Mysore
27
clear sky

Social Media

ಬುಧವಾರ, 21 ಜನವರಿ 2026
Light
Dark

ಹುಲಿ ಸಾವು ಪ್ರಕರಣ : ನಾಗರಹೊಳೆ ಹುಲಿ ರಕ್ಷಿತಾರಣ್ಯದಲ್ಲಿ ಮುನ್ನೆಚ್ಚರಿಕೆ ಕ್ರಮ

Tiger Death Case: Precautionary Measures Taken at Nagarahole Tiger Reserve

ಹುಣಸೂರು: ಮಲೆ ಮಹದೇಶ್ವರ ವನ್ಯಧಾಮದಲ್ಲಿ 5 ಹುಲಿಗಳ ಹತ್ಯೆ ಬಳಿಕ ಇದೀಗ ನಾಗರಹೊಳೆ ಹುಲಿ ರಕ್ಷಿತಾರಣ್ಯದಲ್ಲಿ ಅಧಿಕಾರಿಗಳು, ಸಿಬ್ಬಂದಿ ಜಾಗೃತಗೊಂಡಿದ್ದು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದ್ದಾರೆ.

ಪ್ಯಾಟ್ರೋಲಿಂಗ್, ಉರುಳು ಪತ್ತೆ ಕಾರ್ಯ ಮುಂತಾದ ಕಾರ್ಯಗಳು ಅವಿರತವಾಗಿ ನಡೆಯುತ್ತಿವೆ. ವಾಡಿಕೆಯಂತೆ ನಡೆದುಕೊಂಡು ಬಂದಿರುವ ಪ್ಯಾಟ್ರೋಲಿಂಗ್ ಕಾರ್ಯವನ್ನು ಮತ್ತಷ್ಟು ಚುರುಕುಗೊಳಿಸಲಾಗಿದೆ. ಎಂ-ಸ್ಟೆಪ್ ತಂತ್ರಜ್ಞಾನದ ಮೂಲಕ ಪ್ಯಾಟ್ರೋಲಿಂಗ್ ಕಾರ್ಯಚಟವಟಿಕೆಗಳನ್ನು ಕೇಂದ್ರಸ್ಥಾನಕ್ಕೆ ರವಾನಿಸುವ ಕಾರ್ಯ ಸತತವಾಗಿ ನಡೆಯುತ್ತಿದೆ.

ಉರುಳು ಪತ್ತೆ ಕಾರ್ಯ, ಕಳ್ಳಬೇಟೆ ತಡೆ ಶಿಬಿರಗಳಲ್ಲಿ ದಿನವಿಡೀ ಕಣ್ಗಾವಲು ಹಾಕಲಾಗಿದೆ. ಈ ನಡುವೆ ವನ್ಯಜೀವಿಗಳು ಕಾಡು ಬಿಟ್ಟು ತೆರಳದಂತೆ ಅಗತ್ಯ ನೀರು, ಆಹಾರ ಸಿಗುವಂತಾಗಲು ಕ್ರಮ ವಹಿಸಲಾಗುತ್ತಿದೆ.

ಉರುಳು ಪತ್ತೆ ಕಾರ್ಯ: ನುಣುಪಾದ ಮತ್ತು ಗಟ್ಟಿಯಾದ ತಂತಿಯೊಂದನ್ನು ಪ್ರಾಣಿಯ ತಲೆ ಒಳಹೋಗುವಷ್ಟು ಅಗಲಕ್ಕೆ ವೃತ್ತಾಕಾರವಾಗಿ ಸುತ್ತಿ ಕುಣಿಕೆ ಹಾಕಿ ಪ್ರಾಣಿಗಳು ನುಸುಳಬಹುದಾದ ಪೊದೆಗಳು, ಗಿಡ ಗಂಟಿಗಳ ನಡುವೆ ಬಲವಾಗಿ ಎರಡೂ ಬದಿಯಿಂದ ಕಟ್ಟಿರುತ್ತಾರೆ. ತಂತಿಯನ್ನು ಗಮನಿಸದ ಪ್ರಾಣಿಗಳು ಪೊದೆಯೊಳಗೆ ನುಗ್ಗುವಾಗ ತಂತಿ ಕೊರಳನ್ನು ಬಿಗಿದು ಅಲ್ಲೇ ಒದ್ದಾಡಿ ಪ್ರಾಣ ಬಿಡುತ್ತವೆ. ಕಾಡಿನ ಗಡಿಭಾಗದ ಪೊದೆಗಳಲ್ಲಿ ಬೇಟೆಗಾರರು ಇದನ್ನು ಇರಿಸುವ ಮೂಲಕ ಕಾಡುಪ್ರಾಣಿಗಳನ್ನು ಬೇಟೆಯಾಡುತ್ತಾರೆ. ಇದೀಗ ಉರುಳು ಪತ್ತೆ ಕಾರ್ಯವನ್ನು ಅರಣ್ಯ ಸಿಬ್ಬಂದಿ ಚುರುಕುಗೊಳಿಸಿದ್ದಾರೆ.

ಕಳ್ಳಬೇಟೆ ತಡೆ ಶಿಬಿರದಲ್ಲಿ ಕಟ್ಟೆಚ್ಚರ: ಅರಣ್ಯದೊಳಗೆ ಅಕ್ರಮ ಬೇಟಿ ನಿಗ್ರಹಕ್ಕೆ ಮುಖ್ಯ ಭಾಗಗಳಲ್ಲಿ ಕಳ್ಳಬೇಟೆ ತಡೆ ಶಿಬಿರವನ್ನು ಸ್ಥಾಪಿಸಲಾಗುತ್ತದೆ. ಶಿಬಿರದ ಸಿಬ್ಬಂದಿ ಕೇವಲ ಕಳ್ಳ ಬೇಟೆಗಾರರ ಪತ್ತೆ ಕಾರ್ಯ ಮಾತ್ರ ಮಾಡುವುದಿಲ್ಲ. ಬದಲಾಗಿ ಅರಣ್ಯ ಸಂರಕ್ಷಣೆಗೆ ಅವಶ್ಯವಾದ ಬೀಟ್‌ಗಳು, ಆಕಸ್ಮಿಕ ಬೆಂಕಿ ಅವಘಡ ಗುರುತಿಸುವುದು, ತಪ್ಪಿಸುವ ಜವಾಬ್ದಾರಿಯೂ ಇದೆ. ವೀರನಹೊಸಳ್ಳಿ ವಲಯದಲ್ಲಿ ಸ್ಥಾಪಿಸಲಾದ ಮಣಿಕಂಠನ್ ಶಿಬಿರ ಎರಡು ಅಂತಸ್ತುಗಳನ್ನು ಹೊಂದಿದೆ. ನಾಗರಹೊಳೆ ರಾಷ್ಟ್ರೀಯ ಉದ್ಯಾನವನದದ 8 ವಲಯ ವ್ಯಾಪ್ತಿಯಲ್ಲಿ ಒಟ್ಟು 54 ಕಳ್ಳಬೇಟೆ ತಡೆ ಶಿಬಿರ ಸ್ಥಾಪಿಸಲಾಗಿದೆ. ಹುಣಸೂರು ವಲಯ ವ್ಯಾಪ್ತಿಯಲ್ಲಿ ಅತಿಹೆಚ್ಚು 11 ಕ್ಯಾಂಪ್ ಗಳು, ಆನೆಚೌಕೂರು ವಲಯ ವ್ಯಾಪ್ತಿಯಲ್ಲಿ 10, ವೀರನಹೊಸಹಳ್ಳಿಯಲ್ಲಿ 8, ಕಲ್ಲಹಳ್ಳದಲ್ಲಿ 5, ನಾಗರಹೊಳೆಯಲ್ಲಿ 4, ಮೇಟಿಕುಪ್ಪೆಯಲ್ಲಿ 6, ಅಂತರಸಂತೆಯಲ್ಲಿ 4 ಮತ್ತು ಡಿ.ಬಿ.ಕುಪ್ಪೆ ವಲಯ ವ್ಯಾಪ್ತಿಯಲ್ಲಿ 6 ಶಿಬಿರಗಳನ್ನು ಸ್ಥಾಪಿಸಲಾಗಿದೆ. 6-7 ವರ್ಷಗಳ ಹಿಂದೆ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಸುತ್ತ ಇದ್ದ 200 ಚದರ ಕಿ.ಮೀ.ಗೂ ಅಧಿಕ ಬಫರ್‌ಜೋನ್ ಪ್ರದೇಶವನ್ನೂ ವನ್ಯಜೀವಿ ವಿಭಾಗಕ್ಕೆ ಸೇರ್ಪಡೆ ಮಾಡಿಕೊಳ್ಳಲಾಯಿತು. ಇದಾದ ಬಳಿಕ ನಾಗರಹೊಳೆ ಉದ್ಯನವನದ ವಿಸ್ತಾರ 643 ಚದರ ಕಿ.ಮೀ.ಗಳಿಂದ 843 ಚದರ ಕಿ.ಮೀ.ಗಳಿಗೆ ಹೆಚ್ಚಾಗಿದೆ.

ಜೀವಜಲ ವೃದ್ಧಿಗಾಗಿ ಸಂಘ ಸಂಸ್ಥೆಗಳ ನೆರವು ಪಡೆಯಲಾಗುತ್ತಿದ್ದು, ಕೆರೆಗಳನ್ನು ಅಭಿವೃದ್ಧಿಪಡಿಸಿ, ಕಾಡಿನಲ್ಲೇ ವನ್ಯಜೀವಿಗಳಿಗೆ ನೀರು ಮತ್ತು ಆಹಾರ ಸಿಗುವಂತಾಗಲು ಇಲಾಖೆ ಸಿಬ್ಬಂದಿ ಶ್ರಮಿಸುತ್ತಿದ್ದಾರೆ.

Tags:
error: Content is protected !!