ಬೆಂಗಳೂರು: ಅಧಿಕಾರ ಹಂಚಿಕೆಯ ಬಗ್ಗೆ ಯಾವುದೇ ಗೊಂದಲ ಇಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ.
ರಾಜ್ಯದಲ್ಲಿನ ರಾಜಕೀಯ ಗೊಂದಲಗಳನ್ನು ಆದಷ್ಟು ಶೀಘ್ರವಾಗಿ ಬಗೆ ಹರಿಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಿರುವ ಡಿ.ಕೆ.ಶಿವಕುಮಾರ್, ಗೊಂದಲಗಳೇ ಇಲ್ಲ. ಖರ್ಗೆ ಅವರು ಹೇಳಿಕೆ ನೀಡಿದ್ದರೆ ಅವರ ಬಳಿಯೇ ಸ್ಪಷ್ಟನೆ ಕೇಳಿ ಎಂದು ಮಾರ್ನುಡಿದರು.
ವಿಧಾನಸೌಧದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಬಾರಿ ಬೇಸಿಗೆ ಭೀಕರವಾಗಿತ್ತು. ಹೆಚ್ಚು ಮಳೆ ಬರಬೇಕೆಂದು ಈಗಲೂ ದೇವರಿಗೆ ಕೈ ಮುಗಿದು ಪ್ರಾರ್ಥಿಸುತ್ತೇನೆ. ಮಳೆಯಿಂದ ಎದುರಾಗುವ ಸಮಸ್ಯೆಗಳನ್ನು ನಿವಾರಿಸಲು ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳುತ್ತೇವೆ. ಮುಂದಿನ ದಿನಗಳಲ್ಲಿ ಮಳೆ ಕಡಿಮೆಯಾಗುವ ಮುನ್ಸೂಚನೆ ಇದೆ. ಶರಾವತಿಯಲ್ಲಿ ನೀರಿನ ಕೊರತೆಯಾದರೆ ವಿದ್ಯುತ್ ಉತ್ಪಾದನೆ ಸಮಸ್ಯೆಯಾಗುತ್ತಿದೆ ಎಂದರು.
ಮೇ.3ರಂದು ನಾನು ತುಂಗಾಭದ್ರ ಭಾಗದ ಪರಿಶೀಲನೆಗೆ ಪ್ರವಾಸ ಕೈಗೊಳ್ಳುತ್ತಿದ್ದೇನೆ. ಕಾವೇರಿ ನದಿಯಿಂದ ತಮಿಳುನಾಡಿಗೆ 177 ಟಿಎಂಸಿ ನೀರು ಬಿಡಲು ಆದೇಶವಾಗಿದೆ. ಈ ಕಾರಣಕ್ಕೆ ಮಳೆಯಾದಷ್ಟು ಉತ್ತಮ ಎಂದರು.
ರಸ್ತೆಗಳಲ್ಲಿ ಹಳೆಯ ಮರದ ಕೊಂಬೆಗಳಿದ್ದರೆ ಅವುಗಳನ್ನು ಪೊಲೀಸರು ಮತ್ತು ಪಾಲಿಕೆ ಅಧಿಕಾರಿಗಳು ಜಂಟಿ ಕಾರ್ಯಾಚರಣೆ ಮೂಲಕ ತೆರವುಗೊಳಿಸಲಿದ್ದಾರೆ. ಈಗಾಗಲೇ ಹಳೆಯ ಕೊಂಬೆಗಳನ್ನು ಪಟ್ಟಿ ಮಾಡಲಾಗುತ್ತಿದೆ. ಸಹಾಯವಾಣಿ ಆರಂಭವಾಗಿದೆ. ಅಧಿಕಾರಿಗಳು ಸಮಸ್ಯೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡುತ್ತಿದ್ದಾರೆ ಎಂದರು.
ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ಇಂದು ವಿಧಾನಸಭೆಯಲ್ಲಿ ಬೆಂಗಳೂರು ಪಾಲಿಕೆ ಅಧಿಕಾರಿಗಳ ಸಭೆ ನಡೆಸಿ, ಅಗತ್ಯ ಸಲಹೆ ಸೂಚನೆ ನೀಡಲಾಗುವುದು ಎಂದರು.
ಅಟಲ್ ಬಿಹಾರಿ ವಾಜಪೇಯಿ ವೈದ್ಯಕೀಯ ಕಾಲೇಜಿಗೆ ಹೊಂದಿಕೊಂಡತಹ ಕಾಂಪೌಂಡ್ ಕುಸಿತವಾಗಿರುವುದಕ್ಕೆ ಅಧಿಕಾರಿಗಳ ನಿರ್ಲಕ್ಷ್ಯ ಎಂದು ಹೇಳಲು ನಾನು ಬಯಸುವುದಿಲ್ಲ. ಗೋಡೆಯ ಹಿಂದೆ ಮಣ್ಣು ತುಂಬಿದ್ದರು. ಅದರ ಒತ್ತಡದಿಂದಾಗಿ ಕಾಂಪೌಂಡ್ ಕುಸಿದಿದೆ. ಗೋಡೆಯ ಪಕ್ಕದಲ್ಲಿ ಇನ್ನು ಮುಂದೆ ಅಲ್ಲಿ ಕೂರಿಸಬಾರದು ಎಂದು ನಿನ್ನೆ ರಾತ್ರಿಯೇ ಆದೇಶ ನೀಡಿದ್ದೇನೆ. ಅದಷ್ಟೇ ಅಲ್ಲ ಯಾವುದೇ ಭಾಗದಲ್ಲಾದರೂ ಶಿಥಿಲಗೋಡೆಗಳ ಬಳಿ ಬೀದಿ ಬದಿ ವ್ಯಾಪಾರಿಗಳನ್ನು ಕೂರಿಸಬಾರದು ಎಂದು ಸೂಚನೆ ನೀಡಿರುವುದಾಗಿ ತಿಳಿಸಿದರು.





