ಸೋಮವಾರಪೇಟೆ: ಶಾಂತಳ್ಳಿ ಹೋಬಳಿ ವ್ಯಾಪ್ತಿಯ ಗ್ರಾಮಗಳಲ್ಲಿ ಕಾಡಾನೆಗಳ ಹಾವಳಿ ಮತ್ತೆ ಮುಂದುವರೆದಿದ್ದು, ಬೆಳೆ ನಷ್ಟದ ಪ್ರಮಾಣ ಹೆಚ್ಚಾಗುತ್ತಿದೆ.
ಕಳೆದ ಎರಡು ದಿನಗಳ ಹಿಂದಷ್ಟೇ ಸಮೀಪದ ಕೂತಿ ಗ್ರಾಮದಲ್ಲಿ ಕಾಡಾನೆಗಳ ಹಿಂಡು ಕಾಫಿ ತೋಟಕ್ಕೆ ನುಗ್ಗಿ ಕಾಫಿ ಗಿಡಗಳನ್ನು ತುಳಿದು ಹಾನಿ ಮಾಡಿತ್ತು. ಬಳಿಕ ಸ್ಥಳೀಯ ಗ್ರಾಮಸ್ಥರು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಸೇರಿ ಕಾಡಾನೆಗಳನ್ನು ಕಾಡಿಗಟ್ಟುವ ಕಾರ್ಯ ನಡೆಸಿದ್ದರು. ಆದರೆ ಇದೀಗ ಅದೇ ಕಾಡಾನೆಗಳ ಹಿಂಡು ಕುಂದಳ್ಳಿ, ನಗರಳ್ಳಿ ಭಾಗದಲ್ಲಿ ಮತ್ತೆ ಕಾಣಿಸಿಕೊಂಡಿದ್ದು, ಮರಿಯಾನೆ ಸೇರಿ ಏಳು ಆನೆಗಳು ಬೀಡುಬಿಟ್ಟಿವೆ. ಇದರ ಜೊತೆಗೆ ಇದೇ ವ್ಯಾಪ್ತಿಯಲ್ಲಿ ಒಂಟಿ ಸಲಗವೊಂದು ಸಂಚರಿಸುತ್ತಿದ್ದು ಇದರ ಆತಂಕ ಸಾರ್ವಜನಿಕರಲ್ಲಿ ಮೂಡಿದೆ.
ಕುಂದಳ್ಳಿ ಗ್ರಾಮದಲ್ಲಿ ಕಳೆದ ರಾತ್ರಿ ಕಾಡಾನೆಗಳು ಲೋಕೇಶ್, ಜೋಯಪ್ಪ ಹಾಗೂ ಶರತ್ ಅವರಿಗೆ ಸೇರಿದ ಕಾಫಿ ತೋಟಗಳಿಗೆ ನುಗ್ಗಿ ಕಾಫಿ ಗಿಡಗಳನ್ನು ತುಳಿದು ನಾಶಪಡಿಸಿವೆ.
ಒಂದು ಕಡೆ ಕಾಡಾನೆಗಳನ್ನು ಓಡಿಸುವ ಕಾರ್ಯ ನಡೆಯುತ್ತಿದ್ದರೂ ಮತ್ತೊಂದು ಕಡೆ ಮತ್ತೆ ಅದೇ ಆನೆಗಳು ಬೇರೆ ಪ್ರದೇಶದಲ್ಲಿ ಅವುಗಳ ಹಾವಳಿ ಮುಂದುವರಿದಿದೆ. ಆದ್ದರಿಂದ ಅರಣ್ಯ ಇಲಾಖೆ ಶಾಶ್ವತ ಕ್ರಮ ಕೈಗೊಂಡು ಕಾಡಾನೆಗಳನ್ನು ಬಿಸಿಲೆ ಅರಣ್ಯ ಪ್ರದೇಶದತ್ತ ಸ್ಥಳಾಂತರಿಸುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.




