Mysore
22
haze

Social Media

ಶನಿವಾರ, 13 ಡಿಸೆಂಬರ್ 2025
Light
Dark

ಸರಗೂರಿನಲ್ಲಿ ಬೀದಿ ನಾಯಿಗಳ ಹಾವಳಿ : ತತ್ತರಿಸಿದ ಜನತೆ

ಸರಗೂರು : ಪಟ್ಟಣ ಪಂಚಾಯಿತಿ ವ್ಯಾಪ್ತಿ ಯಲ್ಲಿ ಬೀದಿ ನಾಯಿಗಳ ಹಾವಳಿಯಿಂದ ಜನ ಸಾಮಾನ್ಯರು ತತ್ತರಿಸಿ ಆತಂಕದಲ್ಲಿದ್ದರೂ ನಿಯಂ ತ್ರಣ ಮಾಡಲು ಜನಪ್ರತಿನಿಽಗಳು ಮತ್ತು ಅಽ ಕಾರಿಗಳು ಸಂಪೂರ್ಣ ವಿಫಲರಾಗಿದ್ದಾರೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪಟ್ಟಣ ವ್ಯಾಪ್ತಿಯ ಎಲ್ಲ ವಾರ್ಡುಗಳಲ್ಲೂ ನಿತ್ಯವೂ ೧೫ರಿಂದ ೨೦ ಬೀದಿನಾಯಿಗಳು ಗುಂಪು ಗುಂಪಾಗಿ ರಸ್ತೆಯಲ್ಲಿ ಓಡಾಡುತ್ತಿರುವುದರಿಂದ ಮಕ್ಕಳು, ಮಹಿಳೆಯರು, ವೃದ್ಧರು, ವಾಹನ ಸವಾರರು ರಸ್ತೆಯಲ್ಲಿ ಸಂಚರಿಸಲು ಭಯಪಡುತ್ತಿದ್ದಾರೆ.

ಎಂಟನೇ ವಾರ್ಡ್‌ನಲ್ಲಿ ಲಾರಿ ಚಾಲಕರಾದ ಮನ್ಸೂರ್‌ರವರಿಗೆ ಸೇರಿದ ಕೋಳಿಯೊಂದನ್ನು ನಾಯಿಗಳು ಹಿಡಿದು ಕೊಂದಿವೆ. ಇದೇ ರೀತಿ ಏಳನೇ ವಾರ್ಡ್‌ನಲ್ಲಿ ಅಂಗಡಿ ಮುಂಭಾಗ ಪತ್ರಿಕಾ ವಿತರಕರು ಪತ್ರಿಕೆಯನ್ನು ಅಂಗಡಿಯ ಬಾಗಿಲಿನ ಚಿಲಕಕ್ಕೆ ಹಾಕಿ ಹೋದಾಗ ನಾಯಿಗಳು ಪತ್ರಿಕೆಯನ್ನು ಚೂರುಚೂರು ಮಾಡಿವೆ. ಒಟ್ಟಾರೆ ಎಲ್ಲಾ ಬೀದಿಗಳಲ್ಲಿ ನಾಯಿಗಳ ಸಂಖ್ಯೆ ಹೆಚ್ಚಾಗಿದ್ದು, ಸಾರ್ವಜನಿಕರಿಗೆ ಕಿರಿಕಿರಿಯಾಗಿದೆ. ಅಲ್ಲದೆ, ಕೆಲವು ವಾರ್ಡ್‌ಗಳಲ್ಲಿ ಕೋತಿಗಳು ಮನೆಯೊಳಗೆ ನುಗ್ಗಿ ಮನೆಯಲ್ಲಿದ್ದ ಪದಾರ್ಥ ಗಳನ್ನು ಹೊತ್ತೊಯ್ಯುತ್ತಿವೆ. ಇದರಿಂದ ಜನರು ಕಂಗಾಲಾಗಿದ್ದಾರೆ.

ಇಲ್ಲಿನ ಬಸ್ ನಿಲ್ದಾಣದಲ್ಲಿ ಹಾಗೂ ರಸ್ತೆಗಳಲ್ಲಿ ಮಕ್ಕಳು, ದೊಡ್ಡವರ ಮೇಲೆ, ಆಡು, ಕುರಿಗಳ, ಹಸು, ಕರುಗಳ ಮೇಲೆ ಬೀದಿ ನಾಯಿಗಳು ದಾಳಿ ನಡೆಸಿರುವ ಉದಾಹರಣೆಗಳೂ ಇವೆ. ಬೆಳಿಗ್ಗೆ ಮತ್ತು ಸಂಜೆ ವಾಯುವಿಹಾರಕ್ಕೆ ತೆರಳುವವ ರಂತೂ ಬೀದಿ ನಾಯಿಗಳ ಭಯಕ್ಕೆ ಜೀವ ಕೈಯಲ್ಲಿ ಹಿಡಿದು ಸಾಗಬೇಕಿದೆ. ವಿದ್ಯಾರ್ಥಿಗಳು ಶಾಲಾ ಕಾಲೇಜುಗಳಿಗೆ ಹೋಗಿ ಬರಲು ಭಯ ಗೊಂಡಿದ್ದಾರೆ. ಪ್ರಯಾಣಿಕರು ದೂರದ ಊರುಗಳಿಗೆ ತೆರಳಲು ಬೆಳಿಗ್ಗೆ ೫ ಗಂಟೆ ವೇಳೆಗೆ ಬಸ್ ನಿಲ್ದಾಣಕ್ಕೆ ಬಂದರೆ ಬೀದಿ ನಾಯಿಗಳ ಹಿಂಡನ್ನು ಕಂಡು ಬೆಚ್ಚಿ ಬೀಳುವಂತಾಗಿದೆ.

ಇದನ್ನೂ ಓದಿ:-ಕುಕ್ಕರಹಳ್ಳಿ ಕೆರೆ ಸ್ವಚ್ಛತೆಗೆ ಗೋವಾದಿಂದ ದೋಣಿ ಖರೀದಿ

ಪಟ್ಟಣದಲ್ಲಿ ಬೀದಿ ನಾಯಿಗಳ ಹಾವಳಿ ನಿಯಂತ್ರಣ ಮಾಡುವಂತೆ ಹಲವಾರು ಬಾರಿ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಗಳಿಗೆ, ಅಧ್ಯಕ್ಷರು, ಸದಸ್ಯರುಗಳಿಗೆ ತಿಳಿಸಿದ್ದರೂ ಪ್ರಯೋಜನವಾಗಿಲ್ಲ ಎಂಬುದು ಸಾರ್ವಜನಿಕರ ಆರೋಪ.

ಬಸ್ ನಿಲ್ದಾಣ, ಮುಖ್ಯರಸ್ತೆಗಳಲ್ಲಿ ಸಾರ್ವಜನಿಕರು, ವಾಹನ ಸವಾರರಿಗೆ ಭೀತಿ; ಕ್ರಮ ಕೈಗೊಳ್ಳಲು ಪಪಂಗೆ ಆಗ್ರಹ ಬೀದಿ ನಾಯಿಗಳು ಹಿಂಡು ಹಿಂಡಾಗಿ ಬೈಕ್ ಸವಾರರನ್ನು ಅಟ್ಟಾಡಿಸಿಕೊಂಡು ಬರುತ್ತವೆ. ಇದರಿಂದ ಸಣ್ಣಪುಟ್ಟ ಅಪಘಾತಗಳೂ ಆಗುತ್ತಿವೆ. ರಸ್ತೆಯಲ್ಲಿ ಸಂಚರಿಸುವುದೇ ಕಷ್ಟವಾಗಿದೆ. -ಗೋವಿಂದರಾಜು(ಚಿಕು), ಸರಗೂರು

ಪತ್ರಿಕೆ ವಿತರಣೆಗೂ ಅಡ್ಡಿ
ಮುಂಜಾನೆ ದಿನಪತ್ರಿಕೆಗಳನ್ನು ವಿತರಿಸುವ ಹುಡುಗರನ್ನು ಕೂಡ ನಾಯಿಗಳು ಅಟ್ಟಾಡಿಸಿಕೊಂಡು ಬಂದು, ಹುಡುಗರು ಬಿದ್ದು ಬಂದ್ದಿದ್ದಾರೆ. ಈ ರೀತಿಯಾದರೆ ಪತ್ರಿಕೆ ವಿತರಿಸಲು ಯಾರೂ ಬರುವುದಿಲ್ಲ ಎಂದು ವಿತರಕರು ದೂರುತ್ತಾರೆ.

ಪಟ್ಟಣದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿ ಜನರ ಮೇಲೆ ದಾಳಿ ಮಾಡಿರುವ ವಿಚಾರ ನನ್ನ ಗಮನಕ್ಕೆ ಬಂದಿದೆ. ಬೀದಿ ನಾಯಿಗಳ ಹಾವಳಿ ನಿಯಂತ್ರಣ ಮಾಡಲು ಟೆಂಡರ್ ಆಹ್ವಾನಿಸಲಾಗಿದೆ. ಈ ಸಂಬಂಧ ಸಂಬಂಧಪಟ್ಟ ಇಲಾಖೆಯ ಗಮನಕ್ಕೆ ತಂದು ಚರ್ಚಿಸಿ, ಅವುಗಳಿಗೆ ಸಂತಾನಹರಣ ಶಸ್ತ್ರ ಚಿಕಿತ್ಸೆ ನಡೆಸುವ ಮುಖಾಂತರ ಸಮಸ್ಯೆ ಬಗೆಹರಿಸಲಾಗುವುದು. -ಎಸ್. ಕೆ. ಸಂತೋಷ್ ಕುಮಾರ್, ಮುಖ್ಯಾಧಿಕಾರಿ, ಸರಗೂರು ಪಪಂ

Tags:
error: Content is protected !!