ಬೆಂಗಳೂರು: ಕಳೆದ ಹಲವು ದಿನಗಳಿಂದ ರಾಜ್ಯಾದ್ಯಂತ ತಾಪಮಾನ ಹೆಚ್ಚಾಗಿದ್ದು, ಜನರು ಹೈರಾಣಾಗಿದ್ದಾರೆ.
ಸುಡು ಬಿಸಿಲು ಹಾಗೂ ಸೆಖೆಯಿಂದಾಗಿ ಕರುನಾಡ ಜನರು ತತ್ತರಿಸಿ ಹೋಗಿದ್ದು, ತಂಪು ಪಾನೀಯಗಳ ಮೊರೆ ಹೋಗಿದ್ದಾರೆ.
ಭಾರೀ ಬಿಸಿಲಿನಿಂದ ಮನೆಯಿಂದ ಹೊರಬರಲು ಆಗದೇ ಬಿಸಿ ಗಾಳಿಯಿಂದ ಮನೆಯಲ್ಲೂ ಇರಲಾಗದೇ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ರಾಜ್ಯದಲ್ಲಿ ತಾಪಮಾನ ಮತ್ತಷ್ಟು ಹೆಚ್ಚಳವಾಗಲಿದ್ದು, ರಾತ್ರಿ ವೇಳೆಯೂ ಉಷ್ಣ ಅಲೆ ಬೀಸಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.
ಇನ್ನು ಉಷ್ಣಾಂಶ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಜನತೆಗೆ ಎಚ್ಚರಿಕೆ ನೀಡಿದ್ದು, ಬೆಳಿಗ್ಗೆ 11 ಗಂಟೆಯಿಂದ ಸಂಜೆ 4ರವರೆಗೆ ಅಗತ್ಯವಿದ್ದರಷ್ಟೇ ಹೊರಗೆ ಬನ್ನಿ. ಬಾಯಾರಿಕೆಯಾಗದಿದ್ದರೂ ಪದೇ ಪದೇ ನೀರು ಕುಡಿಯಿರಿ. ಜಾನುವಾರುಗಳನ್ನು ಮರದ ನೆರಳಿನಲ್ಲಿ ಕಟ್ಟಿಹಾಕಿ. ಮಕ್ಕಳ ಆರೋಗ್ಯದ ಕಡೆಗೆ ಗಮನಹರಿಸಿ ಎಂದು ಸೂಚನೆ ನೀಡಿದೆ.





