Mysore
27
thunderstorm

Social Media

ಮಂಗಳವಾರ, 02 ಜೂನ್ 2026
Light
Dark

ಪ್ರಜ್ವಲ್‌ ರೇವಣ್ಣ ಪ್ರಕರಣ: ತೆನೆಹೊತ್ತ ಮಹಿಳೆ ಪೆನ್‌ಡ್ರೈವ್‌ ಹೊರಬೇಕಾಗುತ್ತದೆ: ಡಿಕೆ ಸುರೇಶ್‌

ಬೆಂಗಳೂರು: ಹಾಸನ ಸಂಸದ ಪ್ರಜ್ವಲ್‌ ರೇವಣ್ಣ ವಿರುದ್ಧದ ಲೈಂಗಿಕ ಕಿರುಕುಳ ಆರೋಪಕ್ಕೆ ಸಂಬಂಧಿಸಿದಂತೆ ಜೆಡಿಎಸ್‌ ಹಾಗೂ ಕಾಂಗ್ರೆಸ್‌ ಕಾರ್ಯಕರ್ತರ ನಡುವೆ ಕೆಸರೆರಚಾಟ ಏರ್ಪಟ್ಟಿದೆ. ತನ್ನನ್ನು ಹಾಗೂ ತನ್ನ ಅಣ್ಣ ಡಿಕೆ ಶಿವಕುಮಾರ್‌ ಅವರನ್ನು ಚಿಲ್ಲರೆ ಸಹೋದರರು, ಅವರದು ʼ420 ಕುಟುಂಬʼ ಎಂದು ಹೇಳಿದ್ದ ಹೆಚ್‌ಡಿ ಕುಮಾರಸ್ವಾಮಿಗೆ ತಿರುಗೇಟು ನೀಡಿರುವ ಡಿಕೆ ಸುರೇಶ್‌ ತೆನೆಹೊತ್ತ ಮಹಿಳೆ ಪೆನ್‌ಡ್ರೈವ್‌ ಹೊರಬೇಕಾಗುತ್ತದೆ ಎಂದು ಟಾಂಗ್‌ ನೀಡಿದ್ದಾರೆ.

ನಗರದಲ್ಲಿ ಮಾತನಾಡಿದ ಅವರು ನಾನು ಅವರ ಕುಟುಂಬವನ್ನು 420 ಕುಟುಂಬ ಎಂದು ಕರೆಯುವುದಿಲ್ಲ. ಏಕೆಂದರೆ ಅದು ಮಾಜಿ ಪ್ರಧಾನಿಗಳ ಕುಟುಂಬ. ಅವರ ಕುಟುಂಬ, ಅಭಿಮಾನಿಗಳಿಗೆ ಬೇಸರ ಆಗಬಹುದು. ದೇವೇಗೌಡರ ಕುಟುಂಬದ ಆಸ್ತಿ ಪೆನ್‌ಡ್ರೈವ್‌ ಎಂದು ವ್ಯಂಗವಾಡಿದರು.

ಮಾಜಿ ಪ್ರಧಾನಿ ದೇವೇಗೌಡರ ಕುಟುಂಬದ ಆಸ್ತಿ ಪೆನ್‌ಡ್ರೈವ್‌ ಆಗಿದೆ. ತೆನೆಹೊತ್ತ ಮಹಿಳೆ ಪೆನ್‌ಡ್ರೈವ್‌ ಹೊರಬೇಕಾಗುತ್ತದೆ. ಇದು ಪೆನ್‌ಡ್ರೈವ್‌ ಕುಟುಂಬ. ಎಲ್ಲವನ್ನೂ ದೇಶ ಹಾಗೂ ರಾಜ್ಯದ ಜನರು ಗಮನಿಸುತ್ತಿದ್ದಾರೆ. ಬೇಕಿದ್ದರೆ ಅವರ ಮನಸಿಗೆ ಬಂದಹಾಗೆ ಬೈದುಕೊಳ್ಳಲಿ. ಹಾಸನ ಹೆಣ್ಣುಮಕ್ಕಳ ಮರ್ಯಾದೆ ಉಳಿಸಬೇಕು ಅಷ್ಟೇ. ನಾವು ಅವರನ್ನು ಕೆಣಕಿಲ್ಲ ಎಂದು ಡಿಕೆ ಸುರೇಶ್‌ ಹೇಳಿದರು.

ಅಲ್ಲದೇ ಪೆನ್‌ಡ್ರೈವ್‌ ಬಿಡುಗಡೆ ಮಾಡಿದ್ದು ಅವರದ್ದೇ ಮೈತ್ರಿ ಪಾರ್ಟ್‌ನರ್.‌ ಅವರ ಬಗ್ಗೆ ಮಾತನಾಡುವ ಧೈರ್ಯ ಕುಮಾರಸ್ವಾಮಿಗೆ ಇಲ್ಲ. ಹಾಗಾಗಿ ನಮ್ಮ ಮೇಲೆ ಮಾತನಾಡುತ್ತಿದ್ದಾರೆ ಎಂದೂ ಸಹ ಡಿಕೆ ಸುರೇಶ್‌ ಕುಮಾರಸ್ವಾಮಿ ವಿರುದ್ಧ ಕಿಡಿಕಾರಿದರು.

ಕುಮಾರಸ್ವಾಮಿ ಹೇಳಿದ್ದಿಷ್ಟು:

ಇನ್ನು ಪ್ರಜ್ವಲ್‌ ರೇವಣ್ಣ ಪ್ರಕರಣದ ವಿಚಾರವಾಗಿ ಪೆನ್‌ಡ್ರೈವ್‌ ಬಿಡುಗಡೆ ಮಾಡಿದ್ದು ಪ್ರಜ್ವಲ್‌ ಮಾಜಿ ಕಾರು ಡ್ರೈವರ್‌ ಕಾರ್ತಿಕ್‌ ಎಂಬ ಆರೋಪ ಕೇಳಿಬಂದಿದ್ದು, ಸದ್ಯ ಆತ ತಲೆಮರೆಸಿಕೊಂಡಿದ್ದಾನೆ ಎಂದು ಹೇಳಲಾಗುತ್ತಿದೆ. ಈ ಕುರಿತು ಮಾತನಾಡಿದ ಹೆಚ್‌ಡಿಕೆ ಪ್ರಜ್ವಲ್‌ ಕಾರು ಡ್ರೈವರ್‌ ಆಗಿದ್ದ ಕಾರ್ತಿಕ್‌ನನ್ನು ಮಲೇಷ್ಯಾಗೆ ಕಳುಹಿಸದ್ಯಾರು? ಆತ ವಿಡಿಯೊ ಬಿಡುಗಡೆ ಮಾಡಿದ್ದಾನಲ್ವಾ? ಆ ವಿಡಿಯೊ ಬಿಡುಗಡೆ ಮಾಡಿಸಿದ್ಯಾರು? ಆತ ದೇವರಾಜೇಗೌಡ ಕೈನಲ್ಲಿ ಪೆನ್‌ಡ್ರೈವ್‌ ಕೊಟ್ಟೆ ಎಂದು ಹೇಳಿದ್ದ. ಆದರೆ ಈಗ ಚಿಲ್ಲರೆ ಸಹೋದರರು ಕುಮಾರಸ್ವಾಮಿಯೇ ಬಿಟ್ಟಿರಬೇಕು ಎಂದು ಹೇಳುತ್ತಿದ್ದಾರೆ ಎಂದು ಆಕ್ರೋಶ ಹೊರಹಾಕಿದ್ದರು.

Tags:
error: Content is protected !!