ಬೆಂಗಳೂರು: ನಗರ ವ್ಯವಸ್ಥೆ ಬಗ್ಗೆ ಟೀಕೆ ಮಾಡುವುದನ್ನು ಬಿಟ್ಟು, ಸುಧಾರಣೆಗೆ ಸಲಹೆ ಕೊಡಲಿ ಎಂದು ಉದ್ಯಮಿ ಮೋಹನ್ದಾಸ್ ವಿರುದ್ಧ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ್ ಕುಟುಕಿದ್ದಾರೆ.
ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪದೇ ಪದೇ ಹೀಗೆ ಹೇಳಿಕೆ ನೀಡುತ್ತಿರುವ ಉದ್ಯಮಿ ಪೈ ಅವರ ಮನಸ್ಸಿನಲ್ಲಿ ಏನಿದೆಯೋ ಎಂಬುದು ತಿಳಿದಿಲ್ಲ. ಪೈ ಕೂಡ ಈ ನಗರದಿಂದಲೇ ಲಾಭ ಮಾಡಿಕೊಂಡವರು. ಈಗ ಹುಬ್ಬಳ್ಳಿಗಾಗಲಿ, ಮೈಸೂರಿಗಾಗಲಿ ಹೋಗುವುದಿಲ್ಲ ಎಂದು ಪೈ ವಿರುದ್ಧ ಹರಿಹಾಯ್ದಿದ್ದಾರೆ.
ಮೋದಿ ಸರ್ಕಾರ ಏನೇ ಮಾಡಿದರೂ ಸರಿ, ಸಿದ್ದರಾಮಯ್ಯ ಸರ್ಕಾರ ಮಾಡಿದ್ದೆಲ್ಲವೂ ತಪ್ಪು ಎನ್ನುವ ಮನಸ್ಥಿತಿಯಲ್ಲಿ ಈ ರೀತಿಯ ಹೇಳಿಕೆ ನೀಡುತ್ತಾರೆ. ಇಂತಹ ಹೇಳಿಕೆಗಳಂದ ಪೈ ದೊಡ್ಡ ಮನುಷ್ಯರಾಗುವುದಿಲ್ಲ ಎಂದು ಚಾಟಿ ಬೀಸಿದರು.
ಕರ್ನಾಟಕದ ಸಮಗ್ರ ಅಭಿವೃದ್ದಿ ನಮ್ಮ ಆದ್ಯತೆಯಾಗಿದೆ. ಯಾರೇ ಆಗಲಿ ಈ ವಿಚಾರವಾಗಿ ಸಲಹೆ ಕೊಡಬಹುದು. ಪೈ ಅವರು ನನ್ನನ್ನಾಗಲಿ, ಸಿಎಂ, ಡಿಸಿಎಂ ಅಥವಾ ಐಟಿ ಸಚಿವರನ್ನಾದರೂ ಕಾಣಬಹುದು ಎಂದರು.
ಈ ಹಿಂದೆ ಪೈ ಮಳೆಗಾಲದಲ್ಲಿ ಬೆಂಗಳೂರಿನ ಒಂದು ಕಡೆ ಪ್ರವಾಹ ಉಂಟಾದಾಗ ವಾಗ್ದಾಳಿ ಮಾಡಿದ್ದರು. ಆದರೆ, ಆಗ ಚೆನ್ನೈ ನಗರವೇ ಜಲಾವೃತವಾದರೂ ಜಾಣಮೌನ ವಹಿಸಿದ್ದರು. ಬಿಜೆಪಿ ನಮ್ಮ ಕಾರ್ಯಕ್ರಮಗಳನ್ನೇ ನಕಲು ಮಾಡುತ್ತಿದೆ ಇದನ್ನು ಕಂಡರೂ ಇವರೇಕೆ ಸುಮ್ಮನಿದ್ದಾರೆ ಎಂದು ಟಾಂಗ್ ಕೊಟ್ಟರು.
ತೆಲಂಗಾಣಕ್ಕೆ ನೀರು ಬಿಟ್ಟಿರುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ಕುಡಿಯುವ ಉದ್ದೇಶಕ್ಕಾಗಿ ಆಲಮಟ್ಟಿ ಅಣೆಕಟ್ಟೆಯಿಂದ ತೆಲಂಗಾಣಕ್ಕೆ 1.24 ಟಿಎಂಸಿ ಅಡಿ ನೀರು ಬಿಟ್ಟಿದೆ. ಕೆಲವೊಂದು ವಿಚಾರಗಳನ್ನು ಮಾನವೀಯವಾಗಿ ನೋಡಬೇಕಾಗುತ್ತದೆ ಎಂದು ಸ್ಪಷ್ಟಪಡಿಸಿದರು.