Mysore
27
broken clouds

Social Media

ಬುಧವಾರ, 29 ಏಪ್ರಿಲ 2026
Light
Dark

ಆಡಳಿತ ಯಂತ್ರ ಕುಸಿದು, ಭ್ರಷ್ಟಾಚಾರ ಮಿತಿ ಮೀರಿದೆ : ರಾಜ್ಯ ಕಾಂಗ್ರೆಸ್‌ ವಿರುದ್ಧ ಬಿಜೆಪಿ ಕಿಡಿ

ಶ್ರೀರಂಗಪಟ್ಟಣ : ಕಬ್ಬಿಗೆ ವೈಜ್ಞಾನಿಕ ಬೆಲೆ ನಿಗದಿ ಮಾಡುವುದೂ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಬಿಜೆಪಿ ಕಾರ್ಯಕರ್ತರು ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು.

ಇಲ್ಲಿನ ತಾಲ್ಲೂಕು ಕಚೇರಿ ಎದುರು ಒಂದು ತಾಸಿಗೂ ಹೆಚ್ಚು ಕಾಲ ಪ್ರತಿಭಟನೆ ನಡೆಸಿದ ರೈತರು, ರಾಜ್ಯ ಸರ್ಕಾರದ ವಿರುದ್ಧ ಸಾಲು ಸಾಲು ಘೋಷಣೆಗಳನ್ನು ಕೂಗಿದರು.

ಬಿಜೆಪಿ ತಾಲ್ಲೂಕು ಅಧ್ಯಕ್ಷ ಪಿಹಳ್ಳಿ ರಮೇಶ್ ಮಾತನಾಡಿ, ಭತ್ತ ಮತ್ತು ಮೆಕ್ಕೆ ಜೋಳ ಕಟಾವು ಶುರುವಾಗಿದ್ದರೂ ಧಾನ್ಯ ಖರೀದಿ ಕೇಂದ್ರ ತೆರೆದಿಲ್ಲ. ಮೆಕ್ಕೆ ಜೋಳ ಮುಗ್ಗಲು ಹಿಡಿದು ರೈತರು ನಷ್ಟ ಅನುಭವಿಸುತ್ತಿದ್ದಾರೆ. ರೈತರ ಪ್ರತಿಭಟನೆ ಸಂದರ್ಭದಲ್ಲಿ ಮುಧೋಳದಲ್ಲಿ ೮೪ ಟ್ರಾಕ್ಟರ್‌ಗಳು ಸುಟ್ಟು ಹೋಗಿ, ಮೂರು ವಾರ ಕಳೆದರೂ ಸಂತ್ರಸ್ತ ರೈತರಿಗೆ ಪರಿಹಾರ ನೀಡಿಲ್ಲ. ಹೈನುಗಾರರಿಗೆ ಹಾಲಿನ ಪ್ರೋತ್ಸಾಹ ಧನ ನೀಡಲು ಸರ್ಕಾರ ಮೀನ ಮೇಷ ಎಣಿಸುತ್ತಿದೆ. ಎಲ್ಲ ಇಲಾಖೆಗಳಲ್ಲಿ ಭ್ರಷ್ಟಾಚಾರ ಮಿತಿ ಮೀರಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇದನ್ನು ಓದಿ: ಯುವಪೀಳಿಗೆ ಉದ್ಯಮಿಗಳಾಗುವತ್ತ ಹೆಚ್ಚು ಗಮನ ಹರಿಸಬೇಕು : ಸಚಿವ ಎನ್.ಚಲುವರಾಯಸ್ವಾಮಿ ಸಲಹೆ

ಪಕ್ಷದ ಮುಖಂಡ ಕೆ.ಎಸ್.ನಂಜುಂಡೇಗೌಡ ಮಾತನಾಡಿ, ರಾಜ್ಯ ಸರ್ಕಾರ ಕಬ್ಬಿಗೆ ಒಂದೊಂದು ಜಿಲ್ಲೆಯಲ್ಲಿ ಒಂದೊಂದು ದರ ನಿಗದಿ ಮಾಡಿದೆ. ಈ ತಾರತಮ್ಯ ಸರಿಪಡಿಸಿ ವೈಜ್ಞಾನಿಕ ಬೆಲೆ ನಿಗದಿ ಮಾಡಬೇಕು. ರಾಜ್ಯದಲ್ಲಿ ಹಲವು ದಿನಗಳಿಂದ ಕುರ್ಚಿಗಾಗಿ ಗುದ್ದಾಟ ನಡೆಯುತ್ತಿದೆ. ಆಡಳಿತ ಯಂತ್ರ ಕುಸಿದಿದೆ. ಅಭಿವೃದ್ಧಿ ಕೆಲಸಗಳು ಸಂಪೂರ್ಣ ಸ್ಥಗಿತಗೊಂಡಿವೆ. ಸರ್ಕಾರಿ ಕಚೇರಿಗಳು ಭ್ರಷ್ಟಾಚಾರದ ಕೂಪಗಳಾಗಿವೆ. ಜನ ಸಾಮಾನ್ಯರ ಕಷ್ಟ ಕೇಳುವವರೇ ಇಲ್ಲದಂತಾಗಿದೆ ಎಂದು ದೂರಿದರು.

ಬಿಜೆಪಿ ಜಿಲ್ಲಾ ಘಟಕದ ಉಪಾಧ್ಯಕ್ಷ ಹೊಸಹಳ್ಳಿ ಮಹದೇವು, ನಗರ ಘಟಕದ ಅಧ್ಯಕ್ಷ ಜಿ.ಇ. ಸುಧಾಕರ್, ಮುಖಂಡರಾದ ಶಾಮಿಯಾನ ಪುಟ್ಟರಾಜು, ಪುಟ್ಟರಾಮು, ಉಮೇಶ್ ಕುಮಾರ್, ಹೇಮಂತಕುಮಾರ್, ಕುಮಾರ್, ಕಿರಣ್‌ಸಿಂಗ್, ಅಭಿಷೇಕ್, ಸುನಿಲ್, ಪಾಲಹಳ್ಳಿ ಟೆಂಪೋ ಪ್ರಕಾಶ್, ಪುರಸಭೆ ಮಾಜಿ ಸದಸ್ಯರಾದ ಗಂಜಾಂ ಶಿವು, ಎಸ್.ಟಿ.ರಾಜು, ಮಹದೇವಸ್ವಾಮಿ, ಚಂದ್ರು, ದರಸಗುಪ್ಪೆ ಸುರೇಶ್, ಹೊಸೂರು ಶಿವರಾಜು, ಕೆಂಪೇಗೌಡ, ರಾಮಕೃಷ್ಣ, ಮಂಜುನಾಥ್, ರಘು, ಇತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Tags:
error: Content is protected !!