕಾಫಿ ತೋಟ ಹೊಂದಿರುವ ಬೆಳೆಗಾರರು ಬೇಸಿಗೆಯಲ್ಲಿ ಕೊಳವೆಬಾವಿ ನೀರಾವರಿ ಮೂಲಕ ಕಾಫಿ ಗಿಡಕ್ಕೆ ನೀರು ಹಾಯಿಸಿದ್ದು, ಇದರಿಂದ ಗಿಡದಲ್ಲಿ ಬೇಗ ಹೂ ಬಿಟ್ಟು ಮಿಡಿಯಾಗುತ್ತದೆ. ಅಕ್ಟೋಬರ್-ನವೆಂಬರ್‌ನಲ್ಲಿ ಕಾಫಿ ಹಣ್ಣಾಗಿ ಅದನ್ನು ಕೊಯ್ಲು ಮಾಡುವ ಅನಿವಾರ್ಯತೆ ಇರುತ್ತದೆ. ಆದರೆ ಈ ಸಮಯದಲ್ಲಿ ಅಕಾಲಿಕ ಮಳೆಯಾಗುವುದರಿಂದ ಕಾಫಿಯನ್ನು ಪಲ್ಪರ್ ಮಾಡಲು ಸಾಧ್ಯವಾಗುವುದಿಲ್ಲ.

ಕೆಲವೊಮ್ಮೆ ಪಲ್ಪರ್ ಮಾಡಿದ ಕಾಫಿ ಬೀಜವನ್ನು ಒಣಗಿಸಲೂ ಸಾಧ್ಯವಾಗದೆ ಸಣ್ಣ ಬೆಳೆಗಾರರು ಸಂಕಷ್ಟ ಅನುಭವಿಸುವಂತಾಗುತ್ತದೆ. ಹವಮಾನ ಇಲಾಖೆ ಇನ್ನೂ ಕೆಲಕಾಲ ಮಳೆ ಮುಂದುವರಿಯುವ ಮುನ್ಸೂಚನೆಯನ್ನು ನೀಡಿರುವುದರಿಂದ ಬೆಳೆಗಾರರು ಮತ್ತಷ್ಟು ಆತಂಕಕ್ಕೆ ಒಳಗಾಗಿದ್ದಾರೆ.

” ಅಕಾಲಿಕ ಮಳೆಯಿಂದ ಸಣ್ಣ ಪುಟ್ಟ ಕಾಫಿ ಬೆಳೆಗಾರರಿಗೆ ಸಮಸ್ಯೆಯಾಗುತ್ತದೆ. ಈಗ ನಮಗೆ ಕಾಫಿ ಹಣ್ಣು ಕೊಯ್ಲು ಮತ್ತು ಹಣ್ಣು ಪಲ್ಪರ್ ಮಾಡುವ ಸಮಯವಾಗಿದೆ. ಈಗ ಆಗುತ್ತಿರುವ ಅಕಾಲಿಕ ಮಳೆಯಿಂದಾಗಿ ಕೊಯ್ಲು ಮಾಡಿ ಕಾಫಿ ಹಣ್ಣನ್ನು ಪಲ್ಪರ್ ಮಾಡಲು ಸಾಧ್ಯವಾಗುತ್ತಿಲ್ಲ. ಈ ವರ್ಷವಂತೂ ಎಲ್ಲ ತಿಂಗಳು ಎಡೆ ಬಿಡದೆ ಮಳೆ ಬಿದ್ದಿರುವುದರಿಂದ ಕಾಫಿ ಬೆಳೆಗಾರರಿಗೆ ಬಾರಿ ಹೊಡೆತ ಬಿದ್ದಿದೆ.”

 -ಉಮಾಶಂಕರ್, ಅಧ್ಯಕ್ಷರು, ಕಾಫಿ ಬೆಳೆಗಾರರ ಸಂಘ ಶನಿವಾರಸಂತೆ

” ಕಾಫಿ ಬೆಳೆಗರಾರರು ಪ್ರತಿ ವರ್ಷ ಒಂದಲ್ಲಾ ಒಂದು ಸಮಸ್ಯೆಯನ್ನು ಎದುರಿಸುವಂತಾಗಿದೆ. ಪ್ರಾರಂಭದಲ್ಲಿ ಹೂ ಅರಳಲು ಉತ್ತಮ ಮಳೆ ಆಗಿತ್ತು. ಇದರಿಂದಾಗಿ ಕಾಯಿಸರಿಯಾಗಿ ಆಗಿತ್ತು. ಸರಿಯಾಗಿ ಕಾಯಿ ಕಟ್ಟುವ ವೇಳೆಯಲ್ಲಿ ಮತ್ತೆ ಮಳೆ ಆಯಿತು. ಇದರಿಂದ ಮತ್ತೆ ಕಾಯಿ ನೆಲಕಚ್ಚಿತ್ತು, ಇದೀಗ ಮಳೆ ಪ್ರಾರಂಭವಾಗಿದ್ದು, ಕಾಫಿ ಹಣ್ಣು ಉದುರುತ್ತಿದೆ. ಇದರಿಂದ ತೀರಾ ಸಂಕಷ್ಟ ಎದುರಿಸುವಂತಾಗಿದೆ.”

 -ಶರತ್ ಶೇಖರ್, ಕಾಫಿ ಬೆಳೆಗಾರ, ಶನಿವಾರಸಂತೆ

Tags:
error: Content is protected !!