ಓಂ ರಾವುತ್ ನಿರ್ದೇಶನದ ಚಿತ್ರ ಆದಿಪುರುಷ ಸಿನಿಮಾ ನಕಾರಾತ್ಮಕ ಕಾರಣಗಳಿಗಾಗಿಯೇ ಸಾಕಷ್ಟು ಸುದ್ದಿಯಾಗುತ್ತಿದೆ. ಟೀಸರ್ ಬಿಡುಗಡೆಯಾದಾಗಿನಿಂದಲೂ ಚಿತ್ರಕ್ಕೆ ಒಂದಿಲ್ಲೊಂದು ಸಂಕಷ್ಟ ಎದುರಾಗಿದೆ. ಪ್ರಭಾಸ್, ಕೃತಿ ಸನೋನ್ ಮತ್ತು ಸೈಫ್ ಅಲಿ ಖಾನ್ ಮುಖ್ಯ ಪಾತ್ರಗಳಲ್ಲಿ ನಟಿಸಿರುವ ಈ ಚಿತ್ರವು ರಾಮಾಯಣ ಮಹಾಕಾವ್ಯವನ್ನು ಆಧರಿಸಿದ್ದಾಗಿದೆ.
ಸಿನಿಮಾವು ಅನೇಕ ಧಾರ್ಮಿಕ ಗುಂಪುಗಳು, ವೀಕ್ಷಕರು ಮತ್ತು ಚಲನಚಿತ್ರ ವಿಮರ್ಶಕರಿಂದ ವಿಎಫ್ಎಕ್ಸ್, ಪಾತ್ರಗಳ ಚಿತ್ರಣ ಮತ್ತು ಸಂಭಾಷಣೆಗಳಿಗಾಗಿ ವ್ಯಾಪಕವಾಗಿ ಟೀಕೆಗೆ ಗುರಿಯಾಗಿದೆ. ಈ ಎಲ್ಲಾ ಹಿನ್ನಡೆಗಳ ನಡುವೆ, ಆದಿಪುರುಷ ಚಿತ್ರವು ಭಾರತದ ಮಾಜಿ ಬ್ಯಾಟರ್ ವೀರೇಂದ್ರ ಸೆಹ್ವಾಗ್ ಅವರ ರೂಪದಲ್ಲಿ ಮತ್ತೊಬ್ಬ ವಿಮರ್ಶಕನನ್ನು ಪಡೆದಿದೆ. ಸೆಹ್ವಾಗ್ ಕೂಡ ಇದೀಗ ತಮ್ಮ ನಿರಾಶೆಯನ್ನು ವ್ಯಕ್ತಪಡಿಸಿದ್ದಾರೆ.
Adipurush dekhkar pata chala Katappa ne Bahubali ko kyun maara tha ?
— Virender Sehwag (@virendersehwag) June 25, 2023
ಈ ಕುರಿತು ಟ್ವೀಟ್ ಮಾಡಿರುವ ಸೆಹ್ವಾಗ್, ‘ಆದಿಪುರುಷ್ ದೇಖ್ಕರ್ ಪಟ ಚಲಾ ಕಟ್ಟಪ್ಪ ನೆ ಬಾಹುಬಲಿ ಕೊ ಕ್ಯೂನ್ ಮಾರ ಥಾ. (ಆದಿಪುರುಷನನ್ನು ನೋಡಿದ ನಂತರ, ಕಟ್ಟಪ್ಪ ಬಾಹುಬಲಿಯನ್ನು ಏಕೆ ಕೊಂದಿದ್ದಾನೆಂದು ನನಗೆ ಅರಿವಾಯಿತು)’ ಎಂದು ಬರೆದಿದ್ದಾರೆ.
ಸೆಹ್ವಾಗ್ ಅವರ ಟ್ವೀಟ್ ಪ್ರಭಾಸ್ ಅವರ 2015ರ ಬ್ಲಾಕ್ಬಸ್ಟರ್ ಚಿತ್ರ ‘ಬಾಹುಬಲಿ: ದಿ ಬಿಗಿನಿಂಗ್’ ಅನ್ನು ಉಲ್ಲೇಖಿಸುತ್ತದೆ. ಚಿತ್ರದಲ್ಲಿ ಮುಖ್ಯ ಪಾತ್ರಧಾರಿ ಬಾಹುಬಲಿ ತನ್ನ ಚಿಕ್ಕಪ್ಪ ಕಟ್ಟಪ್ಪನಿಂದಲೇ ಅಂತ್ಯ ಕಾಣುತ್ತಾನೆ ಮತ್ತು ಕಟ್ಟಪ್ಪ ತನ್ನ ಸ್ವಂತ ಸೋದರಳಿಯನನ್ನು ಏಕೆ ಕೊಂದನು ಎಂಬ ಪ್ರಶ್ನೆಯೊಂದಿಗೆ ಆ ಚಿತ್ರವು ಕೊನೆಯಾಗಿತ್ತು.
ಆದಿಪುರುಷ ಸಿನಿಮಾ ಬಗ್ಗೆ ಹೇಳುವುದಾದರೆ, ಅಖಿಲ ಭಾರತ ಸಿನಿ ಕಾರ್ಮಿಕರ ಸಂಘವು ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಮುಂಬೈ ಪೊಲೀಸರಿಗೆ ಪತ್ರ ಬರೆದಿದ್ದು, ಚಿತ್ರದ ನಿರ್ಮಾಪಕ, ನಿರ್ದೇಶಕ ಮತ್ತು ಲೇಖಕರ ವಿರುದ್ಧ ಎಫ್ಐಆರ್ ದಾಖಲಿಸುವಂತೆ ಒತ್ತಾಯಿಸಿದೆ.
ಭಾರತದ ಮಾಜಿ ಬ್ಯಾಟರ್ ಸೆಹ್ವಾಗ್ ಇತ್ತೀಚೆಗೆ ಆಸ್ಟ್ರೇಲಿಯಾ ಟೆಸ್ಟ್ ನಾಯಕ ಪ್ಯಾಟ್ ಕಮ್ಮಿನ್ಸ್ ಅವರನ್ನು ಶ್ಲಾಘಿಸಿದರು. ಅವರು ‘ಮಿಸ್ಟರ್ ಕೂಲ್’ ಎಂಬ ಬಿರುದನ್ನು ಸಹ ನೀಡಿದರು. ಇದನ್ನು ಭಾರತದ ಮಾಜಿ ನಾಯಕ ಎಂಎಸ್ ಧೋನಿಗೆ ನೀಡಲಾಗಿದೆ.





