ಮಂಗಳೂರು: ಜನರಿಗೆ ಶುದ್ಧ ಆಹಾರ ಪೂರೈಸುವ ನಿಟ್ಟಿನಲ್ಲಿ ತಜ್ಞರ ತಂಡದ ತಪಾಸಣೆ ನಿರಂತರವಾಗಿ ನಡೆಯಲಿದ್ದು, ಎರಡನೇ ಬಾರಿ ಲೋಪಗಳು ಕಂಡು ಬಂದರೆ ಮುಲಾಜಿಲ್ಲದೆ ಕಠಿಣಕ್ರಮ ಜರುಗಿಸಲಾಗುವುದು ಎಂದು ಆಹಾರ ಮತ್ತು ನಾಗರಿಕ ಸಚಿವ ಯು.ಟಿ.ಖಾದರ್ ಎಚ್ಚರಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆಹಾರ ಸುರಕ್ಷತಾ ಇಲಾಖೆ ಬೆಂಗಳೂರು ಕೇಂದ್ರಿತವಾಗಿ ನಡೆಸುತ್ತಿದ್ದ ತಪಾಸಣೆಗಳನ್ನು ರಾಜ್ಯಾದ್ಯಂತ ವಿಸ್ತರಿಸಲಾಗುವುದು ಎಂದು ಹೇಳಿದರು.
ಈಗಾಗಲೇ ಸಿಹಿ ತಯಾರಿಕಾ ಸಂಸ್ಥೆಗಳ ಮೇಲೆ ದಾಳಿ ನಡೆಸಿ, ಎರಡು ಘಟಕಗಳನ್ನು ಬಂದ್ ಮಾಡಿಸಲಾಗಿದೆ. ಉಳಿದ ಸಂಸ್ಥೆಗಳಿಗೆ ನೋಟೀಸ್ ನೀಡಲಾಗಿದೆ. ದಂಡ ವಿಧಿಸುವುದು ಸೇರಿದಂತೆ ಕಠಿಣಕ್ರಮಗಳನ್ನು ಕೈಗೊಳ್ಳಲಾಗುವುದು ಎಂದರು.
ಮಂಗಳೂರು, ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ಮೈಸೂರು ಸೇರಿದಂತೆ ವಿವಿಧ ನಗರಗಳಲ್ಲೂ ತಪಾಸಣೆ ನಡೆಸಲಾಗುವುದು. ಗುಣಮಟ್ಟ ರಕ್ಷಣೆ, ಕಲಬೆರಕೆ ರಹಿತ ಶುದ್ಧ ಆಹಾರ ಪೂರೈಕೆ ನಮ್ಮ ಆಧ್ಯತೆಯಾಗಿದೆ. ಈ ನಿಟ್ಟಿನಲ್ಲಿ ತಪಾಸಣೆಗಳು ನಿರಂತರವಾಗಿರುತ್ತವೆ. ವ್ಯಾಪಾರ ವಹಿವಾಟುಗಳು ನಡೆಯಬೇಕೆಂಬ ಕಾರಣಕ್ಕಾಗಿ ಮೊದಲ ಹಂತದ ತಪಾಸಣೆಯಲ್ಲಿ ಲೋಪಗಳು ಕಂಡು ಬಂದರೂ ಎಚ್ಚರಿಕೆ ನೀಡಿಲಾಗುವುದು. ಎರಡನೇ ಬಾರಿಯ ತಪಾಸಣೆಯಲ್ಲಿ ಈ ರೀತಿ ಲೋಪಗಳು ಕಂಡು ಬಂದರೆ ಮುಲಾಜಿಲ್ಲದೇ ಕಠಿಣಕ್ರಮ ಜರುಗಿಸಲಾಗುವುದು ಎಂದು ಖಡಕ್ ಎಚ್ಚರಿಕೆ ನೀಡಿದರು.




