ಮೈಸೂರು: ಹಿರಿಯ ರಾಜಕೀಯ ಮುತ್ಸದ್ಧಿಗಳು ಆಡಳಿತ ನಡೆಸಿದ ವಿಧಾನಸೌಧದಲ್ಲಿ ನನ್ನನ್ನೂ ಸೇರಿಕೊಂಡಂತೆ ಎಲ್ಲ ರಾಜಕೀಯ ಪಕ್ಷಗಳ ನಾಯಕರ ಧೋರಣೆಯಿಂದ ಕೊಡು-ಕೊಳ್ಳುವ ವ್ಯವಸ್ಥೆ ಬಂದು ಬಿಟ್ಟಿದೆ ಎಂದು ವಿಧಾನ ಪರಿಷತ್ ಸದಸ್ಯ ಅಡಗೂರು ಎಚ್.ವಿಶ್ವನಾಥ್ ವಿಷಾದ ವ್ಯಕ್ತಪಡಿಸಿದರು.
ಮೈಸೂರಿನ ಕನ್ನಡ ಚಳವಳಿ ಕೇಂದ್ರ ಸಮಿತಿ ಹಾಗೂ ಕರ್ನಾಟಕ ಸೇನಾ ಪಡೆಯ ಸಂಯುಕ್ತಾಶ್ರಯದಲ್ಲಿ ನಗರದ ಜಿಲ್ಲಾ ಪತ್ರಕರ್ತರ ಭವನದಲ್ಲಿ ಶನಿವಾರ ನಡೆದ ಬಸವ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯದ 7 ಕೋಟಿ ಜನರ ಪ್ರಾಧಿಕಾರವಾಗಿರುವ ವಿಧಾನಸೌಧದಲ್ಲಿ ಈ ಹಿಂದೆ ಎಂತಹ ನಾಯಕರು, ಮುತ್ಸದ್ಧಿಗಳು ಆಡಳಿತ ನಡೆಸಿದ್ದರು. ಹಿರಿಯರು ಓಡಾಡಿದ ಜಾಗದಲ್ಲಿ ರಾಜಕೀಯ ಪಕ್ಷಗಳ ನಾಯಕರ ಧೋರಣೆಯಿಂದ ಕನ್ನಡವನ್ನು ಮಾರಬಹುದು, ಸಂಸ್ಕೃತಿಯನ್ನೂ ಮಾರಬಹುದು ಎಂದು ವಿಷಾಧಿಸಿದರು.
ಅಂತಹ ಹಿರಿಯರು ಆಡಳಿತ ನಡೆಸಿದ ವಿಧಾನಸೌಧವೂ ಮಾಲ್ ಆಗಿ ಪರಿವರ್ತನೆಯಾಗಿ ಬಿಟ್ಟಿದೆ ಎಂದು ಪ್ರಸ್ತುತ ಸ್ಥಿತಿ ಬಗ್ಗೆ ವಿಷಾದದಿಂದ ಹೇಳಿದರು.