ದಾವಣಗೆರೆ: ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಬಸವಣ್ಣನವರ ಕುರಿತಾದ ನೀಡಿರುವ ವಿವಾದದ ಹೇಳಿಕೆಗೆ ಕಾಂಗ್ರೆಸ್ನ ಹಿರಿಯ ಶಾಸಕ ಹಾಗೂ ಅಖಿಲ ಭಾರತ ವೀರಶೈವ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಪ್ರತಿಕ್ರಿಯಿಸಿದ್ದು ಎಚ್ಚರಿಕೆ ನೀಡಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ವಿಶ್ವಗುರು ಬಸವಣ್ಣನವರ ಬಗ್ಗೆ ಸುಳ್ಳು ಹೇಳಿಕೆಗಳನ್ನು ನೀಡಿ ಬಾಯಿಗೆ ಬಂದಂತೆ ಮಾತನಾಡಿದರೆ ಹುಷಾರ್. ಹಾಗೆ ಮಾತನಾಡದೇ ನಿನ್ನ ಬಾಯಿಗೆ ನೀನೆ ಬೀಗ ಹಾಕೀಕೊಂಡರೆ ಒಳ್ಳೆಯದು, ಇಲ್ಲ ಅಂದರೆ ನಾವು ಬೀಗ ಹಾಕ್ತೇವೆ ಎಂದು ಯತ್ನಾಳ್ ವಿರುದ್ಧ ಗುಡುಗಿದರು.
ಬಸವಣ್ಣನವರು ಹೊಳೆಗೆ ಹಾರಿ ಸತ್ತರು ಎನ್ನುತ್ತೀರಾ. ಇನ್ನೊಂದು ಕಡೆ ವೀರಶೈವ ಮಹಾಸಭಾ ಅಂದರೆ ಭೀಮಣ್ಣ ಖಂಡ್ರೆ, ಯಡಿಯೂರಪ್ಪ, ಶಾಮನೂರು ಶಿವಶಂಕರಪ್ಪ ಅಂತೀರಾ. ಮಹಾಸಭಾ ಎಂದರೆ ಏನೆಂದುಕೊಂಡಿದ್ದೀರಿ? ಇಂತಹ ಹೇಳಿಕೆಗಳನ್ನು ನಾವು ಸಹಿಸುವುದಿಲ್ಲ ಎಂದು ಕಿಡಿಕಾರಿದರು.
ಬಸವಣ್ಣ ಅವರು ಹೊಳೆಗೆ ಹಾರಿದರು ಎನ್ನುವ ನಿಮ್ಮನ್ನೇ ಹೊಳೆಗೆ ಹಾರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.





