Mysore
19
overcast clouds

Social Media

ಮಂಗಳವಾರ, 27 ಜನವರಿ 2026
Light
Dark

ಮೈಷುಗರ್ಸ್‌ ಅವ್ಯವಹಾರ ತನಿಖೆ : ಸಚಿವ ಶಿವಾನಂದಪಾಟೀಲ

ಬೆಂಗಳೂರು : ಈ ಹಿಂದೆ ಮೈಷುಗರ್ಸ್ ಅಭಿವೃದ್ಧಿಗೆ ಬಿಡುಗಡೆಯಾಗಿದ್ದ 100 ಕೋಟಿ ರೂ.ಗೂ ಅಧಿಕಹಣ ದುರ್ಬಳಕೆಯಾಗಿದ್ದು, ತನಿಖೆ ಮಾಡಿಸಲಾಗುವುದು ಎಂದು ಕಬ್ಬು ಅಭಿವೃದ್ಧಿ, ಸಕ್ಕರೆ, ಜವಳಿ ಹಾಗೂ ಕೃಷಿ ಮಾರುಕಟ್ಟೆ ಸಚಿವ ಶಿವಾನಂದಪಾಟೀಲ ತಿಳಿಸಿದ್ದಾರೆ.

ವಿಧಾನಪರಿಷತ್ತಿನಲ್ಲಿ ಮಧುಜಿ. ಮಾದೇಗೌಡ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ನಮ್ಮ ಸರ್ಕಾರ ಅಧಿಕಾರಕೆ ಬಂದ ನಂತರ ಮೈಷುಗರ್ಸ್ ಅಭಿವೃದ್ಧಿಗೆ ಕ್ರಮಕೈಗೊಂಡಿದ್ದು, ಪ್ರತಿಶತ 3.5ರಷ್ಟಿದ ಸಕ್ಕರೆ ಇಳುವರಿ ಪ್ರಮಾಣ ಈಗ ಪ್ರತಿಶತ 8ರಷ್ಟಿದೆ. ಸಹ ವಿದ್ಯುತ್ ಘಟಕವನ್ನೂ ನಮ್ಮ ಸರ್ಕಾರ ಬಂದ ನಂತರವೇ ಆರಂಭ ಮಾಡಲಾಗಿದೆ ಎಂದು ತಿಳಿಸಿದರು.

12.21 ಲಕ್ಷ ಯೂನಿಟ್ ವಿದ್ಯುತ್ ಉತ್ಪಾದನೆ ಮಾಡಲಾಗಿದ್ದು, 7.28 ಲಕ್ಷ ಯೂನಿಟ್‌ಗಳನು ಕಾರ್ಖಾನೆಗೆ ಬಳಕೆಮಾಡಲಾಗಿದೆ. 4.93 ಲಕ್ಷ ಯೂನಿಟ್‌ಗಳನ್ನು ಸೆಸ್ಕ್‌ಗೆ ಪೂರೈಕೆಮಾಡಲಾಗಿದೆ. ಪ್ರತಿ ಯೂನಿಟ್‌ಗೆ 5.91 ರೂ.ಗಳಂತೆ 29.14 ಲಕ್ಷ ರೂ. ಆದಾಯ ಬಂದಿದೆ. ಉತ್ಪಾದಿಸಿದ ಎಲ್ಲ ವಿದ್ಯುತ್ತನ್ನು ಸೆಸ್ಕ್‌ಗೆ ಪೂರೈಕೆ ಮಾಡಿದರೆ 9.48 ಕೋಟಿ ರೂ. ಆದಾಯ ಬರಲಿದೆ ಎಂದರು.

ಬೆಂಗಳೂರಿನಲ್ಲಿರುವ ಮೈಷುಗರ್ಸ್ ಕಂಪೆನಿಯ ಆಡಳಿತ ಕಚೇರಿಯ ಆಸ್ತಿತೆರಿಗೆ 6.50 ಕೋಟಿ ರೂ.ಗಳಷ್ಟಿದ್ದು, ಏಕ ತೀರುವಳಿ ಅಡಿಯಲ್ಲಿ 2.04ಕೋಟಿ ರೂ. ಪಾವತಿಸಿ 4.50 ಕೋಟಿ ರೂ.ಗಳನ್ನು ಕಂಪೆನಿಗೆ ಉಳಿತಾಯ ಮಾಡಲಾಗಿದೆ. ಮೈಷುಗರ್ಸ್ ಕಂಪೆನಿ ಒಡೆತನದಲ್ಲಿ 235.10 ಎಕರೆ ಇದ್ದು, ಎಷ್ಟು ಒತ್ತುವರಿಯಾಗಿದೆ ಎಂಬ ಬಗ್ಗೆ ಸರ್ವೆ ಮಾಡಿಸಿ ಒತ್ತುವರಿ ತೆರವುಗೊಳಿಸಲಾಗುವುದು ಎಂದು ಹೇಳಿದರು.

Tags:
error: Content is protected !!